ಪ್ರಗತಿ ಪರಿಶೀಲನೆ ಸಭೆಯಲ್ಲಿ ನರೇಗಾ ಯೋಜನೆಯ ಮೇಲುಸ್ತುವಾರಿ ಅಧಿಕಾರಿ
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಅನುಷ್ಠಾನದಲ್ಲಿ ತಾಲೂಕಾ ಮಟ್ಟದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ, ಚುನಾಯಿತ ಜನಪ್ರತಿನಿಧಿಗಳ ಸಹಕಾರ ಪಡೆದು ಯಶಸ್ವಿ ಸಾಧಿಸಬೇಕು ಎಂದು ನರೇಗಾ ಯೋಜನೆಯ ಮೇಲುಸ್ತುವಾರಿ ಅಧಿಕಾರಿ ಪ್ರಕಾಶ್ ವಡ್ಡರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾಡಿದ ಅವರು, ೨೦೨೫-೨೬ನೇ ಸಾಲಿನ ಕ್ರಿಯಾ ಯೋಜನೆ ತಯಾರಿಕೆ ಪ್ರಕ್ರಿಯೆ ಪ್ರಾರಂಭದಲ್ಲಿದೆ. ವಾರ್ಡ್ ಮತ್ತು ಗ್ರಾಮ ಸಭೆಯಲ್ಲಿ ಬಂದ ಕಾಮಗಾರಿಗಳಿಗೆ ತಾಂತ್ರಿಕ ಸಹಾಯಕರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ನೈಜ ಕಾಮಗಾರಿಗಳನ್ನು ಉತ್ತೇಜಿಸಿ ಪ್ರಾರಂಭಿಸಬೇಕು ಎಂದರು.ಜನಸಾಮಾನ್ಯರಿಗೆ ಕೆಲಸ ನೀಡಲು ಕೆರೆ ಹೂಳೆತ್ತುವುದು, ನಾಲಾ ಸುಧಾರಣೆ, ಗೋಕಟ್ಟೆ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ, ಶಾಲಾ ಅಭಿವೃದ್ಧಿ ಕಾಮಗಾರಿಗಳು, ಸ್ವಚ್ಛ ಭಾರತ ಯೋಜನೆಯಡಿ ಬೂದು ನೀರು ನಿರ್ವಹಣೆ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸುವ ಮೂಲಕ ಪ್ರತಿ ಗ್ರಾಪಂಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲು ಸಮುದಾಯ ಕಾಮಗಾರಿ ಪ್ರಾರಂಭಿಸಬೇಕು. ಎಲ್ಲಾ ಗ್ರಾಪಂಯಲ್ಲಿನ ಎಲ್ಲಾ ಸಕ್ರಿಯ ಜಾಬ್ ಕಾರ್ಡ್ಗಳ ಕೂಲಿಕಾರರಿಗೆ ಕೆಲಸ ನೀಡಲು ಪಿಡಿಒಗಳು, ತಾಂತ್ರಿಕ ಸಹಾಯಕರು, ಬಿಎಫ್ಟಿ ಮತ್ತು ಜಿಕೆಎಂಗಳು ಫಾರ್ಮ ನಂಬರ್ -೬ಅನ್ನು ಸಂಗ್ರಹಿಸಿ ಕೆಲಸ ನೀಡಲು ಕ್ರಮ ವಹಿಸಬೇಕು ಎಂದು ಹೇಳಿದರು.
ವಿವಿಧ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಕೃಷಿ, ಅರಣ್ಯ, ರೇಷ್ಮೇ ಇಲಾಖೆಗಳಲ್ಲಿ ಕಾಮಗಾರಿಗಳನ್ನು ಪ್ರಾರಂಭಿಸಬೇಕು. ವಿಧವೆಯರು, ವಯೋವೃದ್ಧರು, ಅಂಗವಿಕಲರಿಗೆ ವಿಶೇಷ ಆದ್ಯತೆ ನೀಡಿ ನರೇಗಾ ಕೆಲಸ ನೀಡಬೇಕು. ವಸತಿ ಯೋಜನೆಯಡಿ ಅನುಷ್ಠಾನಗೊಳಿಸಲು ೨.೦ದಡಿಯಲ್ಲಿ ಅಮೃತ ಸರೋವರ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಆಯ್ಕೆ ಮಾಡಿ ಅನುಷ್ಠಾನ ಮಾಡಬೇಕೆಂದರು.