ಕನ್ನಪ್ರಭ ವಾರ್ತೆ ಕಾರ್ಕಳ
ಬಾಡಿ ವಾರೆಂಟ್ ಮೇಲೆ ನಕ್ಸಲೈಟ್ ಶ್ರೀಮತಿಯನ್ನು ಕಾರ್ಕಳ ಪೊಲೀಸರು ಕೇರಳದಿಂದ ಕಾರ್ಕಳಕ್ಕೆ ಕರೆ ತಂದಿದ್ದಾರೆ. ಕಾರ್ಕಳದಲ್ಲಿ ನಕ್ಸಲ್ ಶ್ರೀಮತಿ ಮೇಲೆ ಒಂದು ಪ್ರಕರಣವಿದ್ದು, ಈಗಾಗಲೇ ಹೆಬ್ರಿ ಠಾಣಾ ವ್ಯಾಪ್ತಿಯಲ್ಲಿ ಕಬ್ಬಿನಾಲೆ ಪ್ರದೇಶವೊಂದರಲ್ಲಿ ಸ್ಥಳ ಮಹಜರು ನಡೆಸಲಾಗಿದೆ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲಿ ಸುಮಾರು 13ಕ್ಕೂ ಹೆಚ್ಚು ಪ್ರಕರಣಗಳಿವೆ.ಬಿಗು ಪೊಲೀಸ್ ಬಂದೋಬಸ್ತ್:ಕಾರ್ಕಳ ಡಿವೈಎಸ್ಪಿ ಅರವಿಂದ್ ಎನ್. ಕಲಗುಜ್ಜಿ ಅವರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದ್ದು, ಎಎನ್ಎಫ್ ತಂಡಗಳು, ಪೊಲೀಸ್ ಪಡೆ, ಶ್ವಾನದಳ ಭದ್ರತೆಗಾಗಿ ನಿಯೋಜಿಸಲಾಗಿದೆ. ನಗರ ಠಾಣೆಗೂ ಭದ್ರತೆ ಒದಗಿಸಲಾಗಿದೆ. ಫೆ.13ರಂದು ರಾತ್ರಿ ಕಾರ್ಕಳ ನಗರ ಠಾಣೆ ಪೊಲೀಸರು ಕೇರಳ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಶ್ರೀಮತಿಯನ್ನು ಕರೆತಂದಿದ್ದಾರೆ. ಫೆ.14 ಹಾಗೂ 15ರಂದು ಶ್ರೀಮತಿಯನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಫೆ.17ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.ಪ್ರಕರಣ ಹಿನ್ನೆಲೆ:
2011ರ ನ.19ರಂದು ಹೆಬ್ರಿಯ ಕಬ್ಬಿನಾಲೆ ಪ್ರದೇಶದಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುತ್ತಿದೆ. ನಕ್ಸಲ್ ಮಾಹಿತಿದಾರ ಸದಾಶಿವ ಗೌಡ ಅವರನ್ನು ಶ್ರೀಮತಿಯನ್ನು ಒಳಗೊಂಡ ನಕ್ಸಲ್ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ನಡೆಸಿತ್ತು.ಘೋಷಣೆ ಕೂಗಿದ ಶ್ರೀಮತಿ:ಶ್ರೀಮತಿ ಯಾನೆ ಉನ್ನಿಮಯ ಅವರನ್ನು ಫೆ.15ರ ಸಂಜೆ ಕಾರ್ಕಳ ನ್ಯಾಯಾಲಯಕ್ಕೆ ಹಾಜರಿಪಡಿಸುವ ವೇಳೆ ಮಾಧ್ಯಮದವರನ್ನು ಕಂಡು ‘ಸಿಪಿಐ ಮಾವೋ ಝಿಂದಾಬಾದ್’ ಎಂದು ಘೋಷಣೆ ಕೂಗುತ್ತಾ ಜೈಕಾರ ಹಾಕಿದ್ದಾಳೆ. ಪೊಲೀಸ್ ಭದ್ರತೆಯ ಮೂಲಕ ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದೆ.ನಕ್ಸಲ್ ಶ್ರೀಮತಿಯನ್ನು 2023ರ ನವೆಂಬರ್ನಲ್ಲಿ ಕಣ್ಣೂರಿನಲ್ಲಿ ಬಂಧಿಸಲಾಗಿತ್ತು. ಶೃಂಗೇರಿ ತಾಲೂಕು ಬೇಗಾರ್ ಗ್ರಾಮ ಪಂಚಾಯಿತಿಯ ಬೆಳಗೋಡುಕೊಡಿಗೆಯ ಪುಟ್ಟುಗೌಡ, ಗಿರಿಜಾ ದಂಪತಿ ಪುತ್ರಿಯಾದ ಶ್ರೀಮತಿ, 2007ರಿಂದ ನಾಪತ್ತೆಯಾಗಿದ್ದು ನಕ್ಸಲ್ ಚಟುವಟಿಕೆಯಲ್ಲಿ ಸಕ್ರಿಯಳಾಗಿದ್ದಳು.ತನಿಕೋಡು ಚೆಕ್ಪೋಸ್ಟ್, ಅರಣ್ಯ ಇಲಾಖೆ ತಪಾಸಣೆ ಕೊಠಡಿ ಧ್ವಂಸ, ಮಾತೊಳ್ಳಿಯಲ್ಲಿ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಶ್ರೀಮತಿ ವಿರುದ್ಧ 15ಕ್ಕೂ ಹೆಚ್ಚು ಪ್ರಕರಣಗಳಿವೆ.