ಕನ್ನಡಪ್ರಭ ವಾರ್ತೆ ಮೈಸೂರು
ಸಿಎಂ ಬದಲಾವಣೆ ಪ್ರಶ್ನೆಯೆ ಬಂದಿಲ್ಲ. ಪ್ರಶ್ನೆಯೆ ಇಲ್ಲದ ಮೇಲೆ ಬದಲಾವಣೆ ಎಲ್ಲಿಂದ ಹೇಳಿ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದರು.ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ಶಾಸಕರು ಮುದ್ರೆ ಹೊತ್ತಿದ್ದಾರೆ. ಹೈಕಮಾಂಡ್ ಅದನ್ನು ನಿರ್ದೇಶಿಸಿದೆ. ಹೀಗಾಗಿ ಸಿಎಂ ತಮ್ಮ ಸ್ಥಾನದಲ್ಲಿ ಗಟ್ಟಿಯಾಗಿಯೆ ಇದ್ದಾರೆ. ಸಿಎಂ ಬದಲಾಗುತ್ತಾರೆ ಎಂದು ಬಿಜೆಪಿ ಹೇಳುತ್ತಿದೆ. ಬಿಜೆಪಿ ಕಥೆ ಹೇಗಿದೆ ಅಂದರೆ ಆನೆ ಹೋಗುತ್ತಿತ್ತು. ನರಿ ನೋಡ್ತಾ ಇತ್ತು. ಆನೆದೂ ಬೀಳಲಿಲ್ಲ. ನರಿನೂ ತಿನ್ನಲಿಲ್ಲ ಇದು ಬಿಜೆಪಿ ಪರಿಸ್ಥಿತಿ ವ್ಯಂಗ್ಯವಾಡಿದರು.
ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ರಾಜಕೀಯ ಪಿತೂರಿ:ಮುಡಾ ಹಗರಣ ಲೋಕಾಯುಕ್ತ ಕ್ಲೀನ್ ಚೀಟ್ ವಿಚಾರವಾಗಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹೆಸರಿಗೆ ಕಳಂಕ ತರಲು ರಾಜಕೀಯ ಪಿತೂರಿಯ ಕೇಸ್ ಇದಾಗಿದೆ, ಕ್ಲೀನ್ ಚೀಟ್ ಸಿಕ್ಕ ಕಾರಣ ಸಂತೋಷವಾಗಿದೆ. ಕೇಸ್ ಅನ್ನು ರಾಜಕೀಯವಾಗಿ ಪ್ರತಿಪಕ್ಷಗಳು ಬಳಸಿ ಕೊಂಡಿದ್ದವು. ಸಿದ್ದರಾಮಯ್ಯ ಅವರು ದೋಷಿನೇ ಆಗಿರಲಿಲ್ಲ. ಹೀಗಾಗಿ ನಿರ್ದೋಷಿ ಪ್ರಶ್ನೆಯೆ ಇಲ್ಲ. ಸಿದ್ದರಾಮಯ್ಯ ಮೊದಲಿಂದಲ್ಲೂ ಗಟ್ಟಿಯಾಗಿದ್ದರು. ಈ ಕ್ಲೀನ್ ಚೀಟ್ ನಿಂದ ಅವರೂ ಗಟ್ಟಿ ಆಗುವ ಪ್ರಶ್ನೆ ಇಲ್ಲಿ ಉದ್ಭವಿಸಲ್ಲ. ಸಿದ್ದರಾಮಯ್ಯರ ಆತ್ಮಸಾಕ್ಷಿ ಮೊದಲಿಂದಲೂ ತಾವು ತಪ್ಪು ಮಾಡಿಲ್ಲ ಎಂದು ಹೇಳುತ್ತಿದ್ದರು, ನಮಗೂ ಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎಂದು ಗೊತ್ತಿತ್ತು ಎಂದರು.
ಸಭೆ ಸೇರಬಾರದು ಅಂತ ಎಲ್ಲಿದೆ ಹೇಳಿ:ದಲಿತ ಸಮಾವೇಶ ವಿಚಾರವಾಗಿ ಮಾತನಾಡಿದ ಅವರು, ಸಭೆ ಸೇರಬಾರದು ಮಾತಡಬಾರದು ಅಂತ ಎಲ್ಲಿದೆ ಹೇಳಿ ಎಂದು ಪ್ರಶ್ನಿಸಿದ ಅವರು, ಸಮಾವೇಶ ಮಾಡುವುದಾದರೇ ಬಹಳ ಚೆನ್ನಾಗಿ ದೊಡ್ಡ ಮಟ್ಟದಲ್ಲಿ ಮಾಡಲು ಸಭೆ ಮಾಡುತ್ತೇವೆ ಅಷ್ಟೇ. ಅದಕ್ಕೆ ಜಾಸ್ತಿ ಒತ್ತು ಏನು ಇಲ್ಲ ಎಂದರು.
ಸಚಿವ ರಾಜಣ್ಣ ಹೇಳಿಕೆ ಪ್ರತಿಕ್ರಿಯೆ ನೀಡಲ್ಲ:ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಕುರಿತು ಎಲ್ಲವನ್ನೂ ಹೈ ಕಮಾಂಡ್ ತೀರ್ಮಾನ ಮಾಡುತ್ತೆ. ಸಚಿವ ರಾಜಣ್ಣ ಹೇಳಿಕೆಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದರು.