ಪ್ರವೀಣ್ ನೆಟ್ಟಾರ್ ಕಂಡ ಕನಸು ನನಸಾಗಿದ್ದು ಅಮ್ಮನಿಗೆ

KannadaprabhaNewsNetwork |  
Published : Apr 17, 2024, 01:18 AM IST
ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸುವ ತಂಡದಲ್ಲಿದ್ದ ಪ್ರವೀಣ್‌ ನೆಟ್ಟಾರು ತಾಯಿ ರತ್ನಾವತಿ, | Kannada Prabha

ಸಾರಾಂಶ

ಮೋದೀಜಿಯನ್ನು ಭೇಟಿಯಾಗಬೇಕು ಎನ್ನುವುದು ಪ್ರವೀಣನ ಕನಸಾಗಿತ್ತು. ಆದರೆ ಅವನಿಂದಾಗಿ ನನಗೆ ದೊರೆಯಿತು ಎಂದು ರತ್ನಾವತಿ ಕಣ್ಣೀರು ತುಂಬಿದ ಕಣ್ಣುಗಳಿಂದ ಹೇಳಿದರು.

ದುರ್ಗಾಕುಮಾರ್ ನಾಯರ್‌ಕೆರೆ

ಕನ್ನಡಪರ್ಭ ವಾರ್ತೆ ಸುಳ್ಯ

ಭಾನುವಾರ ಮಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರುವ ತಂಡದಲ್ಲಿ ದಿ. ಪ್ರವೀಣ್ ನೆಟ್ಟಾರ್ ಅವರ ತಾಯಿ ರತ್ನಾವತಿ ಶೇಖರ ಪೂಜಾರಿಯವರಿಗೆ ಅವಕಾಶ ದೊರೆತಿದ್ದು, ಮಗ ಪ್ರವೀಣ್‌ನಿಂದಾಗಿ ಈ ಅವಕಾಶ ತನಗೆ ದೊರೆಯಿತು ಎಂದು ರತ್ನಾವತಿ ಹೇಳಿಕೊಂಡಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿಗಳಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಕೋಟ ಶ್ರೀನಿವಾಸ ಪೂಜಾರಿ ಅವರ ಪರವಾಗಿ ರೋಡ್ ಶೋ ನಡೆಸಲು ಕಡಲ ನಗರಿ ಮಂಗಳೂರಿಗೆ ಆಗಮಿಸಿದ್ದ ಮೋದಿಯವರಿಗೆ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರುವ ತಂಡದಲ್ಲಿ ರತ್ನಾವತಿಯವರಿಗೂ ಅವಕಾಶ ನೀಡಲಾಗುವ ಕುರಿತು ಬಿಜೆಪಿ ಕಚೇರಿಯಿಂದ ತಿಳಿಸಲಾಗಿತ್ತು.ಅದರಂತೆ ಬಿಜೆಪಿ ಯುವ ನಾಯಕರಾಗಿದ್ದ ಪ್ರವೀಣ್ ನೆಟ್ಟಾರ್ ತಂದೆ ಶೇಖರ ಪೂಜಾರಿ, ತಾಯಿ ರತ್ನಾವತಿ ಹಾಗೂ ಸಹೋದರಿ ನಳಿನಿ ಮಂಗಳೂರಿಗೆ ತೆರಳಿದ್ದರು. ಭದ್ರತೆಯ ದೃಷ್ಟಿಯಿಂದ ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ಅವರಿಗೆ ಕೋವಿಡ್ ಪರೀಕ್ಷೆಯನ್ನೂ ನಡೆಸಲಾಗಿತ್ತು.

ಏರ್‌ಪೋರ್ಟ್‌ನಲ್ಲಿ ಪ್ರಧಾನಿ ಸ್ವಾಗತಿಸುವ ವೇಳೆ ರತ್ನಾವತಿ ಅವರಿಗೆ ಭದ್ರತಾ ಪಡೆಯ ತಪಾಸಣೆಯ ಬಳಿಕ ಒಳಗೆ ಹೋಗಲು ಅವಕಾಶ ನೀಡಲಾಗಿತ್ತು. ಕುಟುಂಬದ ಉಳಿದವರು ಹೊರಗಿದ್ದರು.

‘ವಿಮಾನದಿಂದ ಇಳಿದು ಮೋದೀಜಿ ಎಲ್ಲರಿಗೆ ನಮಸ್ಕರಿಸುತ್ತಾ ಬಂದರು. ನಾನು ಪ್ರವೀಣ್ ನೆಟ್ಟಾರ್ ಅಮ್ಮ ಎಂದು ಪರಿಚಯಿಸಿಕೊಂಡೆ. ಅವರು ಹಿಂದಿಯಲ್ಲಿ ಏನೋ ಹೇಳಿದರು. ನಮಗೆ ಅರ್ಥವಾಗಲಿಲ್ಲ’ ಎಂದು‌ ರತ್ನಾವತಿ ‘ಕನ್ನಡಪ್ರಭ’ದೊಂದಿಗೆ ಹೇಳಿಕೊಂಡರು.

ಫೊಟೋದಲ್ಲಿ, ಟಿ.ವಿ.ಯಲ್ಲಿ ಮಾತ್ರ ನೋಡುತ್ತಿದ್ದ ಮೋದಿಯವರನ್ನು ಕಣ್ಣೆದುರೇ ನೋಡುತ್ತೇನೆ ಎಂದು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ. ಆದರೆ ಅಂಥ ಸೌಭಾಗ್ಯ ದೊರೆಯಿತು. ಮೋದೀಜಿಯನ್ನು ಭೇಟಿಯಾಗಬೇಕು ಎನ್ನುವುದು ಪ್ರವೀಣನ ಕನಸಾಗಿತ್ತು. ಆದರೆ ಅವನಿಂದಾಗಿ ನನಗೆ ದೊರೆಯಿತು ಎಂದು ರತ್ನಾವತಿ ಕಣ್ಣೀರು ತುಂಬಿದ ಕಣ್ಣುಗಳಿಂದ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಜೆಟಲ್ಲಿ ಹೇಳಿದಂತೆ 15 ಸಾವಿರ ಶಿಕ್ಷಕರ ಹುದ್ದೆ ಭರ್ತಿ ಶೀಘ್ರ: ಮಧು
ಬೆಂಗಳೂರಿನ ಕೊಳಚೆ ನೀರಿಂದ ತರಕಾರಿಯೂ ವಿಷ : ಸಂಸತ್ತಲ್ಲಿ ಗೌಡ