ಕನ್ನಡಪ್ರಭ ವಾರ್ತೆ ಪಾಂಡವಪುರ
ಮಾಜಿ ಸಚಿವ ಮುರುಗೇಶ್ ಆರ್.ನಿರಾಣಿ ಒಡೆತನದ ಎಂಆರ್ಎನ್ ಸಂಸ್ಥೆ ಪಿಎಸ್ಎಸ್ಕೆ ಕಾರ್ಖಾನೆ ಗುತ್ತಿಗೆ ಪಡೆಯವ ವೇಳೆ ಸರ್ಕಾರದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಪಿಎಸ್ಎಸ್ಕೆ ನೌಕರರನ್ನು ಕೆಲಸದಿಂದ ಬಿಡುಗಡೆಗೊಳಿಸುವಂತಿಲ್ಲ. ಆದರೂ ಕರಾರಿನಂತೆ ಎಂಆರ್ಎನ್ ಸಂಸ್ಥೆ ನಡೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಪಿಎಸ್ಎಸ್ಕೆ ಗುತ್ತಿಗೆ ನೌಕರರು ಕಳೆದ ಎರಡು ತಿಂಗಳ ಹಿಂದಿನಿಂದಲೂ ಪ್ರತಿಭಟನೆ ನಡೆಸುತ್ತಿದ್ದರು.
ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕೂಡ ಗುತ್ತಿಗೆ ಕಾರ್ಮಿಕರು ಹೋರಾಟಕ್ಕೆ ಬೆಂಬಲ ನೀಡಿ ಎಂಆರ್ಎನ್ ಸಂಸ್ಥೆ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸುವಂತೆ ಮನವಿ ಮಾಡಿದ್ದರು. ಇದ್ಕಕೂ ಜಗ್ಗದ ಕಾರ್ಖಾನೆ ಆಡಳಿತ ಮಂಡಳಿ ಸ್ವಯಂ ಪ್ರೇರಿತರಾಗಿ ಕಾರ್ಖಾನೆ ಬಂದ್ ಮಾಡುವುದಾಗಿ ಘೋಷಣೆ ಮಾಡಿ ಬಾಗಿಲು ಮುಚ್ಚಿತ್ತು. ಹೀಗಾಗಿ ಗುತ್ತಿಗೆ ಕಾರ್ಮಿಕರು ಮಾ.5ರಂದು ಪ್ರತಿಭಟನೆ ಕೈಬಿಟ್ಟಿದ್ದರು.ಮಾ.23ರಂದು ಎಂಆರ್ಎನ್ ಸಂಸ್ಥೆ ಆಡಳಿತ ಮಂಡಳಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಪ್ರಸಕ್ತ ಸಾಲಿನ ಕಬ್ಬು ಅರೆಯುವಿಕೆಗಾಗಿ ಸಿದ್ಧತೆ ಮಾಡಿಕೊಳ್ಳಲು ಕಾರ್ಖಾನೆ ಪ್ರಾರಂಭಿಸಲಾಗುತ್ತಿದೆ. ಮುಜಾಗ್ರತಾ ಕ್ರಮವಾಗಿ ಕಾರ್ಖಾನೆ ಮತ್ತು ಕಾರ್ಖಾನೆಯ ಇತರೆ ನೌಕರರಿಗೆ ಭದ್ರತೆ ಒದಗಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದರು.
ಪಟ್ಟು ಬಿಡದ ಕಾರ್ಮಿಕರು:
ಕಾರ್ಖಾನೆ ಆವರಣ ಮತ್ತು ಮುಂಭಾಗ ಹೊರತು ಪಡಿಸಿ ಬೇರೆಡೆ ಪ್ರತಿಭಟನೆ ನಡೆಸಲು ಅವಕಾಶ ನೀಡಲಾಗುವುದು. ಆದರೆ, ಕಾರ್ಖಾನೆ ಮುಂಭಾಗದಲ್ಲಿ ಪ್ರತಿಭಟನೆಗೆ ಅವಕಾಶ ನೀಡುವುದಿಲ್ಲ. ಇದಕ್ಕೆ ಪಿಎಸ್ಎಸ್ಕೆ ಗುತ್ತಿಗೆ ನೌಕರರ ಸ್ಪಂದಿಸುವಂತೆ ಪೊಲೀಸರ ಪ್ರತಿಭಟಕಾರರಲ್ಲಿ ಮನವಿ ಮಾಡಿತ್ತು. ಇದಕ್ಕೆ ಸ್ಪಂದಿಸದ ಪ್ರತಿಭಟನಾಕಾರರು ಕಾರ್ಖಾನೆ ಮುಂಭಾಗದಲ್ಲೇ ಪ್ರತಿಭಟನೆ ನಡೆಸಲು ಮುಂದಾದ ಹಿನ್ನೆಲೆಯಲ್ಲಿ ಪೊಲೀಸರು ನೌಕರರನ್ನು ವಶಕ್ಕೆ ಪಡೆದರು.