ಹೆಚ್ಚು ಸಾಲ ಮರುಪಾವತಿ ಪರಿಣಾಮ ಬ್ಯಾಂಕ್ಗೆ ಅನುಕೂಲ
ಪಿಎಲ್ಡಿ ಬ್ಯಾಂಕ್ನಿಂದ ದೀರ್ಘ ಹಾಗೂ ಅಲ್ಪಾವಧಿ ಸಾಲ ಪಡೆದುಕೊಂಡು ಸುಸ್ತಿದಾರರದಿಂದ ಬಡ್ಡಿ ಮನ್ನಾ ಯೋಜನೆಯಡಿಯಲ್ಲಿ ಅಸಲು ಪಾವತಿಸಿಕೊಂಡು ಸಾಲ ವಸೂಲಾತಿ ಮಾಡಿದ ಪರಿಣಾಮ ನಮ್ಮ ಬ್ಯಾಂಕ್ ೧.೪೭ ಕೋಟಿ ರು. ನಿವ್ವಳ ಲಾಭ ಗಳಿಸಲು ಸಾಧ್ಯವಾಯಿತು ಎಂದು ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ಅಧ್ಯಕ್ಷ ಎನ್ರಿಚ್ ಮಹದೇವಸ್ವಾಮಿ ತಿಳಿಸಿದರು.
ನಗರದ ಜೆ.ಎಸ್ಎಸ್. ಸೆಮಿನಾರ್ ಹಾಲ್ನಲ್ಲಿ ಭಾನುವಾರ ತಾಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಈ ವರ್ಷದಲ್ಲಿ ವಿವಿಧ ಯೋಜನೆಗಳಾದ ಕುರಿ ಸಾಕಾಣಿಕೆ, ಭೂ ಅಭಿವೃದ್ಧಿ, ತಂತಿ ಬೇಲಿ ಹಾಗೂ ನೀರಾವರಿಗಾಗಿ ಸಾಲವನ್ನಾಗಿ ಒಂದು ಕೋಟಿ ರು. ಸಾಲ ನೀಡಲಾಗಿದೆ. ಇನ್ನು ೩ ಕೋಟಿ ರು. ಸಾಲ ನೀಡುವ ಗುರಿಯನ್ನು ಹೊಂದಲಾಗಿದೆ. ಸಾಲ ಪಡೆದ ರೈತರು ಸಕಾಲದಲ್ಲಿ ರಿಯಾಯಿತಿ ದರದ ಬಡ್ಡಿ ಯೋಜನೆಯಲ್ಲಿ ಸಾಲ ಮರು ಪಾವತಿ ಮಾಡಿದರೆ ಬ್ಯಾಂಕ್ನ ಇನ್ನು ಹೆಚ್ಚಿನ ಮಂದಿಗೆ ಸಾಲ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಬ್ಯಾಂಕ್ನಿಂದ ವಿವಿಧ ಯೋಜನೆಯಡಿಯಲ್ಲಿ ಸಾಲ ಪಡೆದು ಸುಸ್ತಿದಾರಾಗಿದ್ದ ೫೦೮ ಮಂದಿ ರೈತರ ಪೈಕಿ ೩೩೭ ಮಂದಿ ಸರ್ಕಾರದ ಬಡ್ಡಿ ಮನ್ನಾ ಯೋಜನೆಯ ಲಾಭ ಪಡೆದು ಅಸಲು ಪಾವತಿ ಮಾಡಿದರು. ಇದರಿಂದ ನಮ್ಮ ಬ್ಯಾಂಕ್ ಶೇ. ೬೧ ರಷ್ಟು ವಸೂಲಾತಿಯನ್ನು ಹೊಂದಿದೆ. ಅಸಲು ಪಾವತಿ ಮಾಡಿದ್ದರಿಂದ ಕೇಂದ್ರ ಬ್ಯಾಂಕ್ನಿಂದ ಹೆಚ್ಚಿನ ಸಾಲವನ್ನು ಸಹ ನೀಡಿದ್ದು, ಹೊಸದಾಗಿ ೧ ಕೋಟಿ ರು. ಸಾಲ ನೀಡಿದೆ. ಸಂಘದ ಸದಸ್ಯತ್ವ ಪಡೆದುಕೊಂಡಿರುವ ೧೩೧೦ ಮಂದಿ ರೈತರಿಗೂ ಸಂಘದಿಂದ ವಿವಿಧ ರೀತಿಯ ಸಾಲ ನೀಡಬೇಕೆಂಬುವುದು ಆಡಳಿತ ಮಂಡಳಿಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಳೆದ ೧೦ ವರ್ಷಗಳಿಂದ ಸುಸ್ತಿದಾರರಾಗದೆ ಸಾಲ ಮರು ಪಾವತಿ ಮಾಡಿಕೊಂಡು ಬಂದಿರುವ ಎಂಟು ಮಂದಿ ರೈತರಾದ ಉಮ್ಮತ್ತೂರು ಕೆ. ಮಹದೇವಮುರ್ತಿ, ಕುಳ್ಳೂರು ಅಮಿದುನ್ನಿಸಾ, ಚಂದಕವಾಡಿ ಕುಮಾರ್, ಉಡಿಗಾಲ ಲೋಕೇಶ್, ಬಸ್ತಿಪುರ ಆರ್. ಚನ್ನಂಜಪ್ಪ, ಬಿಸಲವಾಡಿ ಬಸವನಾಯಕ, ಕೇತಹಳ್ಳಿ ಕೆ.ಎಸ್.ಸುವರ್ಣ, ಹರದನಹಳ್ಳಿ ಕೆ. ನಾಗರಾಜಪ್ಪ ಅವರನ್ನು ಸನ್ಮಾನಿಸಲಾಯಿತು.
ಇತ್ತೀಚೆಗೆ ನಿಧನರಾದ ಬ್ಯಾಂಕ್ನ ನಿರ್ದೇಶಕ ಚಿಕ್ಕನಾಗಪ್ಪ ಹಾಗೂ ರೈತ ಸದಸ್ಯರಿಗೆ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಬ್ಯಾಂಕ್ನ ಪ್ರಭಾರ ವ್ಯವಸ್ಥಾಪಕ ಸತೀಶ್ ವಾರ್ಷಿಕ ವರದಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ಬ್ಯಾಂಕ್ನ ನಿರ್ದೇಶಕರಾದ ಎಚ್.ಎಂ. ಬಸವಣ್ಣ, ಬಿ. ಮಹದೇವಪ್ಪ, ದೊರೆಸ್ವಾಮಿ, ಎಸ್.ರಾಜು, ಎಂ. ಬಸವರಾಜು ಶಿವಶಂಕರಪ್ಪ, ಮಹದೇವನಾಯಕ,ರತ್ನಮ್ಮ, ಬ್ಯಾಂಕಿನ ನೌಕರರಾದ ಶಶಿಕಿರಣ್, ನವೀನ್, ದಿನಕರ್ ಹಾಗೂ ಸದಸ್ಯರು ಭಾಗವಹಿಸಿದ್ದರು.