ಕನ್ನಡಪ್ರಭ ವಾರ್ತೆ ಹಾಸನ ಹಾಸನ ಲೋಕಸಭಾ ಕ್ಷೇತ್ರಕ್ಕೆ ಪ್ರಜ್ವಲ್ ಅಭ್ಯರ್ಥಿ ಎಂದು ದೇವೇಗೌಡರೇನೋ ಹೇಳಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯವಷ್ಟೆ. ಹಾಗಾಗಿ ಪ್ರಜ್ವಲ್ ರೇವಣ್ಣ ಅವರು ಬಿಜೆಪಿ ಮೈತ್ರಿಕೂಟದ ಒಮ್ಮತದ ಅಧಿಕೃತ ಅಭ್ಯರ್ಥಿ ಅಲ್ಲ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.
ಮೋದಿಯವರ ನೇತೃತ್ವದಲ್ಲಿ ಕಳಂಕಿತರಿಗೆ ಅವಕಾಶ ಇಲ್ಲ. ಪ್ರಜ್ವಲ್ ರೇವಣ್ಣ ಮೇಲಿನ ಆರೋಪ ಸಾಬೀತಾಗಿದೆ. ಹಾಗಾಗಿ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಘೋಷಣೆ ಮಾಡಿಕೊಂಡರೆ ನಮ್ಮದೇನು ತಕರಾರು ಇಲ್ಲ. ಆದರೆ ಅವರು ಮೈತ್ರಿಕೂಟ ಅಥವಾ ಎನ್.ಡಿ.ಎ. ಅಭ್ಯರ್ಥಿಯಾಗಿ ಘೋಷಣೆ ಸಾಧ್ಯವಿಲ್ಲ ಎಂದರು. ನಮ್ಮ ಜಿಲ್ಲೆಯ ಕಾರ್ಯಕರ್ತರು ಯಾರೂ ಕೂಡ ಗೊಂದಲಕ್ಕೆ ಒಳಗಾಗೋದು ಬೇಡ. ದೇವೇಗೌಡರು ಕಾರ್ಯಕರ್ತರ ಸಭೆಯನ್ನು ಕರೆದು ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಎಂದು ಘೋಷಣೆ ಮಾಡಿದ್ದಾರೆ. ಬಿಜೆಪಿ ತನ್ನದೆ ಆದ ನಿಯಮಗಳನ್ನು ಹೊಂದಿದೆ. ರಾಜ್ಯ ಹಾಗೂ ರಾಷ್ಟ್ರ ನಾಯಕರು ಇನ್ನೂ ತೀರ್ಮಾನ ಮಾಡಿಲ್ಲ. ಸ್ಥಳೀಯವಾಗಿರುವ ಬಿಜೆಪಿ ನಾಯಕರು, ಆರು ಲಕ್ಷಗಳ ಮತಗಳ ಬಿಜೆಪಿಗೆ ನೀಡಿದ್ದಾರೆ. ಕಾರ್ಯಕರ್ತರ ಮೇಲೆ ಹಲ್ಲೆ ಬೆದರಿಕೆಗಳು ಆಗುತ್ತಿವೆ ಎಂದು ಈ ಹಿಂದೆ ಹೇಳಿದ್ದೇನೆ.
ಜೆಡಿಎಸ್ ನಾಯಕರ ನೇತೃತ್ವದಲ್ಲಿ ಎನ್ ಡಿ ಎ ಮೈತ್ರಿ ಕೂಟದ ಅಭ್ಯರ್ಥಿ ಎಂದು ಘೋಷಣೆ ಮಾಡಲು ಯಾವುದೆ ನೈತಿಕತೆ ಇಲ್ಲ. ಜಿಲ್ಲೆಯಲ್ಲಿ ಗೊಂದಲವಾಗುವುದು ಬೇಡ. ಪಕ್ಷ ನಿರ್ಧಾರ ಮಾಡುತ್ತದೆ. ಈಗಾಗಲೇ ನಾಯಕರ ಗಮನಕ್ಕೆ ತಂದಿದ್ದೇವೆ. ನಮ್ಮ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಾಗ ಅವರಿಂದ ಆಗುವ ಅನುಕೂಲ, ಅನಾಕೂಲಗಳನ್ನು ತಿಳಿಸಲು ಪ್ರಯತ್ನ ಮಾಡುತ್ತೇನೆ. ನನ್ನದು ವೈಯಕ್ತಿಕ ಹೋರಾಟ. ಈ ಜಿಲ್ಲೆಯಲ್ಲಿ ಆ ಕುಟುಂಬದ ವಿರುದ್ಧ ಹೋರಾಟ ಮಾಡುವುದಾಗಿ ಎಚ್ಚರಿಸಿದರು.