ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ವಿಶ್ವಾದ್ಯಂತ ಕ್ರೈಸ್ತ ಧರ್ಮೀಯರ ಪ್ರಮುಖ ಹಬ್ಬಗಳಲ್ಲಿ ಒಂದಾದ ಕ್ರಿಸ್ತ ಜನನದ (ಕ್ರಿಸ್ಮಸ್) ಹಬ್ಬವನ್ನು ಕ್ರೈಸ್ತ ಬಾಂಧವರು ವರ್ಷದ ಕೊನೆಯ ದಿನ ಹಬ್ಬ ಹಾಗೂ ಹೊಸ ವರ್ಷದ ಸಡಗರ ಸಂಭ್ರಮದಲ್ಲಿ ಅಣಿಯಾಗುತ್ತಿದ್ದಾರೆ. ಈ ಸಂದರ್ಭ ವಿವಿಧ ಧರ್ಮಕೇಂದ್ರಗಳಿಂದ ಮನೆ ಮನೆಗಳಿಗೆ ಕ್ಯಾರೋಲ್ಸ್ ಗಾಯನ ವೃಂದ ತಂಡ, ಸಾಂತಕ್ಲಾಸ್ ವೇಷಧಾರಿ, ಧರ್ಮಗುರುಗಳು, ಕನ್ಯಾಸ್ತ್ರೀಯರು ತೆರಳಿ ಪ್ರಾರ್ಥಿಸಿ, ಕ್ರಿಸ್ತರ ಶುಭಸಂದೇಶವನ್ನು ವಾಚಿಸಿ ಮನೆಮಂದಿಗೆ ಶುಭಾಶಯ ಕೋರುತ್ತಾರೆ. ಇದು ಈ ಹಬ್ಬದ ವೈಶಿಷ್ಟ್ಯಯತೆಯಲ್ಲಿ ಒಂದು.ಕ್ರಿಸ್ಮಸ್ ಹಬ್ಬದ ಅಂಗವಾಗಿ ಡಿ.1ರಿಂದ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ವತಿಯಿಂದ ಧರ್ಮಗುರು, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ಸಂತ ಕ್ಲಾಸ್ ವೇಷಧಾರಿ, ಯುವಕ ಯುವತಿಯರು, ಕ್ಯಾರೋಲ್ಸ್ ವೃಂದದವರು ಕ್ರೈಸ್ತರ ಮನೆಗಳಿಗೆ ತೆರಳಿ ಪ್ರಾರ್ಥನೆ ಗಾಯನಗಳನ್ನು ಹಾಡುತ್ತಾ, ಕ್ರಿಸ್ತ ಜಯಂತಿ ಶುಭ ಸಂದೇಶವನ್ನು ಸಾರುತ್ತಾ ಆರ್ಶೀವಚನ ನೀಡಿ ಶುಭಾಶಯ ಕೋರುವ ಕಾರ್ಯದಲ್ಲಿ ತೊಡಗಿಸಿಕೊಂಡರು.ಕ್ರೈಸ್ತ ಬಾಂಧವರು ಡಿಸೆಂಬರ್ ತಿಂಗಳಲ್ಲಿ ಮನೆಗಳಿಗೆ ಸುಣ್ಣ ಬಣ್ಣ ಬಳಿದು ವಿವಿಧ ಬಗೆಯ ನಕ್ಷತ್ರಗಳನ್ನು ಮನೆಯ ಮೇಲ್ಛಾವಣಿಗಳ ಮೇಲೆ ಅಳವಡಿಸುವುದು, ಮನೆಗಳಲ್ಲಿ ಕ್ರಿಸ್ತನ ಜನನದ ಸ್ಥಳವಾದ ಗೋದಾಲಿ (ದನದಕೊಟ್ಟಿಗೆ) ನಿರ್ಮಾಣ, ಮಹಿಳೆಯರು ವಿವಿಧ ಬಗೆ ಬಗೆಯ ತಿಂಡಿ ತಯಾರಿಸುತ್ತಾರೆ.ಕ್ಯಾರೋಲ್ಸ್ ಗಾಯನದ ಅಂಗವಾಗಿ ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ರೇ.ಫಾ. ಅರುಳ್ ಸೆಲ್ವಕುಮಾರ್, ಸಹಾಯಕ ಧರ್ಮಗುರುಗಳಾದ ನವೀನ್ ಕುಮಾರ್, ಸಾಂತಕ್ಲಾಸ್ ವೇಷಾಧಾರಿ, ಸಂತ ಕ್ಲಾರ ಕಾನ್ವೆಂಟಿನ ಕನ್ಯಾಸ್ತ್ರೀಯರು, ದೇವಾಲಯದ ಪಾಲನಾ ಸಮಿತಿಯ ಪದಾಧಿಕಾರಿಗಳು, ಯುವಕ ಯುವತಿಯರು ಹಾಗೂ ಚಿಕ್ಕ ಮಕ್ಕಳು ಮನೆ ಮನೆಗೆ ತೆರಳಿ ವಿಶೇಷ ಪ್ರಾರ್ಥನೆ, ಗಾಯನವನ್ನು ಹಾಡುತ್ತಾ ಶುಭ ಸಂದೇಶವನ್ನು ವಾಚಿಸಿ ಕ್ರಿಸ್ತರ ಜನನದ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.