ಕನ್ನಡಪ್ರಭ ವಾರ್ತೆ ಹಾಸನ
ಸರ್ಕಾರವು ಕಂಪನಿಗಳ ಮೂಲಕ ರೈತರಿಗೆ ಕಳಪೆ ಗುಣಮಟ್ಟದ ಜೋಳದ ಬೀಜ ನೀಡಿದ್ದು, ಜಿಲ್ಲಾದ್ಯಂತ ಬೆಳೆಗೆ ಆಗಿರುವ ನಷ್ಟದ ಬಗ್ಗೆ ಪರಿಹಾರ ನೀಡಲು ಆಗ್ರಹಿಸಿ ನಗರದ ಸಂತೇಪೇಟೆ ವೃತ್ತದ ಬಳಿ ಇರುವ ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ರೈತರಿಂದ ಜುಲೈ ೭ರ ಸೋಮವಾರದಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕಣಗಾಲ್ ಮೂರ್ತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿ, ಗ್ಯಾರಂಟಿ ರಾಮಣ್ಣ, ಮಂಜು ಬಿಟ್ಟಗೌಡನಹಳ್ಳಿ ಇವರ ನೇತೃತ್ವದಲ್ಲಿ ಹೇಮಾವತಿ ಪ್ರತಿಮೆ ಮುಂಭಾಗದಿಂದ ಮೆರವಣಿಗೆ ಹೊರಡಲಿದೆ. ಪ್ರತಿಭಟನೆಯಲ್ಲಿ ರೈತರ ಪ್ರಮುಖ ಬೇಡಿಕೆಗಳೆಂದರೆ, ಅಧಿಕೃತವಾಗಿ ಸರ್ಕಾರದ ಬಿಡ್ಡಿಗೆ ಮತ್ತು ಕೃಷಿ ಇಲಾಖೆಗೆ ಸರಬರಾಜು ಮಾಡದೆ ಇರುವ ಕಂಪನಿಗಳ ಜೊತೆ ಕೃಷಿ ನಿರ್ದೇಶಕರು ಶಾಮಿಲಾಗಿ ರೈತರಿಗೆ ಕಳಪೆ ಬೀಜ ನೀಡಿರುವ ಮತ್ತು ಕಂಪನಿಯವರು ರೈತರಿಗೆ ಜಂಟಿ ಕೃಷಿ ನಿರ್ದೇಶಕರ ನೇತೃತ್ವದಲ್ಲಿ ನಷ್ಟವನ್ನು ತುಂಬಿಕೊಡಬೇಕು. ಸಾಮೂಹಿಕವಾಗಿ ರೈತರಿಗೆ ಜಿಲ್ಲಾಡಳಿತ ವತಿಯಿಂದ ಉಚಿತವಾಗಿ ಬೆಳೆ ವಿಮೆ ಮಾಡಿಕೊಡಬೇಕು ಎಂದು ತಿಳಿಸಿದರು.ಕಳಪೆ ಬೀಜವನ್ನು ಕೃಷಿ ಇಲಾಖೆಯವರ ಹೆಸರು ಬಳಸಿಕೊಂಡು ಪ್ರಚಾರದಲ್ಲಿ ತೊಡಗಿರುವರ ವಿರುದ್ಧ ಮೊಕದ್ದಮೆ ದಾಖಲಿಸಿ ಮತ್ತು ಕೃಷಿ ಇಲಾಖೆಗೆ ಸರಬರಾಜು ಮಾಡದೆ ಇರುವ ಕಂಪನಿಯವರನ್ನು ಅಂಗಡಿ ಮುಖಾಂತರ ಮಾರುವುದನ್ನು ನಿರ್ಬಂಧಿಸಬೇಕು. ಬೆಳೆ ಸಮೀಕ್ಷೆಯನ್ನು ತಾಲೂಕು ಆಡಳಿತ ಅಧಿಕಾರಿಗಳು ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜೊತೆಗೂಡಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಪ್ರತಿ ಹಳ್ಳಿಗಳಲ್ಲಿಯೂ ಸಮೀಕ್ಷೆ ನಡೆಸಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಬೆಳೆ ನಾಶವಾಗಿರುವ ರೈತರಿಗೆ ಕಂಪನಿಯವರಿಂದಲೆ ಕೃಷಿ ಇಲಾಖೆಯವರು ಪ್ರತಿ ಎಕರೆಗೆ ೫೦ ಸಾವಿರ ರು.. ಪರಿಹಾರವನ್ನು ಕೊಡಿಸಿಕೊಡಬೇಕು ಹಾಗೂ ಹಾಸನ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಹೆಸರನ್ನು ಅವರ ಅನುಮತಿ ಇಲ್ಲದೆ ಬಳಸಿಕೊಂಡು ಕರಪತ್ರವನ್ನು ಮುದ್ರಿಸಿ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಿರುವ ಬಿತ್ತನೆ ಬೀಜದ ಹೈಟೆಕ್ ಕಂಪನಿ ಮತ್ತು ಏಜೆನ್ಸಿ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಈ ಎಲ್ಲಾ ವಿಚಾರಗಳನ್ನು ಮುಂದಿಟ್ಟುಕೊಂಡು ಕರ್ನಾಟಕ ರಾಜ್ಯ ರೈತ ಸಂಘ ಸಾಮೂಹಿಕ ನಾಯಕತ್ವದ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೋರಾಟದ ಉದ್ದೇಶವನ್ನು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಮರ್ಕುಲಿ ಪ್ರಕಾಶ್, ಹಾಸನ ತಾಲೂಕು ಅಧ್ಯಕ್ಷ ಬಿಟ್ಟಗೌಡನಹಳ್ಳಿ ಮಂಜುನಾಥ್, ಪಾಲಾಕ್ಷ ಮಾರನಹಳ್ಳಿ, ಶಿವಕುಮಾರ್ ಹಳೇಬೀಡು, ಶೇಷಣ್ಣ, ಕಾಂತರಾಜು ಇತರರು ಉಪಸ್ಥಿತರಿದ್ದರು.