ಕನ್ನಡಪ್ರಭ ವಾರ್ತೆ ಬೆಂಗಳೂರು
ಕರ್ನಾಟಕ ರಾಜ್ಯ ಪಾಲಿಮರ್ ಸಂಘವು ಏ.26ರಿಂದ 29ರವರೆಗೆ 4 ದಿನ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಹಮ್ಮಿಕೊಂಡಿರುವ ''''ಅಂತಾರಾಷ್ಟ್ರೀಯ ಪಾಲಿಮರ್ ವಸ್ತು ಪ್ರದರ್ಶನದ'''' ಕರ್ಟನ್ ರೈಸರ್ ಕಾರ್ಯಕ್ರಮ ಶನಿವಾರ ನಗರದ ಕಾಸಿಯಾ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸ್ಟೀರ್ ವರ್ಲ್ಡ್ ಲಿಮಿಟೆಡ್ ಅಧ್ಯಕ್ಷರಾದ ಟಿ.ಎನ್. ಹರಿ ಅವರು ಮಾತನಾಡಿ, ಈ ವಸ್ತು ಪ್ರದರ್ಶನದ ಮೂಲಕ ಕರ್ನಾಟಕ ರಾಜ್ಯ ಪಾಲಿಮರ್ ಸಂಘವು ಪ್ಲಾಸ್ಟಿಕ್ ಹೊಸ ಉದ್ಯಮದ ಆಯಾಮಗಳನ್ನು ತೆರೆಯಲಿದೆ. ಪ್ರದರ್ಶನದಲ್ಲಿ ವಿವಿಧ ಕಂಪೆನಿಗಳು ಪ್ಲಾಸ್ಟಿಕ್ ಮರುಬಳಕೆ ಬಗ್ಗೆ ಹೊಸ ಯಂತ್ರಗಳು ಹಾಗೂ ಪ್ಲಾಸ್ಟಿಕ್ ಉತ್ಪನ್ನ ಮಾರುಕಟ್ಟೆಗೆ ಹೊಸ ಯಂತ್ರಗಳ ಅನ್ವೇಷಣೆಗಳನ್ನು ಪರಿಚಯ ಮಾಡಿಕೊಡಲಿವೆ ಎಂದು ಹೇಳಿದರು.
ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ರಮೇಶ್ ಲಹೋಟಿ ಮಾತನಾಡಿ, ಪಾಲಿಮರ್ ಸಂಘದ ಅಧ್ಯಕ್ಷ ವಿಜಯ ಕುಮಾರ್ ನೇತೃತ್ವದಲ್ಲಿ ಈ ಪ್ರದರ್ಶನವು ರಾಜ್ಯದ ಕೈಗಾರಿಕೆಗಳಿಗೆ ಹೊಸ ಲಾಭ ಅನ್ವೇಷಿಸಿಕೊಡಲಿದೆ ಎಂದು ಹೇಳಿದರು.ಕಾಸಿಯಾ ಅಧ್ಯಕ್ಷ ಶಶಿಧರ ಶೆಟ್ಟಿ ಮಾತನಾಡಿ, ಕರ್ನಾಟಕ ರಾಜ್ಯ ಪಾಲಿಮರ್ ಸಂಘ ರಾಜ್ಯದ ಕೈಗಾರಿಕೆಗಳಿಗೆ ಹೊಸ ತಂತ್ರಜ್ಞಾನ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಈ ಪ್ರದರ್ಶನದ ಲಾಭವನ್ನು ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆ ಉದ್ಯಮ ವಲಯ ಪಡೆಯಬೇಕು ಎಂದು ಕರೆ ನೀಡಿದರು.
ಕರ್ಣಾಟಕ ರಾಜ್ಯ ಪಾಲಿಮರ್ ಸಂಘದ ಅಧ್ಯಕ್ಷ ವಿಜಯ ಕುಮಾರ್, ಪ್ರದರ್ಶನದ ನೇತೃತ್ವ ವಹಿಸಿರುವ ಹರಿರಾಂ ಅವರು ಏ.26 ರಿಂದ ನಡೆಯಲಿರುವ ಎಕ್ಸ್ಪೋ ಪ್ರಯೋಜನಗಳ ಬಗ್ಗೆ ವಿವರಣೆ ನೀಡಿದರು. ಸಂಘದ ಉಪಾಧ್ಯಕ್ಷ ಶ್ರಿಯಾನ್ಸ್ ಕುಮಾರ್ ಜೈನ್, ಕಾರ್ಯದರ್ಶಿ ಸುರೇಶ್ ಸಾಗರ್ ಹಾಗೂ ಖಜಾoಚಿ ಸಂಜಯ್ ಜೈನ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಹೆಚ್ಚಿನ ವಿವರಗಳು, ನೋಂದಣಿಗಾಗಿ www.kplexexpo.com ವೆಬ್ಸೈಟ್ಗೆ ಭೇಟಿ ನೀಡಬಹುದು.