ಪುತ್ತೂರು: ಪ್ರಜಾಸೇವೆ ಆಂದೋಲನವು ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕನಸಿನ ಯೋಜನೆಯಾಗಿದ್ದು, ಜನ ಕಾಲಬುಡಕ್ಕೆ ಸೇವೆಗಳು ಒದಗಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸೇವೆಯನ್ನು ಗ್ರಾಮ ಮಟ್ಟಕ್ಕೆ ವಿಸ್ತರಿಸಬೇಕು. ಜೊತೆಗೆ ಸರ್ಕಾರಿ ಸೇವೆಯಲ್ಲಿ ಮದ್ಯವರ್ತಿಗಳನ್ನು ತಪ್ಪಿಸುವ ಮೂಲಕ ನೇರವಾಗಿ ಜನರಿಗೆ ಸೇವೆ ಒದಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಪ್ರಜಾಸೇವೆ ಆಂದೋಲನವನ್ನು ಆರಂಭಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು.
ಜನಪರವಾದ ಚಿಂತನೆಯ ಹಿಂದೆ ಜನಸಂಪರ್ಕದಂತಹ ಕಾರ್ಯಕ್ರಮಗಳಿದ್ದವು. ಆದರೆ ಅದಕ್ಕೆ ಯಾವುದೇ ಗಡು-ನಿಮಯಗಳಿರಲಿಲ್ಲ. ಆದರೆ ಪ್ರಜಾಸೇವೆಯಲ್ಲಿ ಅರ್ಜಿ ಸಲ್ಲಿಸಿದ ಬಳಿಕ ೨೧ ದಿನಗಳ ಗಡು ನೀಡಲಾಗಿದೆ. ಕಾನೂನಾತ್ಮಕ ಸಮಸ್ಯೆಗಳಿಗೆ ಈ ಪರಿಹಾರ ಕಂಡುಕೊಳ್ಳುವ ಕೆಲಸವನ್ನು ಅಧಿಕಾರಿಗಳು `ಹೃದಯ'''' ದಿಂದ ಮಾಡಬೇಕು ಎಂದ ಸಚಿವರು ಜನತೆಯ ಕಷ್ಟ ಆಲಿಸದ ಹಾಗೂ ಕೆಲಸ ಮಾಡದ ಅಧಿಕಾರಿಗಳಿಂದ ನಿಮ್ಮ ಅರ್ಜಿಗೆ ತಕ್ಕ ಪರಿಹಾರ ಸಿಗದಿದ್ದಲ್ಲಿ ಅದರ ದೂರಿನ ವಿಚಾರಣೆಗಾಗಿ ಹೊಸ ವಿಭಾಗವನ್ನು ತೆರೆಯಲಾಗುವುದು. ಇದರ ಮೂಲಕ ಮಧ್ಯವರ್ತಿಗಳ ಹಾವಳಿಯನ್ನು ದೂರ ಮಾಡುವ ಚಿಂತನೆಯೂ ಅಡಗಿದೆ. ಜನತೆಯ ನಂಬಿಕೆಗೆ ಅನುಗುಣವಾಗಿ ವಿಶ್ವಾಸಭರಿತ ಕೆಲಸ ಮಾಡುವುದು ಸರ್ಕಾರದ ಗುರಿಯಾಗಿದೆ. ಮುಂದಿನ ದಿನಗಳಲ್ಲಿ ಹೋಬಳಿ ಮಟ್ಟದಲ್ಲಿಯೂ ಈ ಪ್ರಜಾಸೇವೆ ಆಂದೋಲನ ನಡೆಯಲಿದೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ರಾಜಕೀಯ ಬದಿಗಿಟ್ಟು ಧಾರ್ಮಿಕತೆ ಯಾವತ್ತೂ ನಮ್ಮ ದೌರ್ಬಲ್ಯವಾಗಬಾರದು. ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿಕೊಡುವುದು ಸಾಮೂಹಿಕವಾದ ಜವಾಬ್ದಾರಿಯಾಗಿದೆ. ಇದು ನಾವು ಸಮಾಜಕ್ಕೆ ಕೊಡುವ ಕೊಡುಗೆಯಾಗಿದೆ. ಚಿಕ್ಕಪುಟ್ಟ ಘಟನೆಗಳನ್ನು ಮೇಲೈಸುವ ಸಣ್ಣತನದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗೆ ಪೂರಕವಾಗಿ ಪ್ರಜಾಸೇವೆ ಆಂದೋಲನ ಆರಂಭಿಸಲಾಗಿದೆ. ಆದರೆ ಕಾರ್ಯಾಂಗದ ಕೆಲಸ ನಿರ್ವಹಣೆ ಅತ್ಯಂತ ಸಮರ್ಪಕವಾಗಿ ಆದಾಗ ಕಾರ್ಯಕ್ರಮವೂ ಅತ್ಯಂತ ಯಶಸ್ವಿಯಾಗುತ್ತದೆ. ಈ ನಿಟ್ಟಿನಲ್ಲಿ ಕಾರ್ಯಾಂಗದ ಅಧಿಕಾರಿ ವರ್ಗ ಬಡ ಜನತೆ ಸಮಸ್ಯೆಗಳಿಗೆ- ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡಬೇಕು. ರೈತರಿಗೆ ಆಗುತ್ತಿರುವ ಸಮಸ್ಯೆಗಳು, ತಳಮಟ್ಟದಲ್ಲಿನ ಜನತೆಯ ಕಷ್ಟಗಳ ನಿವಾರಣೆಗಳಿಗೆ ಅಧಿಕಾರಿಗಳು ಮುಂದಾಗಬೇಕು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ದರ್ಶನ್ ವಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಅರುಣ್, ಪ್ರೊಬೆಷನರಿ ಐಎಎಸ್ ಹರ್ಷಿತ್ ಡೋಂಗ್ರೆ, ಮೆಸ್ಕಾಂ ಎಂ.ಡಿ ಹರೀಶ್ ಕುಮಾರ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿನಾಯಕ ನರ್ವಡೆ, ಡಿಎಫ್ಒ ರವಿಶಂಕರ್, ಪುತ್ತೂರು ಗ್ಯಾರಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಉಪಸ್ಥಿತರಿದ್ದರು. ತಹಶೀಲ್ದಾರ್ ಎಸ್.ಬಿ.ಕೂಡಲಗಿ ಸ್ವಾಗತಿಸಿದರು.