ಹುಬ್ಬಳ್ಳಿ:
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಎಸ್ಐಟಿ ಎಲ್ಲ ಆಯಾಮಗಳಲ್ಲೂ ತನಿಖೆ ನಡೆಸಬೇಕು. ಸಂತ್ರಸ್ತರಿಗೆ ನ್ಯಾಯ ದೊರೆಯಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪೆನ್ಡ್ರೈವ್ ವಿಚಾರದಲ್ಲಿ ಪ್ರಜ್ವಲ್ ರೇವಣ್ಣ ಕಾನೂನಾತ್ಮಕವಾಗಿ ಶರಣಾಗಿದ್ದಾರೆ. ಎಸ್ಐಟಿ ತನಿಖೆಯನ್ನು ಕಟುಬದ್ಧವಾಗಿ ಮಾಡಬೇಕು ಎನ್ನುವುದು ಇಡೀ ಕರ್ನಾಟಕ ಜನರ ಒತ್ತಾಯ ಎಂದರು.
ಇದು ಯಾವ ರೀತಿ ಪ್ರಚಲಿತಕ್ಕೆ ಬಂತು? ಯಾರು ಪ್ರಚಾರ ಮಾಡಿದರು?. ಪೆನ್ ಡ್ರೈವ್ ಯಾರ ಹತ್ತಿರ ಇತ್ತು? ಅವರು ಯಾಕೇ ಅರೆಸ್ಟ್ ಆದರು ಎನ್ನುವುದರ ಕುರಿತು ಹಲವು ಆಯಾಮ ಪಡೆದಿತ್ತು. ಖಂಡಿತವಾಗಿಯೂ ಇದರಲ್ಲಿ ರಾಜಕಾರಣವು ಬೆರೆತಿತ್ತು. ಇಂತಹದ್ದನ್ನು ಪ್ರಚಾರ ಮಾಡುವುದು ಕಾನೂನು ವಿರುದ್ಧವಾದದ್ದು. ಆ ನಿಟ್ಟಿನಲ್ಲಿ ಎಸ್ಐಟಿ ಮುಂದುವರಿದು ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.ಸರ್ಕಾರದ ನೈತಿಕತೆ ಪ್ರಶ್ನೆ:
ವಾಲ್ಮೀಕಿ ನಿಗಮದ ಸೂಪರಿಂಟೆಂಡೆಂಟ್ ಚಂದ್ರಶೇಖರ ಆತ್ಮಹತ್ಯೆ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ, ಚಂದ್ರಶೇಖರ ಪ್ರಕರಣವು ಸಿಬಿಐಗೆ ಹೋಗುವುದು ಯೋಗ್ಯ. ಇದರಲ್ಲಿ ಬ್ಯಾಂಕ್ ಕೂಡ ಪಾತ್ರವಹಿಸಿದೆ. ಬ್ಯಾಂಕ್ನ ನಿಯಮ ಪ್ರಕಾರ ₹ 10 ಕೋಟಿಗಿಂತ ಜಾಸ್ತಿ ವಹಿವಾಟುಗಳ ಅವ್ಯವಹಾರ ಕುರಿತಾಗಿ ಸಿಬಿಐ ತನಿಖೆ ನಡೆಯಬೇಕು ಅನ್ನುವುದು ಇದೆ. ಸಚಿವ ಬಿ. ನಾಗೇಂದ್ರ ರಾಜೀನಾಮೆ ವಿಚಾರದಲ್ಲಿ ಇಡೀ ಸರ್ಕಾರದ ನೈತಿಕತೆ ಪ್ರಶ್ನೆ ಇದೆ. ಹಿಂದೆ ವಿರೋಧ ಪಕ್ಷದಲ್ಲಿದ್ದಾಗ ಯಾವ ನೈತಿಕತೆ ಬಗ್ಗೆ ಮಾತನಾಡಿದ್ದರು. ಅದೇ ನಾಯಕರು ಇವತ್ತು ಸಿಎಂ, ಡಿಸಿಎಂ ಆಗಿದ್ದಾರೆ. ಹಾಗಾಗಿ ಅವರ ನೈತಿಕತೆ, ಸರ್ಕಾರದ ನೈತಿಕತೆಯ ಪ್ರಶ್ನೆಯಿದೆ. ಪ್ರಾಮಾಣಿಕತೆ ಉಳಿಸಿಕೊಳ್ಳುತ್ತಾರೋ ಇಲ್ಲಾ ಮಂತ್ರಿಯನ್ನು ಉಳಿಸಿಕೊಳ್ಳುತ್ತಾರೋ ಅನ್ನುವ ಪ್ರಶ್ನೆ ಅವರ ಮೇಲೆ ಇದೆ ಎಂದು ಹೇಳಿದರು.ಡಿಸಿಎಂ ಡಿ.ಕೆ. ಶಿವಕುಮಾರ ವಿರುದ್ಧ ಶತ್ರು ಭೈರವಿ ಯಾಗ ಮಾಡುತ್ತಿದ್ದಾರೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಬೊಮ್ಮಾಯಿ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾಗ ಯಜ್ಞ ಅವರಿಗೇ ಗೊತ್ತು ಎಂದು ಹೇಳಿದರು.