ಬಿಜೆಪಿ ಯೋಜನೆಗಳಿಗೆ ಕಾಂಗ್ರೆಸ್‌ ಭೂಮಿಪೂಜೆ: ಪ್ರತಾಪ್‌ ಸಿಂಹ ಆರೋಪ

KannadaprabhaNewsNetwork |  
Published : Jan 29, 2024, 01:30 AM IST
ಪ್ರತಾಪ ಸಿಂಹ ಸುದ್ದಿಗೋಷ್ಠಿ | Kannada Prabha

ಸಾರಾಂಶ

ಕೊಡಗಿಗೆ ಏನು ಕೊಡುಗೆ ನೀಡಿದ್ದೀರಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಸಂಸದ ಪ್ರತಾಪ್‌ ಸಿಂಹ ತಿರುಗೇಟು ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಮ್ಮ ಸಾಧನೆ ಹಾಗೂ ಕಾಂಗ್ರೆಸ್‌ ಸರ್ಕಾರದ ಸುಳ್ಳುಗಳನ್ನು ಒತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಿಮ್ಮ ಮಾತನ್ನು ನಿಮ್ಮೂರಾದ ಮೈಸೂರಿನ ಜನರೇ ನಂಬುವುದಿಲ್ಲ ಸಿದ್ದರಾಮಯ್ಯನವರೇ, ದೇಶಪ್ರೇಮಿಗಳಾದ ಕೊಡಗಿನ ಜನ ನಂಬುತ್ತಾರೆಯೇ ಎಂದು ಸಂಸದ ಪ್ರತಾಪ್‌ಸಿಂಹ ವ್ಯಂಗ್ಯವಾಡಿದ್ದಾರೆ.ಕೊಡಗಿಗೆ ಏನು ಕೊಡುಗೆ ನೀಡಿದ್ದೀರಿ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.ಬಿಜೆಪಿ ಸರ್ಕಾರದ ಯೋಜನೆಗಳು, ಬಿಜೆಪಿ ನೀಡಿದ ಅನುದಾನಗಳನ್ನೇ ನೀವು ನೀಡಿದ್ದು ಎಂದು ಸುಳ್ಳಿನಿಂದ ಬಿಂಬಿಸಿ ಉದ್ಘಾಟಿಸಿ, ಭೂಮಿಪೂಜೆ ಮಾಡಲು ನಾಚಿಕೆಯಾಗೋದಿಲ್ಲವೇ ಎಂದು ಸಿದ್ದರಾಮಯ್ಯ, ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಾಪ್ ಸಿಂಹ ಹರಿಹಾಯ್ದರು.

ಕೊಡಗಿನ ಜನರಿಗೆ ಟೋಪಿ ಹಾಕಲು ಸಿದ್ದರಾಮಯ್ಯ ಕೊಡಗಿಗೆ ಬಂದಿದ್ದರು. ನಾನು ಮಡಿಕೇರಿಗೆ ಕ್ರಿಟಿಕಲ್ ಕೇರ್ ಸೆಂಟರ್ ತಂದಿದ್ದೇನೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗುತ್ತಿದೆ. ಜಿಲ್ಲೆಗೆ 63 ಮೊಬೈಲ್ ಟವರ್ ನೀಡಿದ್ದೇನೆ. ಪ್ರಧಾನಿ ಮಂತ್ರಿಗಳ ಯೋಜನೆಯಡಿ 83 ಕಿ.ಮೀ. ಸುಸಜ್ಜಿತ ರಸ್ತೆ ನಿರ್ಮಿಸಿದ್ದೇನೆ, ಕುಡಿಯುವ ನೀರಿನ ಯೋಜನೆಗಳು ಜಾರಿಯಾಗಿದೆ. ಸಾಕಷ್ಟು ಯೋಜನೆಗಳು ಸಂಸದರ ನಿಧಿಯಿಂದ ಬಳಕೆಯಾಗಿದೆ ಎಂದರು.

