ತಾಪಮಾನ ಸಮತೋಲನಕ್ಕೆ ಗಿಡ ಬೆಳೆಸಿ: ಪೂಜಾರ

KannadaprabhaNewsNetwork | Published : Jun 7, 2024 12:31 AM

ಕನ್ನಡಪ್ರಭ ವಾರ್ತೆ ಗುಳೇದಗುಡ್ಡತಾಪಮಾನ ಸಮತೋಲನಕ್ಕೆ ಬರಬೇಕಾದರೆ ಪ್ರತಿಯೊಬ್ಬರೂ ಸಸಿ ಬೆಳೆಸುವ ಮನೋಭಾವ ಹೊಂದಬೇಕು ಎಂದು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಎಸ್.ಬಿ.ಪೂಜಾರ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಗುಳೇದಗುಡ್ಡತಾಪಮಾನ ಸಮತೋಲನಕ್ಕೆ ಬರಬೇಕಾದರೆ ಪ್ರತಿಯೊಬ್ಬರೂ ಸಸಿ ಬೆಳೆಸುವ ಮನೋಭಾವ ಹೊಂದಬೇಕು ಎಂದು ಸಾಮಾಜಿಕ ವಲಯ ಅರಣ್ಯ ಅಧಿಕಾರಿ ಎಸ್.ಬಿ.ಪೂಜಾರ ಎಚ್ಚರಿಸಿದರು.

ತಾಲೂಕಿನ ಸಾಮಾಜಿಕ ಅರಣ್ಯ ವಲಯದ ಅಡಗಲ್ ಬನಶ್ರೀ ಪಾಲನಾ ಕೇಂದ್ರದಲ್ಲಿ ಪರಿಸರ ಪ್ರೇಮಿ ಮತ್ತು ರೈತರಿಗೆ ಸಸಿ ವಿತರಿಸಿ ಮಾತನಾಡಿ, ಭೂ ಹೊದಿಕೆಯ ತಾಪಮಾನ ದಿನೇ ದಿನೆ ಹೆಚ್ಚುತ್ತಿದೆ. ಇದು ಜೀವಕೋಶದ ಮೇಲೆ ಗಂಭೀರ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ದಿನದಿಂದ ದಿನಕ್ಕೆ ತಾಪಮಾನ 40 ರಿಂದ 42 ಡಿಗ್ರಿ ಸೆಲ್ಸಿಯಸ್ ಹೆಚ್ಚಿ ನೈಸರ್ಗಿಕ ವೈಪರಿತ್ಯ ಉಂಟಾಗಿ ದುಷ್ಪರಿಣಾಮ ಕಂಡು ಬರುತ್ತಿದೆ. ಹೀಗಾಗಿ ಜನರು ಮನೆಯ ಸುತ್ತಮುತ್ತ, ಜಮೀನಿನಲ್ಲಿ ಸಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.

ಭೂಮಿ ಮೇಲೆ ಪ್ರತಿಶತ 33 ರಷ್ಟು ಅರಣ್ಯ ಹೊದಿಕೆ ಇರಬೇಕು. ಅರಣ್ಯ ಇಲಾಖೆಯವರಿಂದ ಮಾತ್ರ ಈ ಗುರಿ ತಲುಪಲು ಸಾಧ್ಯವಿಲ್ಲ. ಸಾರ್ವಜನಿಕರು, ರೈತರೂ ಕೂಡ ಇದಕ್ಕೆ ಕೈಜೋಡಿಸಬೇಕು ಅಂದಾಗ ಮಾತ್ರ ಸಾಧ್ಯ ಎಂದರು.

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರತಿಶತ 7 ರಷ್ಟು ಅರಣ್ಯಭೂಮಿ ಇದೆ. ಇದನ್ನು ಪ್ರತಿಶತ 33ಕ್ಕೆ ಮುಟ್ಟಿಸುವುದು ಇಲಾಖೆಯಿಂದ ಅಸಾಧ್ಯವಾದ ಮಾತು. ಕಾರಣ ಅದು ಸಾರ್ವಜನಿಕರ ಜವಾಬ್ದಾರಿಯೂ ಹೌದು. ಸಸಿ ನೆಡಲು ಅರಣ್ಯ ಇಲಾಖೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬಾದಾಮಿ ಸಾಮಾಜಿಕ ಅರಣ್ಯ ವಲಯದ ಅಡಗಲ್ ಬನಶ್ರೀ ನರ್ಸರಿಯಲ್ಲಿ ಬಾದಾಮಿ ಹಾಗೂ ಗುಳೇದಗುಡ್ಡ ತಾಲೂಕಿನ ರೈತ ಬಾಂಧವರಿಗೆ ವಿವಿಧ ತರಹದ ಸಸಿಗಳು ಲಭ್ಯವಿವೆ. ಆರ್.ಎಸ್.ಪಿ.ಡಿ. ಯೋಜನೆಯಡಿ ಸಾಗವಾನಿ,ನುಗ್ಗೆ, ಕ್ಯಾಸುರಿನ ಸಸಿಗಳು ಲಭ್ಯವಿವೆ ಎಂದು ಮಾಹಿತಿ ನೀಡಿದರು.

ಸಸಿಗಳಿಗೆ ಸಂಪರ್ಕಿಸಿ:

ಸಸಿಗಳಿಗಾಗಿ ಬಾದಾಮಿ-ಗುಳೇದಗುಡ್ಡ ವಲಯ ಅರಣ್ಯಾಧಿಕಾರಿ ಎಸ್.ಬಿ.ಪೂಜಾರ 7022116808, ಮಾರುತಿ ಹಣಬರ 8722713914, ಎಸ್.ಎಸ್.ಹುಲ್ಯಾಳ 8073353108 ಸಂಪರ್ಕಿಸಲು ತಾಲೂಕು ಸಾಮಾಜಿಕ ವಲಯ ಅರಣ್ಯಾಧಿಕಾರಿ ಎಸ್.ಬಿ.ಪೂಜಾರ ತಿಳಿಸಿದರು.