ರೌಡಿಶೀಟರ್‌ ಮನೆಗಳ ಮೇಲೆ ಪೊಲೀಸರ ದಾಳಿ

KannadaprabhaNewsNetwork |  
Published : Jun 11, 2026, 01:00 AM IST
 | Kannada Prabha

ಸಾರಾಂಶ

ರೌಡಿಶೀಟರ್‌ಗಳ ಇತ್ತೀಚಿನ ಚಟುವಟಿಕೆಗಳು, ಅವರ ಸಂಪರ್ಕ ಜಾಲ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು.

ಗದಗ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಪೊಲೀಸರು ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಕಾಲದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ, ಒಟ್ಟು 43 ರೌಡಿಶೀಟರ್‌ಗಳನ್ನು ತಪಾಸಣೆಗೆ ಒಳಪಡಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರ ನಿರ್ದೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ಬೆಟಗೇರಿ ಬಡಾವಣೆ, ಗದಗ ಶಹರ ಹಾಗೂ ಗದಗ ಗ್ರಾಮೀಣ ಪೊಲೀಸ್ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ರೌಡಿಶೀಟರ್‌ಗಳ ಇತ್ತೀಚಿನ ಚಟುವಟಿಕೆಗಳು, ಅವರ ಸಂಪರ್ಕ ಜಾಲ ಹಾಗೂ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆಗಳ ಕುರಿತು ಮಾಹಿತಿ ಸಂಗ್ರಹಿಸಲಾಯಿತು.

ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ನಿರಂತರ ನಿಗಾ ವಹಿಸಿದ್ದು, ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಶೇಷ ಕಾರ್ಯಾಚರಣೆ: ಜಿಲ್ಲೆಯಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ಧ ಯಾವುದೇ ರೀತಿಯ ಸಡಿಲಿಕೆ ಇಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ರೋಹನ್ ಜಗದೀಶ ತಿಳಿಸಿದರು.

ಮಳೆಗೆ ಮನೆಗೋಡೆ ಕುಸಿತ: ಅಧಿಕಾರಿಗಳ ಭೇಟಿ

ಡಂಬಳ: ಗ್ರಾಮದಲ್ಲಿ ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯ ಪರಿಣಾಮ ಮಣ್ಣಿನ ಮನೆಯೊಂದು ಕುಸಿದು ಅಪಾರ ಪ್ರಮಾಣದ ಹಾನಿಯಾಗಿದೆ. ಕುಟುಂಬದವರು ಪಾರಾಗಿದ್ದಾರೆ.ಗ್ರಾಮದ ರೈತ ಹನುಮಂತಪ್ಪ ಶಿವಪ್ಪ ಆಲೂರ ಎಂಬವರಿಗೆ ಸೇರಿದ ಮಣ್ಣಿನ ಮನೆಯ ಗೋಡೆ ಮಂಗಳವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮನೆಯ ಒಂದು ಭಾಗ ನೆಲಸಮವಾಗಿದ್ದು, ಇನ್ನೊಂದು ಗೋಡೆ ಸಂಪೂರ್ಣ ಬೀಳುವ ಸ್ಥಿತಿಗೆ ತಲುಪಿದೆ. ಮಳೆಗೆ ಮೂರು ಟ್ರ್ಯಾಕ್ಟರ್ ಶೇಂಗಾ ಹೊಟ್ಟು ಕೂಡಾ ಸಂಪೂರ್ಣ ಹಾಳಾಗಿದೆ. ಬಿದ್ದ ಮನೆಯಲ್ಲಿಯೇ ಅಡುಗೆ ಮಾಡುತ್ತಿದ್ದ ಮನಕಲಕುವ ದೃಶ್ಯ ಕಂಡುಬಂದಿತು.ಘಟನೆ ನಡೆದ ರಾತ್ರಿ ವೇಳೆ ಮನೆಯಲ್ಲಿದ್ದ ಕುಟುಂಬದ ಸದಸ್ಯರು ಸುರಕ್ಷಿತವಾಗಿ ಹೊರಬಂದಿರುವುದರಿಂದ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ ಮನೆಗೆ ಉಂಟಾದ ಹಾನಿಯಿಂದ ಕುಟುಂಬ ಆತಂಕಕ್ಕೊಳಗಾಗಿದೆ.

ಕೈತುಂಬ ಸಾಲ: ಏನು ಮಾಡಬೇಕರಿ? ಸಾಲ ಮಾಡಿ ಬೆಳೆದಾಗ ಬೆಳೆಗಳಿಗೆ ಬೆಲೆ ಇರಲ್ಲ. ಮನೆ ಹಾಕಿಸಬೇಕೆಂದರೆ ಕೈತುಂಬ ಸಾಲ ಮಾಡಿವಿ. ನಾಲ್ಕ ದಿನದಿಂದ ಮಳೆ ಬಂದ ಮನೆ ಸೋರಿ ಬಿದ್ದಿದೆ. ಎಲ್ಲಿಗೆ ಹೋಗಬೇಕು ಎಂದು ತಿಳಿದಂತಾಗಿದೆ. ಸರ್ಕಾರದವರು ನಮಗೆ ಒಂದು ಆಶ್ರಯ ಮನೆ ಕೊಡಿಸಿಕೊಡಿ ಎಂದು ಪ್ರೇಮವ್ವ ಹನಮಪ್ಪ ಆಲೂರ ಅಳಲು ತೋಡಿಕೊಂಡರು.ಸ್ಥಳಕ್ಕೆ ಉಪತಹಸೀಲ್ದಾರ್ ಎಸ್.ಎಸ್. ಬಿಚಾಲಿ, ಕಂದಾಯ ಅಧಿಕಾರಿ ಪ್ರಭು ಬಾಗಲಿ ಹಾಗೂ ಕಂದಾಯ ಆಡಳಿತಾಧಿಕಾರಿ ಲಕ್ಷ್ಮಣ ಗುಡಸಲಮನಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ಪ್ರಮಾಣದ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಿದ್ದು, ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೊಬ್ಬರಕ್ಕಾಗಿ ದಾಖಲೆಗಳೇ ಸರತಿ ಸಾಲು; ರೈತರ ಪರದಾಟ
ಸರಣಿ ಅಪಘಾತ: ಓರ್ವ ಸಾವು, 7 ಮಂದಿ ಗಾಯ