ಕನಕಪುರ: ಮನುಷ್ಯನ ದೈಹಿಕ ಆರೋಗ್ಯ ಮಾನಸಿಕ ಆರೋಗ್ಯದ ಮೇಲೆ ಅವಲಂಭಿತವಾಗಿರುತ್ತದೆ. ಹಾಗಾಗಿ ನಾವು ಮೊದಲು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಹೃದ್ರೋಗ ತಜ್ಞ ಡಾ.ಬಿ.ಸಿ. ಬೊಮ್ಮಯ್ಯ ತಿಳಿಸಿದರು.
ತಾಲೂಕಿನ ಹೊನ್ನಿಗನಹಳ್ಳಿ ಗ್ರಾಪಂ ಸಭಾಂಗಣದಲ್ಲಿ ಬುದ್ಧ ಜಯಂತಿ ಅಂಗವಾಗಿ ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಮತ್ತು ಅಮ್ಮ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಅಂಬೇಡ್ಕರ್ ಮತ್ತು ಗೌತಮ ಬುದ್ಧ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, ಮನುಷ್ಯನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಒಂದಕ್ಕೊಂದು ಸಂಬಂಧವಿರುತ್ತದೆ. ಹಾಗಾಗಿ ದೈಹಿಕ ಆರೋಗ್ಯ ಉತ್ತಮವಾಗಿರಬೇಕಾದರೆ ಮೊದಲು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಜಗತ್ತಿಗೆ ಶಾಂತಿ ಸಂದೇಶ ಸಾರಿದ ಗೌತಮ ಬುದ್ಧರ ತತ್ವಾದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡರೆ ದ್ವೇಷ, ಅಸೂಯೆ ಇದ್ಯಾವುದೂ ಇರುವುದಿಲ್ಲ. ಆಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಪ್ರತಿಯೋಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.
ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಮಾರ್ಗದರ್ಶನವನ್ನು ಜಗತ್ತಿಗೆ ಕೊಟ್ಟವರು ಗೌತಮ ಬುದ್ಧರು. ಹಾಗಾಗಿ ಜಗತ್ತಿನ ಬೇರೆ ಬೇರೆ ಮುಂದುವರಿದ ರಾಷ್ಟ್ರಗಳಲ್ಲಿ ಗೌತಮ ಬುದ್ಧರ ಜಯಂತಿ ಆಚರಿಸುವ ಸಂಸ್ಕೃತಿ ಬೆಳೆಸಿಕೊಂಡಿದ್ದಾರೆ. ಆದರೆ ಭಾರತದಲ್ಲಿ ಅಂತಹ ಆಚರಣೆಗಳು ನಡೆಯುವುದಿಲ್ಲ. ಗೌತಮ ಬುದ್ಧರು ಭಾರತದಲ್ಲಿ ಜನಿಸಿದರು ನಾವು ಅವರನ್ನು ನೆನೆಸಿಕೊಳ್ಳುವುದಿಲ್ಲ. ಬುದ್ಧ ಇರುವ ಜಾಗದಲ್ಲಿ ವಿಜ್ಞಾನಕ್ಕೆ ಮಾತ್ರ ಬೆಲೆ ಇರುತ್ತದೆ, ಮೌಡ್ಯಕ್ಕೆ ಬೆಲೆ ಇರುವುದಿಲ್ಲ, ಆತ್ಮಕ್ಕೆ ಬೆಲೆ ಇರುವುದಿಲ್ಲ ವ್ಯಕ್ತಿಗೆ ಬೆಲೆ ಇರುತ್ತದೆ, ಆತ್ಮ ಮತ್ತು ದೇವರ ಕಲ್ಪನೆಗಳನ್ನು ಗೌತಮ ಬುದ್ಧರು ನಿರಾಕರಿಸಿದ್ದರು. ಅದಕ್ಕಾಗಿ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಗೌತಮ ಬುದ್ಧರನ್ನು ಒಪ್ಪಿಕೊಂಡಿವೆ ಎಂದರು.ಗೌತಮ ಬುದ್ಧರ ಪಂಚಶೀಲ ತತ್ವಗಳನ್ನು ಅಷ್ಟಾಂಗ ಮಾರ್ಗಗಳನ್ನು ಸರಳತೆಯ ದಾರಿಗಳನ್ನ ನಾವು ಅರಿತುಕೊಳ್ಳದಿದ್ದರೆ ನಮ್ಮ ಮುಂದಿನ ಪೀಳಿಗೆಗೆ ಉತ್ತಮ ಸಮಾಜ ಮತ್ತು ಜೀವನ ಕೊಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಗೌತಮ ಬುದ್ಧರ ವೈಚಾರಿಕತೆ ಸಮಾಜಕ್ಕೆ ತಿಳಿಯಬೇಕು. ಆ ಹಿನ್ನೆಲೆಯಲ್ಲಿ ಪ್ರತಿವರ್ಷ ಗೌತಮ ಬುದ್ಧರ ಜಯಂತಿ ಆಚರಣೆ ಅಂಗವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪಿಡಿಒ ಮಹೇಶ್ ಮಾತನಾಡಿ, ಆರೋಗ್ಯವೇ ಮನುಷ್ಯನಿಗೆ ದೊಡ್ಡ ಸಂಪತ್ತು. ಆದರೆ ಸಂಪತ್ತು ಇದ್ದರು ಆರೋಗ್ಯ ಕೊಂಡುಕೊಳ್ಳಲು ಆಗುವುದಿಲ್ಲ. ಹಾಗಾಗಿ ಪ್ರತಿಯೊಬ್ಬರೂ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಗೌತಮ ಬುದ್ಧರು ಹಾಕಿ ಕೊಟ್ಟ ಯೋಗಾಸನದ ಮಾರ್ಗ ಮನುಷ್ಯನ ಆರೋಗ್ಯಕ್ಕೆ ಅತ್ಯುತ್ತಮವಾದದ್ದು. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಆರೋಗ್ಯ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಕಾರ್ಯಕ್ರಮದಲ್ಲಿ ಡಾ. ಸುಮಿತ್ರಾ ಬೊಮ್ಮಯ್ಯ, ಅದಿತಿ, ಸುಪ್ರಿಯ ಮಲ್ಲಿಗೆ, ಸುನಿಲ್, ಧಮ್ಮ ದೀವಿಗೆ ಟ್ರಸ್ಟ್ ಸದಸ್ಯ ಬಸವರಾಜು, ಮರಿಸ್ವಾಮಿ, ಕಾರ್ಯದರ್ಶಿ ಶಿವಮಾದು, ಗ್ರಾಪಂ ಸದಸ್ಯ ಲಿಂಗಣ್ಣ, ಕರ ವಸೂಲಿಗಾರ ಮುತ್ತೇಶ್, ಮುಖಂಡ ಉಮೇಶ್, ಪಶು ಪಾಲನಾ ಇಲಾಖೆ ನಿವೃತ್ತ ಅಧಿಕಾರಿ ಶ್ರೀಕಂಠ, ಸಾತನೂರು ಆರೋಗ್ಯ ಕೇಂದ್ರದ ವೈದ್ಯರು ಸಿಬ್ಬಂದಿ,ಆಶಾ ಕಾರ್ಯಕರ್ತೆಯರು, ಗ್ರಾಪಂ ಸಿಬ್ಬಂದಿ ಉಪಸ್ಥಿತರಿದ್ದರು.ಕೆ ಕೆ ಪಿ ಸುದ್ದಿ 02:ಕನಕಪುರ ತಾಲೂಕಿನ ಹೊನ್ನಿಗನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಂಡರು.