ಕೊಪ್ಪಳ: ನಗರದ ಗವಿಮಠದ ಜಾತ್ರಾ ಮಹಾರಥೋತ್ಸವ ಹಿನ್ನೆಲೆಯಲ್ಲಿ ಗವಿಮಠದಲ್ಲಿ ಸಿದ್ಧತೆ ಕಾರ್ಯಗಳು ಭರದಿಂದ ಸಾಗುತ್ತಿವೆ.ಬೆಳಗ್ಗೆಯಿಂದ ಮಠದ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಶ್ರೀಮಠದ ಆವರಣ, ಕೆರೆ-ಕೆರೆಯಂಗಳ, ಗುಡ್ಡ, ಗವಿ, ಜಾತ್ರಾ ಮೈದಾನ, ರಸ್ತೆ, ರಥಬೀದಿ ನಾನಾ ಕಡೆಗಳಲ್ಲಿ ಸ್ವಚ್ಛತಾ ಸಿಬ್ಬಂದಿ ನಿರಂತರ ಕಾಯಕದಲ್ಲಿ ನಿರತರಾಗಿದ್ದರು.ದಿನದಿಂದ ದಿನಕ್ಕೆಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಸಡಗರ ಜನರಲ್ಲಿ ಇಮ್ಮಡಿ ಆಗುತ್ತಿದೆ. ಹೆಚ್ಚು ಭಕ್ತರು ಜಾತ್ರಾ ಮಹೋತ್ಸವಕ್ಕೆ ಆಗಮಿಸುತ್ತಾರೆ. ಮಠದ ಪ್ರತಿ ಸ್ಥಳವನ್ನು ಗವಿಸಿದ್ದೇಶ್ವರ ಶ್ರೀ ಅತ್ಯಂತ ಕಾಳಜಿ ವಹಿಸಿ ಸ್ವಚ್ಛತೆ ಮಾಡಿಸುತ್ತಿದ್ದಾರೆ. ಬರುವ ಭಕ್ತರಿಗೆ ಎಲ್ಲಿಯೂ ತೊಂದರೆ ಆಗಬಾರದು ಎಂದು ದಾಸೋಹ ಹಾಗೂ ವಿಶ್ರಾಂತಿ ಸ್ಥಳ, ನಿಲ್ಲುವ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿದ್ದಾರೆ. ದಾಸೋಹ ಸ್ಥಳ ವಿಶಾಲವಾಗಿದೆ. ಭಕ್ತರ ಜನದಟ್ಟಣೆ ಆಗದ ರೀತಿ, ಎಷ್ಟೇ ಭಕ್ತರು ಬಂದರೂ ಅವರಿಗೆ ಅನುಕೂಲ ಆಗುವ ರೀತಿ ದಾಸೋಹ ಮಂಟಪ ಸಿದ್ಧತೆ ಆಗುತ್ತಿದೆ.ರಾಜ್ಯ, ಅನ್ಯರಾಜ್ಯಗಳಿಂದಲೂ ಜನರು ಗವಿಸಿದ್ದೇಶ್ವರ ಜಾತ್ರೆಗೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ. ನಗರ ಸಹ ಗವಿಸಿದ್ದೇಶ್ವರ ಜಾತ್ರೆಗೆ ಸಿದ್ಧವಾಗುತ್ತಿದೆ. ನಗರವನ್ನು ನಗರಸಭೆಯವರು ಸ್ವಚ್ಛತೆ ಮಾಡಿಸುತ್ತಿದ್ದಾರೆ. ನಗರದ ಪ್ರಮುಖ ಬೀದಿ ಹಾಗೂ ಗವಿಮಠ ರಸ್ತೆಗಳು ಭಕ್ತರನ್ನು ಸ್ವಾಗತಿಸುತ್ತಿವೆ.