ಕನ್ನಡಪ್ರಭ ವಾರ್ತೆ ಬೇಲೂರು
ಪ್ರಸ್ತುತ ನಡೆಯುತ್ತಿರುವ ಆನೆ ಕಾರ್ಯಪಡೆ ಕಚೇರಿಯ ಕಾಮಗಾರಿ ಕಳಪೆಯಾಗಿದ್ದು ಕೂಡಲೇ ನಿಲ್ಲಿಸಬೇಕು, ಗುಣಮಟ್ಟದ ಕಾಮಗಾರಿ ಪ್ರಾರಂಭಿಸುವವರೆಗೂ ಇಲ್ಲಿ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದು ಕಾಫಿ ಬೆಳೆಗಾರರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ತಾಲೂಕಿನ ಬಿಕ್ಕೋಡು ಗ್ರಾಮದ ಬಳಿ ಬೆಳೆಗಾರರು ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ನಿರ್ಮಾಣವಾಗುತ್ತಿರುವ ಆನೆ ಕಾರ್ಯಪಡೆ ಕಚೇರಿಯ ಮುಂಭಾಗ ಪ್ರತಿಭಟಿಸಿದರು.ಈ ಸಂದರ್ಭದಲ್ಲಿ ಬೆಳೆಗಾರರು ಮಾತನಾಡಿ, ಕಾಡಾನೆಗಳ ಹಾವಳಿಯಿಂದ ಪ್ರತಿನಿತ್ಯ ಪ್ರಾಣಹಾನಿ ಜೊತೆಗೆ ಬೆಳೆ ನಷ್ಟವಾಗಿ ಬೆಳೆಗಾರ ಕಂಗಾಲಾಗಿದ್ದಾನೆ. ಹಲವಾರು ಬಾರಿ ಪ್ರತಿಭಟಿಸಿದ ಹಿನ್ನೆಲೆಯಲ್ಲಿ ಸರ್ಕಾರ ಇಲ್ಲಿ 24 ಗಂಟೆಗಳ ಕಾಲ ಕಾಡಾನೆಗಳ ಚಲನವಲನಗಳ ಬಗ್ಗೆ ಮಾಹಿತಿ ನೀಡಲು ಆನೆ ಕಾರ್ಯಾಪಡೆ ಕಚೇರಿಯನ್ನು ನಿರ್ಮಾಣ ಮಾಡಲು ನಿರ್ಧರಿಸಿತು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಭೂಮಿಪೂಜೆ ಮಾಡಿ 40 ಲಕ್ಷ ರು. ಅಂದಾಜು ವೆಚ್ಚದಲ್ಲಿ ಅನುದಾನ ನೀಡಿದ್ದರು. ಆದರೆ ಈಗ ನಡೆಸುತ್ತಿರುವ ಕಾಮಗಾರಿ ಸಂಪೂರ್ಣ ಕಳಪೆಯಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ಧೂರಿ ಚೇತನ್ ಕುಮಾರ್ ಮಾತನಾಡಿ, ಸುಮಾರು 5 ವರ್ಷಗಳ ಅವಧಿಯಲ್ಲಿ ಬೆಳೆಗಾರರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆನೆಗಳ ಹಾವಳಿಯಿಂದಾಗಿ ನಮ್ಮ ಮಲೆನಾಡು ಭಾಗದ ರೈತರು, ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ನಮಗೆ ಶಾಶ್ಬತವಾಗಿ ಆನೆ ಗಳನ್ನು ತೆರವು ಗೊಳಿಸಿದರೆ ಬದುಕಲು ಅನುಕೂಲವಾಗುತ್ತದೆ ಎಂದರು.
ಆನೆಗಳು ಸಂಚರಿಸುವ ಬಗ್ಗೆ ರೈತರಿಗೆ ಮಾಹಿತಿ ನೀಡುವಂತೆ ಅರಣ್ಯ ಸಚಿವರಲ್ಲಿ ಕೇಳಿಕೊಂಡ ಹಿನ್ನೆಲೆಯಲ್ಲಿ ಖುದ್ದಾಗಿ ಸ್ಥಳಕ್ಕೆ ಆಗಮಿಸಿ 40 ಲಕ್ಷ ವೆಚ್ಚದಲ್ಲಿ ಜಿಲ್ಲಾ ಆನೆಕಾರ್ಯಪಡೆ ಕೇಂದ್ರಕ್ಕೆ ಭೂಮಿಪೂಜೆ ನೆರವೇರಿಸಿದ್ದರು. ಕಟ್ಟಡದ ಕೆಲಸ ಆರಂಭವಾದರೂ ಗುತ್ತಿಗೆದಾರನ ಬೇಜವಾಬ್ದಾರಿತನ ಹಾಗೂ ಅತ್ಯಂತ ಕಳಪೆಯಿಂದ ಕೂಡಿದೆ. ಈ ಬಗ್ಗೆ ಶಾಸಕರಿಗೆ ಜಿಲ್ಲಾ ಹಾಗೂ ತಾಲೂಕು ಅರಣ್ಯ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಅಧಿಕಾರಿಗಳು ಗಮನ ಹರಿಸದಿದ್ದಾಗ ಸ್ಥಳಕ್ಕೆ ಶಾಸಕರೇ ಬಂದು ಗುಣಮಟ್ಟದ ಕಾಮಗಾರಿ ಮಾಡುವಂತೆ ಎಚ್ಚರಿಕೆ ನೀಡಿದ್ದರು. ಶಾಸಕರ ಸೂಚನೆಗೂ ಗುತ್ತಿಗೆದಾರ ಕಿವಿಗೊಡದೆ ರಾತ್ರೋರಾತ್ರಿ ಜಂಟ್ ಶೀಟ್ ಹಾಗೂ ಕಬ್ಬಿಣದ ತಗಡುಗಳಿಂದ ಕೆಲಸ ಮಾಡುತ್ತಿದ್ದಾರೆ. ಇದರ ಬಗ್ಗೆ ಅರಣ್ಯ ಇಲಾಖೆಗೆ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಕೂಡಲೇ ಕೆಲಸ ಕಾಮಗಾರಿ ನಿಲ್ಲಿಸಬೇಕು. ನಮಗೆ ಶಾಶ್ವತವಾಗಿ ಗುಣಮಟ್ಟದ ಕಾಮಗಾರಿ ಆಗಬೇಕು. ಸಚಿವರ ಮತ್ತು ಅವರ ಹಿಂಬಾಲಕರ ಹೆಸರೇಳಿಕೊಂಡು ಕೆಲಸ ಮಾಡುತ್ತಿರುವ ಇಂತಹ ಗುತ್ತಿಗೆದಾರರನ್ನು ಕೂಡಲೆ ಕಪ್ಪು ಪಟ್ಟಿಗೆ ಸೇರಿಸಬೇಕು. ಇಲ್ಲದಿದ್ದರೆ ಈ ಭಾಗದ ಎಲ್ಲಾ ಬೆಳೆಗಾರರು ಉತ್ತಮ ಗುಣಮಟ್ಟದ ಕಾಮಾಗರಿ ಆಗುವವರೆಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ತೇಜ್ ಕುಮಾರ್, ಮೋಹನ್ ಕುಮಾರ್, ಸತೀಶ್, ರೇಣುಕುಮಾರ್, ಚಂದ್ರಶೇಖರ್, ನಟರಾಜ್, ದರ್ಶನ್, ಶ್ರೀಕಾಂತ್ ಇತರರು ಹಾಜರಿದ್ದರು.