ಕೊಡಗಿನ ಶಾಸಕರು ತಮ್ಮ ದೂತರಿಂದ ಹೇಳಿಕೆ ಕೊಡಿಸುವ ಸಣ್ಣ ಬುದ್ಧಿಯ ರಾಜಕೀಯ ನಿಲ್ಲಿಸಲಿ. ಕೊಡಗಿಗೆ ತಮ್ಮ ಪ್ರಯತ್ನದಿಂದಲೇ ಅನುದಾನ ತರಲಿ ಎಂದು ಹೇಳಿದರು.

ಬಿಜೆಪಿ ಸರ್ಕಾರದ ಅನುದಾನ:

ಕೊಡಗಿನಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಅನುದಾನ ನೀಡತೊಡಗಿದ್ದೇ ಬಿಜೆಪಿ ಸರ್ಕಾರ. ತಮ್ಮದೇ ಎಂ.ಎಲ್.ಸಿ. ಇದ್ದರೂ ಕಾಂಗ್ರೆಸ್ ಹಾಕಿ ಪಂದ್ಯಾವಳಿಗೆ ಅನುದಾನ ನೀಡಿರಲಿಲ್ಲ ಎಂದು ಆರೋಪಿಸಿದ ಅವರು, ಕೊಡವ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಹೀಗಿದ್ದರೂ ಅನುದಾನ ಇಲ್ಲ ಎಂದು ಸುಳ್ಳು ಹೇಳುವ ಕೆಲಸವನ್ನು ಶಾಸಕರು ಮಾಡಿದ್ದಾರೆ ಎಂದು ತಿಳಿಸಿದರು.* ಶಾಸಕ ಮಂತರ್‌ ಗೌಡರಿಗೆ ಶ್ಲಾಘನೆಬಿಜೆಪಿ ಭೂಮಿಪೂಜೆ ಮಾಡಿದ ಯೋಜನೆಗಳಿಗೇ ಸಿದ್ದರಾಮಯ್ಯ, ಶಾಸಕರು ಮತ್ತೆ ಮತ್ತೆ ಭೂಮಿಪೂಜೆ ಮಾಡುತ್ತಿರುವುದು ನಾಚಿಕೆಗೋಡು. ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ತನ್ನದಲ್ಲದ ಯೋಜನೆಗಳ ಕ್ರೆಡಿಟ್ ತಾನು ತೆಗೆದುಕೊಳ್ಳುತ್ತಿಲ್ಲ. ಈ ನಿಟ್ಟಿನಲ್ಲಿ ಮಂಥರ್ ಗೌಡ ಶ್ಲಾಘನೀಯ ಎಂದು ಶಾಸಕರ ಬಗ್ಗೆ ಸಂಸದರ ಮೆಚ್ಚುಗೆ ವ್ಯಕ್ತಪಡಿಸಿದರು.

