ರೋಣ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ 2025-26 ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ಇಲಾಖೆ ಸಿದ್ಧಪಡಿಸಿದ ವೇಳಾಪಟ್ಟಿಯಂತೆ ಬೇಡಿಕೆ ಆಧಾರಿತ ಕ್ರಿಯಾಯೋಜನೆ ಸಿದ್ದಪಡಿಸಿ ಇಲಾಖೆಗೆ ಸಲ್ಲಿಸಬೇಕು ಎಂದು ತಾಪಂ ಸಹಾಯಕ ನಿರ್ದೇಶಕ ಚಂದ್ರಶೇಖರ ಕಂದಕೂರ ಹೇಳಿದರು.
ತಾಲೂಕಿನ ಸವಡಿ ಗ್ರಾಪಂನಲ್ಲಿ ಹಮ್ಮಿಕೊಂಡಿದ್ದ ಉದ್ಯೋಗ ಖಾತ್ರಿ ನಡಿಗೆ ಸಬಲತೆಯೆಡೆಗೆ ಅಭಿಯಾನ ಕಾಮಗಾರಿ ಬೇಡಿಕೆ ಪಡೆದುಕೊಳ್ಳುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ತಾಲೂಕಿನ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿ ಪ್ರತಿಯೊಂದು ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಿ ಬೇಡಿಕೆ ಸ್ವೀಕರಿಸಬೇಕು, ಗಂಡು-ಹೆಣ್ಣಿಗೆ ಸಮಾನ ಕೂಲಿ, ಯೋಜನೆಯಡಿ ದೊರೆಯುವ ವೈಯಕ್ತಿಕ ಸೌಲಭ್ಯ ಅರ್ಹತೆ, ಗ್ರಾಮೀಣ ಪ್ರದೇಶದಲ್ಲಿ ಕುಟುಂಬಕ್ಕೆ 100 ದಿವಸ ಕೆಲಸ ಖಾತ್ರಿ ಸೇರಿದಂತೆ ನರೇಗಾ ಯೋಜನೆ ಸಂಪೂರ್ಣ ಮಾಹಿತಿ ನೀಡಬೇಕು ಎಂದರು.ಕ್ರೀಯಾ ಯೋಜನೆ ಪಟ್ಟಿಯಂತೆ ಪ್ರತಿ ಗ್ರಾಪಂನಲ್ಲಿ ಕೆಲಸ ನೀಡುವ ನರೇಗಾ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಬೇಕು, 30 ವರೆಗೆ ಗ್ರಾಪಂ ಮಟ್ಟದ ವಾರ್ಷಿಕ ಕ್ರೀಯಾ ಯೋಜನೆಯ ಅನುಮೋದನೆಗಾಗಿ ವಿಶೇಷ ಗ್ರಾಮ ಸಭೆ ಮಾಡಬೇಕು, 5 ರ ಒಳಗೆ ಗ್ರಾಪಂ ವಾರ್ಷಿಕ ಕ್ರೀಯಾ ಯೋಜನೆಯನ್ನು ತಾಪಂಗೆ ಸಲ್ಲಿಸಬೇಕು ಎಂದರು.
ಇನ್ನು ಗ್ರಾಪಂ ವ್ಯಾಪ್ತಿಯ ಎಲ್ಲ ಗ್ರಾಮದ ಮನೆ ಮನೆಗೆ ನರೇಗಾ ಯೋಜನೆಯ ಕುರಿತು ಕರಪತ್ರ ನೀಡಿ ಬೇಡಿಕೆ ಸ್ವೀಕರಿಸಲಾಗುತ್ತಿದ್ದು, ಯಾವುದೇ ಮಾಹಿತಿ ಮತ್ತು ಕುಂದು ಕೊರತೆಗಾಗಿ 8277506000 ಏಕೀಕೃತ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಲು ಸಲಹೆ ನೀಡಿದರು. ಒಂದು ದಿನದ ಕೂಲಿ ಪಡೆಯಲು ಮಾಡಬೇಕಾದ ಕೆಲಸ ಪ್ರಮಾಣ ಮತ್ತು ಕೆಲಸದ ಅವಧಿ, ಯೋಜನೆ ಅಡಿ ದೊರೆಯುವ ವೈಯಕ್ತಿಕ ಸೌಲಭ್ಯ ಮತ್ತು ಅರ್ಹತೆ, ಕಾಮಗಾರಿ ಪ್ರಮಾಣದಲ್ಲಿ ಗ್ರಾಮ ಸಭೆಗಳನ್ನು ಪಂಚಾಯತ್ ರಾಜ್ ಕಾಯ್ದೆಯ ನಿಯಮನುಸಾರ ನ. 30 ರೊಳಗೆ ಆಯೋಜಿಸಿ ವಾರ್ಡ್ ಸಭೆಗಳಲ್ಲಿ ಸ್ವೀಕೃತವಾದ ಕಾಮಗಾರಿಗಳ ಕ್ರೋಡೀಕೃತ ಪಟ್ಟಿ ತಯಾರಿಸಿ ಅದರಲ್ಲಿ ಆದ್ಯತಾವಾರು ಪಟ್ಟಿ ಸಿದ್ಧಪಡಿಸಿ ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮತಿ ಪಡೆದುಕೊಳ್ಳಬಹುದೆಂದು ತಿಳಿಸಿದರು.ಈ ಸಂದರ್ಭದಲ್ಲಿ ಪಂಚಾಯತ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ತಾಂತ್ರಿಕ ಸಹಾಯಕರು, ಇಂಜಿನಿಯರ, ಬಿಎಫ್ಟಿ ಹಾಗೂ ಗ್ರಾಮಸ್ಥರು ಹಾಜರಿದ್ದರು.