ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ವಂಚನೆ ಪ್ರಕರಣದ ಆರೋಪಿಗೆ ಸೇರಿದ ಕಾರಿನಲ್ಲಿದ್ದ ₹11 ಲಕ್ಷ ಕಳವು ಮಾಡಿದ ಆರೋಪಕ್ಕೆ ಸಿಸಿಬಿ ಸೈಬರ್ ಠಾಣೆ ಕಾನ್ಸ್ಟೇಬಲ್ ಜಬಿವುಲ್ಲಾ ತುತ್ತಾಗಿದ್ದು, ಆರೋಪದ ಬೆನ್ನಲ್ಲೆ ಕಾನ್ಸ್ಟೇಬಲ್ ಸಂಪೂರ್ಣ ಹಣವನ್ನು ಮರಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿದ್ದ ವಂಚನೆ ಪ್ರಕರಣದ ಆರೋಪಿಗೆ ಸೇರಿದ ಕಾರಿನಲ್ಲಿದ್ದ ₹11 ಲಕ್ಷ ಕಳವು ಮಾಡಿದ ಆರೋಪಕ್ಕೆ ಸಿಸಿಬಿ ಸೈಬರ್ ಠಾಣೆ ಕಾನ್ಸ್ಟೇಬಲ್ ಜಬಿವುಲ್ಲಾ ತುತ್ತಾಗಿದ್ದು, ಆರೋಪದ ಬೇನ್ನಲ್ಲೆ ಕಾನ್ಸ್ಟೇಬಲ್ ಸಂಪೂರ್ಣ ಹಣವನ್ನು ಮರಳಿಸಿದ್ದಾರೆ.
ಕೆಲ ದಿನಗಳ ಹಿಂದೆ ವಂಚನೆ ಪ್ರಕರಣ ಸಂಬಂಧ ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ತಂಡ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಠಾಣೆಗೆ ಕರೆತಂದಿದ್ದು, ಆ ವೇಳೆ ಈ ಹಣ ಕಳ್ಳತನವಾಗಿದೆ. ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಆರೋಪಿ, ತನ್ನ ಕಾರನ್ನು ಪರಿಶೀಲಿಸಿದಾಗ ಅದರಲ್ಲಿದ್ದ ₹11 ಲಕ್ಷ ಕಳ್ಳತನವಾಗಿದೆ ಎಂದು ದೂರಿದ್ದಾನೆ. ಈ ಕಳ್ಳತನ ಬಗ್ಗೆ ಸಿಸಿಬಿ ಡಿಸಿಪಿ ಅವರಿಗೆ ಸಹ ಆರೋಪಿಯು ದೂರು ನೀಡಿದ್ದಾನೆ. ಆಗ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಕಾರಿನಲ್ಲಿದ್ದ ಹಣವನ್ನು ಜಬ್ಬೀವುಲ್ಲಾ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆದರೆ, ಈ ಕುರಿತು ತನಿಖೆ ನಡೆಸದೆ ಅಧಿಕಾರಿಗಳು ನಿರ್ಲಕ್ಷ್ಯತನ ತೋರಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ಕಾರಿನಲ್ಲಿ ಹಣ ಕಳ್ಳತನ ಆರೋಪದ ಬಗ್ಗೆ ಮಾಹಿತಿ ಬಂದಿದೆ. ಯಾರೇ ತಪ್ಪು ಮಾಡಿದ್ದರು ಅದೂ ತಪ್ಪೇ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದಿದ್ದಾರೆ.ಕದ್ದ ಹಣದಲ್ಲಿ ಚಿನ್ನ
ಖರೀದಿಸಿದ ಪೇದೆ
ಕಳವು ಮಾಡಿದ ಹಣದಲ್ಲಿ ಚಿನ್ನಾಭರಣವನ್ನು ಆರೋಪಿತ ಕಾನ್ಸ್ಟೇಬಲ್ ಜಬಿವುಲ್ಲಾ ಖರೀದಿಸಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾದ ಕೂಡಲೇ ಜಬ್ಬೀವುಲ್ಲಾ ಮನೆಗೆ ತೆರಳಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆ ವೇಳೆ ಜಬ್ಬೀವುಲ್ಲಾ ತೀವ್ರ ವಿರೋಧ ಸಹ ವ್ಯಕ್ತಪಡಿಸಿದ್ದು, ಕೊನೆಗೆ ಹೈಡ್ರಾಮಾ ನಡೆದು ಆತ ಶಾಂತವಾಗಿದ್ದ. ಈ ಬೆಳವಣಿಗೆಯ ಬಳಿಕ ₹2 ಲಕ್ಷ ಮರಳಿಸಿರುವ ಜಬಿವುಲ್ಲಾ, ಇನ್ನುಳಿದ ಹಣ ಕೊಡಲು ಸಮಯ ಕೋರಿದ್ದಾನೆ ಎಂದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.