* ಸಿದ್ದರಾಮಯ್ಯ ಈಗ ಸುಳ್ಳುರಾಮಯ್ಯ

14 ಬಜೆಟ್ ನೀಡಿರುವ ಸಿದ್ದರಾಮಯ್ಯ ಸುಳ್ಳು ರಾಮಯ್ಯ ಆಗಿದ್ದಾರೆ. ಬರೀ ಸುಳ್ಳು ಹೇಳುತ್ತಾ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಸೂರ್ಯನಿಗೂ ಕೆಲವೊಮ್ಮೆ ಗ್ರಹಣ ಹಿಡಿಯುತ್ತದೆ. ನಂತರ ಪ್ರಜ್ವಲಿಸುವ ಸೂರ್ಯ ಕಾಣಿಸುತ್ತಾನೆ. ಅಂತೆಯೇ , ಕೊಡಗಿನಲ್ಲಿಯೂ ಬಿಜೆಪಿಗೆ ತಗುಲಿದ್ದ ಗ್ರಹಣ ದೂರವಾಗಿದೆ. 36 ವಿಎಸ್‌ಎಸ್‌ಎನ್‌ಗಳ ಪೈಕಿ 32ರಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೆ ಬಂದಿರುವುದು ಬಿಜೆಪಿಯನ್ನು ಕೊಡಗಿನ ಜನತೆ ಬೆಂಬಲಿಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದರು.2026ರಲ್ಲಿ ದೇಶಾದ್ಯಂತ ಲೋಕಸಭೆ, ವಿಧಾನಸಭೆಗಳ ಕ್ಷೇತ್ರಗಳು ಮರುವಿಂಗಡಣೆಯಾಗಲಿದೆ. ಆಗ ಕೊಡಗಿಗೂ ಪ್ರತ್ಯೇಕ ಲೋಕಸಭಾ ಸ್ಥಾನ ಖಂಡಿತಾ ಸಿಗಲಿದೆ ಎಂದು ಹೇಳಿದರು.ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾರೆ. ಕೊಡಗಿಗೆ ಬಂದು ಬಿಜೆಪಿ ಸಂಸದರು, ಮಾಜಿ ಶಾಸಕರ ಬಗ್ಗೆ ಏಕವಚನ ಬಳಕೆ ಸರಿಯಲ್ಲ. ನಮಗೂ ಏಕವಚನದಲ್ಲಿ ಮಾತನಾಡಲು ತಿಳಿದಿದೆ. ಆದರೆ ಏಕವಚನ ಬಳಕೆ ಕೊಡಗಿನ ಸಂಸ್ಕೃತಿಯಲ್ಲ ಎಂದರು.

ಮಡಿಕೇರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಅನುದಾನ ಬಿಜೆಪಿ ನೀಡಿದ್ದು. ಆದರೆ ಕಾಂಗ್ರೆಸ್ ತನ್ನ ಕಾಲದಲ್ಲಿ ನಡೆದದ್ದು ಎಂಬಂತೆ ಎಸ್‌ಪಿ ಕಚೇರಿ ಉದ್ಘಾಟಿಸಿದೆ. ಬಿಜೆಪಿ ಅನುದಾನದಲ್ಲಿ ಎಸ್‌ಪಿ ಕಚೇರಿ ನಿರ್ಮಾಣವಾಯಿತು ಎಂಬ ಸತ್ಯ ಕೊಡಗಿನವರಿಗೆ ತಿಳಿದಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಉದ್ಘಾಟನೆಗೆ ಮಾತ್ರ ಅದೃಷ್ಟವಂತ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೆಲ್ಲಾ ರಾಜ್ಯದಲ್ಲಿ ಬರ ತಾಂಡವವಾಡಿದೆ. ಬರ, ಮಳೆಯೇ ಸಿದ್ದರಾಮಯ್ಯ ರಾಜ್ಯದ ಜನತೆಗೆ ನೀಡುವ ಕೊಡುಗೆಯಾಗಿದೆ. ಕೊಡಗು ಎಂದರೆ ಸಿದ್ದರಾಮಯ್ಯ ಪಾಲಿಗೆ ಅಲರ್ಜಿ. ಕೊಡಗಿನ ಜನತೆಯನ್ನು ನಿರ್ಲಕ್ಷ್ಯಿವಹಿಸಿರುವ ಸಿದ್ದರಾಮಯ್ಯ ಅವರಿಂದ ಪಾಠ ಬೇಕಾಗಿಲ್ಲ. ಕಾಫಿ ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಲ್ಲಿಯೂ ಸಿದ್ದರಾಮಯ್ಯ ವಿಫಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ, ವಕ್ತಾರರಾದ ಮಹೇಶ್ ಜೈನಿ, ಸುಬ್ರಹ್ಮಣ್ಯ ಉಪಾಧ್ಯಾಯ, ಮಾಚಿಮಾಡ ರವೀಂದ್ರ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