ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯದಲ್ಲಿ 25 ಸಾವಿರಕ್ಕೂ ಅಧಿಕ ಸ್ಮಾರಕಗಳಿದ್ದು, 800ಕ್ಕೆ ಮಾತ್ರ ರಕ್ಷಣೆ ಮತ್ತು ಪುನರುಜ್ಜೀವನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. 5 ವರ್ಷದಲ್ಲಿ ಕನಿಷ್ಠ 5 ಸಾವಿರ ಸ್ಮಾರಕಗಳನ್ನು ಈ ಯೋಜನೆಯಡಿ ತರಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಭರವಸೆ ನೀಡಿದರು.ವೆಂಕಟಪ್ಪ ಆರ್ಟ್ ಗ್ಯಾಲರಿಯ ನವೀಕರಣ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕದಲ್ಲಿ 25 ಸಾವಿರಕ್ಕೂ ಅಧಿಕ ಸ್ಮಾರಕಗಳಿವೆ. ಆದರೆ 800ಕ್ಕೆ ಮಾತ್ರ ಅಧಿಸೂಚನೆ ನೀಡಲಾಗಿದೆ. ಉಳಿದವುಗಳಿಗೂ ಸರ್ಕಾರದಿಂದ ‘ಅಡಾಪ್ಟ್ ಎ ಮಾನ್ಯುಮೆಂಟ್’ ಉಪಕ್ರಮದಡಿ ರಕ್ಷಣೆ, ಪುನರುಜ್ಜೀವನಕ್ಕೆ ಅಧಿಸೂಚನೆ ಹೊರಡಿಸಬೇಕು. ತಮ್ಮ ಅವಧಿಯಲ್ಲಿ ಕನಿಷ್ಠ 5 ಸಾವಿರ ಸ್ಮಾರಕಗಳನ್ನು ಈ ಯೋಜನೆಯಡಿ ತರುವ ಉದ್ದೇಶವಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರವು ಪರಿಣಾಮಕಾರಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮೂಲಕ ರಾಜ್ಯದ ಪಾರಂಪರಿಕ ತಾಣಗಳ ಪುನರುಜ್ಜೀವನಕ್ಕೆ ಬದ್ಧತೆ ಹೊಂದಿದೆ. ಖ್ಯಾತ ಕಲಾವಿದರಾದ ವೆಂಕಟಪ್ಪ ಅವರು ರಾಜ್ಯದ ಕಲಾ ಪರಂಪರೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪಿಪಿಪಿ ಮಾದರಿಯಲ್ಲಿ ಬ್ರಿಗೇಡ್ ಗ್ರೂಪ್ ಸಹಯೋಗದಲ್ಲಿ ಈ ಗ್ಯಾಲರಿಯನ್ನು ₹5 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ನಡೆಸಲು ನಿರ್ಧರಿಸಿರುವುದು ಗಮನಾರ್ಹವಾಗಿದೆ. ದಸರಾಕ್ಕೂ ಮೊದಲೇ ಪುನರುಜ್ಜೀವನ ಕಾರ್ಯ ಪೂರ್ಣಗೊಳಿಸಲು ನಿರ್ಧರಿಸಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಬ್ರಿಗೇಡ್ ಗ್ರೂಪ್ನ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್ ಮಾತನಾಡಿ, ಗ್ಯಾಲರಿಯ ಪುನರುಜ್ಜೀವನ ಕಾರ್ಯ ಕೈಗೆತ್ತಿಕೊಳ್ಳುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಗ್ಯಾಲರಿಯ ಐತಿಹಾಸಿಕ ಆಕರ್ಷಣೆಯನ್ನು ಪುನಃ ಸ್ಥಾಪಿಸಲಾಗುವುದು. ಹತ್ತು ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್, ನಿರ್ದೇಶಕ ಡಾ.ರಾಮ್ ಪ್ರಸಾದ್ ಮನೋಹರ್, ಪುರಾತತ್ವ ಇಲಾಖೆ ಆಯುಕ್ತ ದೇವರಾಜು ಉಪಸ್ಥಿತರಿದ್ದರು.ಚಿತ್ರಗಳು:ಚಿತ್ರ-1: ವೆಂಕಟಪ್ಪ ಆರ್ಟ್ ಗ್ಯಾಲರಿಯ ನವೀಕರಣ ಕಾರ್ಯಕ್ಕೆ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಚಾಲನೆ ನೀಡಿದರು. ಇಲಾಖೆ ಕಾರ್ಯದರ್ಶಿ ಸಲ್ಮಾ ಕೆ.ಫಾಹಿಮ್, ನಿರ್ದೇಶಕ ಡಾ। ರಾಮ್ ಪ್ರಸಾದ್ ಮನೋಹರ್, ಬ್ರಿಗೇಡ್ ಗ್ರೂಪ್ನ ಕಾರ್ಯನಿರ್ವಾಹಕ ಅಧ್ಯಕ್ಷ ಎಂ.ಆರ್.ಜೈಶಂಕರ್ ಹಾಜರಿದ್ದರು.
---ಚಿತ್ರ-1: ನವೀಕರಣಗೊಂಡ ಬಳಿಕ ಹೀಗಿರಲಿದೆ ವೆಂಕಟಪ್ಪ ಆರ್ಟ್ ಗ್ಯಾಲರಿ.