ಕನ್ನಡಪ್ರಭವಾರ್ತೆ ಪಾವಗಡ
ಪಾವಗಡ ಪಟ್ಟಣದ ನಾಯಕ ಸಮಾಜದ ವತಿಯಿಂದ ನವೆಂಬರ್ 3ರಂದು ಭಾನುವಾರ ಪಟ್ಟಣದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಗೆ ಸಿದ್ಧತೆ ಕೈಗೊಂಡಿದ್ದು ಯಶಸ್ವಿಗೊಳಿಸುವಂತೆ ವಾಲ್ಮೀಕಿ ನಾಯಕ ಸಮಾಜದ ಯುವ ಮುಖಂಡ ನರಸಿಂಹ ಮೂರ್ತಿ ಕರೆ ನೀಡಿದರು.ಸೋಮವಾರ ಪಟ್ಟಣದ ಕುಮಾರಸ್ವಾಮಿ ಬಡಾವಣೆಯ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನದಲ್ಲಿ ಪಾವಗಡ ಟೌನ್ ಮಟ್ಟದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಸಂಬಂಧ ಹಮ್ಮಿಕೊಂಡಿದ್ದ ಪೂರ್ವ ಬಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ನಾಯಕ ಸಮಾಜದ ವತಿಯಿಂದ ನ,3ರಂದು ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅತ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಗುವುದು. ಮುಂದಿನ ಬಾರಿ ತಾಲೂಕು ಮಟ್ಟದಲ್ಲಿ ವಾಲ್ಮೀಕಿ ಜಯಂತಿಯನ್ನು ಮತ್ತಷ್ಟು ಅದ್ಧೂರಿಯಾಗಿ ಆಚರಣೆ ಮಾಡಲು ಯುವಕರಿಗೆ ಸಲಹೆ, ಸೂಚನೆಗಳನ್ನು ನೀಡಿದರು.ಪುರಸಭೆ ಅಧ್ಯಕ್ಷರಾದ ಪಿ.ಎಚ್.ರಾಜೇಶ್ ಸಭೆಗೆ ಆಗಮಿಸಿ ಸಭೆಯ ಅಭಿಪ್ರಾಯದಂತೆ ನವೆಂಬರ್ 3ರಂದು ಮಹರ್ಷಿ ವಾಲ್ಮೀಕಿ ಜಯಂತಿಯ ಆಚರಣೆಗೆ ಸಲಹೆ ನೀಡಿದ್ದು, ರಾಜನಹಳ್ಳಿ ವಾಲ್ಮೀಕಿ ಶ್ರೀಗಳು ಹಾಗೂ ನಿಡಗಲ್ಲು ವಾಲ್ಮೀಕಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಬೆಳಗ್ಗೆ 9 ಗಂಟೆಗೆ ವಾಲ್ಮೀಕಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಬೆಳಗ್ಗೆ 10 ಗಂಟೆಗೆ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದ ಅಲಂಕೃತಗೊಂಡ ಬೆಳ್ಳಿ ರಥದಲ್ಲಿ ವಾಲ್ಮೀಕಿ ಭಾವಚಿತ್ರದೊಂದಿಗೆ ಮೆರವಣಿಗೆ ತೆರಳಲಾಗುವುದು. ಮಹಿಳೆಯರ ಆರತಿ, ಕಳಸಗಳೊಂದಿಗೆ ಡೊಳ್ಳು ಕುಣಿತ, ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ಟೋಲ್ಗೇಟ್ನಲಿರುವ ಅಮ್ಮ ಶ್ರೀ ಚೌಡೇಶ್ವರಿ ದೇವಸ್ಥಾನ ಬಳಿ ಪ್ರಸಾದ ಸ್ವೀಕರಿಸಿ ನಂತರ ಮೆರವಣಿಗೆಯೊಂದಿಗೆ ನಗರದ ಶ್ರೀ ಶನಿಮಹಾತ್ಮಸ್ವಾಮಿ ವೃತ್ತ ದವರೆಗೂ ಸಾಗಲಿದೆ ಎಂದರು.ವಾಲ್ಮೀಕಿ ಜಯಂತಿ ಆಚರಣೆಯ ರೂಪುರೇಷೆ ಸಿದ್ಧತೆ ಹಾಗೂ ಜಯಂತಿ ಆಚರಣೆ ಸಮಿತಿಯನ್ನು ರಚಿಸಲಾಯಿತು. ನಾಯಕ ಸಮಾಜದ ಮುಖಂಡ ನಿವೃತ್ತ ಅಧಿಕಾರಿ ಶ್ರೀನಿವಾಸ ನಾಯಕ, ಪುರಸಭೆ ಸದಸ್ಯ ಗುಟ್ಟಹಳ್ಳಿ ಅಂಜಪ್ಪ, ದೇವಸ್ಥಾನ ಅಭಿವೃದ್ಧಿ ಸಮಿತಿಯ ಈರಣ್ಣ, ವಾಲ್ಮೀಕಿ ಸಂಘಟನೆಯ ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಉಪಸ್ಥಿತರಿದ್ದರು.