ಬಾಗಲಕೋಟೆ : ಪ್ರಜ್ವಲ್ ಹಾಗೂ ಸೂರಜ್ಗೆ ನಾವೇನು ಹೇಳಿದ್ವಾ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಪ್ರಶ್ನಿಸಿದರು.
ದೇವೇಗೌಡ ಕುಟುಂಬ ಮುಗಿಸಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂಬ ಕೇಂದ್ರ ಸಚಿವ ಎಚ್ಡಿಕೆ ಆರೋಪ ಕುರಿತು ಬಾಗಲಕೋಟೆಯಲ್ಲಿ ಸೋಮವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಪಿಎಂ ದೇವೇಗೌಡರ, ಮಾಜಿ ಸಿಎಂ ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ನಮ್ಮ ಮಕ್ಕಳಿಗೂ ಕಾನೂನು ಒಂದೇ. ರಾಜಕೀಯ ಲಾಭಕ್ಕಾಗಿ ಕುಮಾರಸ್ವಾಮಿ ಹೇಳಿಕೆ ನೀಡುತ್ತಿದ್ದಾರೆ. ಎಚ್ಡಿಕೆ ಕೇಂದ್ರ ಸಚಿವರಿದ್ದಾರೆ. ಎಚ್ಡಿಕೆ ಯಾವಾಗಲೂ ಹಾಗೆಯೇ ಏನೋ ಸಿಂಪತಿ ಗೇಮ್ ಆಡಬೇಕು, ಲಾಭ ಪಡಿಯಬೇಕೆಂದು ಈ ರೀತಿ ಹೇಳುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ಇಂತಹ ಪ್ರಕರಣ ಮಾಡಿದವರನ್ನು ಬಿಟ್ಟರೆ ಸರ್ಕಾರಕ್ಕೆ ಒಳ್ಳೆಯದಾಗುತ್ತಾ?, ಇಂತಹ ಕೆಲಸ ಮಾಡುವುದು ತಪ್ಪೋ, ಸರಿಯೋ?, ಪ್ರಜ್ವಲ್, ಸೂರಜ್ ಮಾಡಿರೋದು ಸರಿಯಾಗಿಯೇ ಇದೆ. ಮಕ್ಕಳು ಅದ್ಭುತ್ ಕೆಲಸ ಮಾಡಿದ್ದಾರೆ. ಹಾಗಾಗಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಲಿ ಎಂದು ಸವಾಲ್ ಹಾಕಿದರು.
ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಬೀಳುತ್ತೆಂಬ ವಿಪಕ್ಷಗಳ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರೆಲ್ಲರೂ ಭ್ರಮೆಯಲ್ಲಿದ್ದಾರೆ. ಜನ ತಿರಸ್ಕರಿಸಿದರೂ ಮಾನ, ಮರ್ಯಾದೆಯ ಮಾತುಗಳಾ ಇವೆಲ್ಲ?. ಪ್ರಜಾಪ್ರಭುತ್ವದ ವಿರೋಧಿ ಮಾತುಗಳಿವು. ಇವರು ಹಗಲು ಕನಸು ಕಾಣುತ್ತಿದ್ದಾರೆ. ಇದೆಲ್ಲ ಆಗಲ್ಲ. ಬಿಜೆಪಿಗೆ ಕರ್ನಾಟಕದ ಜನ ಒಮ್ಮೆಯೂ ಬೆಂಬಲ ಕೊಟ್ಟಿಲ್ಲ, ಅಡ್ಡದಾರಿ ಹಿಡಿದೇ ಇವರು ಅಧಿಕಾರ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಡಿಸಿಎಂ ಹುದ್ದೆ ಕೇಳೋದರಲ್ಲಿ ತಪ್ಪಿಲ್ಲ:
ಡಿಸಿಎಂ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ, ಇದು ನಮ್ಮ ಪಕ್ಷ ತೆಗೆದುಕೊಳ್ಳಬೇಕಾದ ತೀರ್ಮಾನ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ಸ್ಪಷ್ಟಪಡಿಸಿದರು.
ಡಿಸಿಎಂ ಹುದ್ದೆ ಸೃಷ್ಟಿಸಬೇಕೆಂದು ಕೆಲವು ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಐಸಿಸಿ, ಕೆಪಿಸಿಸಿಯವರು ಏನು ತೀರ್ಮಾನ ತೆಗೆದುಕೊಳ್ತಾರೋ ಅದಕ್ಕೆ ನಾವು ಬದ್ಧ. ಕೊಟ್ಟರೇ ಯಾರ ತಾನೆ ಆಗಲ್ಲ ಅಂತಾರೆ?. ಸಿಎಂ ಆಗೋಕೆ ಯಾರು ಬೇಡ ಅಂತಾರೆ?, ನಿಭಾಯಿಸುವ ಶಕ್ತಿ ಎಲ್ಲರಿಗೂ ಇದೆ. ರಾಜಣ್ಣ ತಮ್ಮ ಸಲಹೆ ನೀಡಿದ್ದಾರೆ ಅಷ್ಟೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಸರ್ವ ಜನಾಂಗಕ್ಕೂ ಅವಕಾಶವಿದೆ. ಕೇಳುವುದು ತಪ್ಪಲ್ಲ, ಕೊಡುವುದು, ಬಿಡುವುದು ಹೈಕಮಾಂಡ್ ಗೆ ಬಿಟ್ಟಿದ್ದು ಎಂದು ತಿಳಿಸಿದರು.