ಕೊಪ್ಪಳ: ಕವಿ ಗವಿಸಿದ್ದ ಎನ್. ಬಳ್ಳಾರಿ ಜೀವಂತವಿರುವ ತನಕ ಸಾಮಾಜಿಕ ಹೋರಾಟ, ಜನಪರ ನಿಲುವುಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಹೇಳಿದರು.
ತುರ್ತು ಪರಿಸ್ಥಿತಿಯ ದಿನಗಳಲ್ಲಿಯೂ ಸಹಿತ ಕವಿ ಗವಿಸಿದ್ದ ಎನ್.ಬಳ್ಳಾರಿ ಹೋರಾಟದಲ್ಲಿ ತೊಡಗಿಸಿಕೊಂಡ ರೀತಿ ಗಮನಾರ್ಹ ಸಂಗತಿಯಾಗಿದೆ. ಇಂದು ಅವರ ನೆನಪಿನಲ್ಲಿ ಕವಿಯಿತ್ರಿಯರನ್ನು ಸನ್ಮಾನಿಸುವ ಕಾರ್ಯ ಉತ್ತಮವಾಗಿದೆ ಎಂದರು.
ಕನ್ನಡದ ಸಾಹಿತ್ಯ ಪರಂಪರೆಯಲ್ಲಿ ಸಾಮಾಜಿಕ ದೃಷ್ಟಿಕೋನವಿದ್ದು, 9ನೇ ಶತಮಾನದ ಕವಿರಾಜ ಮಾರ್ಗನಿಂದ ಹಿಡಿದು ಇಲ್ಲಿಯವರೆಗೆ ಹಲವು ಸಾಹಿತಿಗಳು ಸಾಹಿತ್ಯಕ ಚಟುವಟಿಕೆಯ ಮೂಲಕ ಸಮಾಜದಲ್ಲಿ ಬದಲಾವಣೆ ತರಲು ಹೊರಟಿದ್ದಾರೆ ಎಂದರು.ಮೊದಲ ಪ್ರಜಾಪ್ರಭುತ್ವವಾದಿ ಬಸವಣ್ಣನವರು ಆದರ್ಶಪ್ರಾಯವಾಗಿದ್ದಾರೆ. ಆದರೆ ಈಗಿನ ರಾಜಕೀಯ ವ್ಯವಸ್ಥೆ ಹದಗೆಟ್ಟಿದೆ. ರಾಜಕಾರಣಿಗಳಾದ ನಾವು ಅಧಿಕಾರ ಬಂದ ಕೂಡಲೇ ಜನರಿಂದ ದೂರವಾಗಿ ಬಿಡುತ್ತೇವೆ. ಆದರೆ, ನಾವು ಜನಗಳ ಜತೆಗೆ ಇರಬೇಕು. ಜನಕೇಂದ್ರಿತ ವ್ಯವಸ್ಥೆ ಮರೆತು ವ್ಯಕ್ತಿ ಕೇಂದ್ರಿತರಾಗಿದ್ದೇವೆ.ಇಂದಿನ ವ್ಯವಸ್ಥೆಯಲ್ಲಿ ಜನ ತಂತ್ರಕ್ಕೆ ನಾಚಿಕೆಯಾಗುವಂತೆ ರಾಜಕಾರಣಿಗಳು ಬದುಕುತ್ತಿರುವುದು ನಿಜಕ್ಕೂ ದುರಂತದ ಸಂಗತಿಯಾಗಿದೆ ಎಂದರು.
ಚುನಾವಣಾ ಪದ್ಧತಿ ಇಂದಿನ ಅವ್ಯವಸ್ಥೆಗೆ ಕನ್ನಡಿಯಾಗಿದೆ. ಪ್ರಮುಖವಾಗಿ ಚುನಾವಣಾ ವ್ಯವಸ್ಥೆ ಬದಲಾಗಬೇಕಿದೆ. ಮತ ಪಡೆದು ಅಧಿಕಾರ ಅನುಭವಿಸುತ್ತಿರುವ ರಾಜಕಾರಣಿಗಳು ಮತದಾರರನ್ನು ಮರೆತರೆ ಗಂಡಾಂತರವಂತೂ ತಪ್ಪಿದ್ದಲ್ಲ ಎಂದರು.
ಕಾವ್ಯ ಪ್ರಶಸ್ತಿ ಪುರಸ್ಕೃತೆ ಡಾ. ಮೈತ್ರೇಣಿ ಮಾತನಾಡಿ, ಕೊಪ್ಪಳದ ಸಾಹಿತ್ಯ ವಲಯ ರಾಜ್ಯಕ್ಕೆ ಮಾದರಿಯಾಗಿದೆ ಜಿಲ್ಲಾದ್ಯಂತ ಅನೇಕ ಸಾಹಿತಿಗಳು ರಾಜ್ಯದ ಸಾಹಿತ್ತೀಕ ವಲಯದ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದಾರೆ. ಗವಿಸಿದ್ದ.ಎನ್. ಬಳ್ಳಾರಿ ಅವರು ಸದಾ ಓದುಗರ ಸೃತಿ ಪಟಲದಲ್ಲಿ ಜೀವಂತವಾಗಿದ್ದಾರೆ. ಅವರ ಹೆಸರಿನಲ್ಲಿ ನನಗೆ ಪ್ರಶಸ್ತಿ ದೊರಕಿರುವುದು ಸಂತಸ ತಂದಿದೆ ಎಂದರು.
ಲೇಖಕ ಅರವಿಂದ ಚೊಕ್ಕಾಡಿ ಮಾತನಾಡಿ, ಗವಿಸಿದ್ದ.ಎನ್.ಬಳ್ಳಾರಿ ವ್ಯಾಪಾರಿಯ ಜತೆಗೆ ಹೋರಾಟದ ಬದುಕು ರೂಪಿಸಿಕೊಂಡವರು. ಜತೆಗೆ ಕವಿ,ಪತ್ರಕರ್ತರಾಗಿ ಜನಾನುರಾಗಿಯಾಗಿ ಕೆಲಸ ಮಾಡಿದರು ಎಂದು ಸ್ಮರಿಸಿದರು.ಪ್ರಿಂಟಿಂಗ್ ಪ್ರೆಸ್ ಅಸೋಸಿಯನ್ ಕಾರ್ಯಾಧ್ಯಕ್ಷ ಆನಂದ ಗೊಂಡಬಾಳ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಕವಿ ಮಹೇಶ ಬಳ್ಳಾರಿ ಅವರ ದುಬೈ ದೌಲತ್ತು ಕೃತಿ, ಮುಂಬೈ ಅನಿತಾ ಅವರ ಮೇಣಕ್ಕೆ ಅಂಟಿದ ಬತ್ತಿ ಸಂಕಲನ, ಶ್ರೀನಿವಾಸ ಚಿತ್ರಗಾರ ಅವರ ನಮ್ಮ ನಡೆ ನಿಮ್ಮ ನುಡಿ ಕೃತಿ, ಶಿಕ್ಷಕ ಯಲ್ಲಪ್ಪ ಹರನಾಳಗಿ ಅವರ ಪ್ರೀತಿಯ ನಶೆಯಲ್ಲಿ ಕೃತಿ ಬಿಡುಗಡೆಯಾಯಿತು.