ಅಶೋಕ ಶಿಲಾ ಶಾಸನ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಿ: ಶಾಸಕ ಆರ್.ಬಸನಗೌಡ ತುರ್ವಿಹಾಳ

KannadaprabhaNewsNetwork |  
Published : Sep 25, 2024, 12:49 AM IST
24-ಎಂ ಎಸ್ ಕೆ -01: | Kannada Prabha

ಸಾರಾಂಶ

ಮಸ್ಕಿ ಅಶೋಕನ ಶಿಲಾ ಶಾಸನಕ್ಕೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಸ್ಕಿ

ಅಶೋಕನ ಶಿಲಾಶಾಸನದ ಅಭಿವೃದ್ಧಿಗಾಗಿ ಪ್ರಾಚ್ಯವಸ್ತು ಹಾಗೂ ಪ್ರವಾಸೋದ್ಯಮ ಇಲಾಖೆ ಶೀಘ್ರ ನೀಲನಕ್ಷೆ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಖಾದಿ ಗ್ರಾಮೋದ್ಯೋಗ ನಿಗಮದ ಅಧ್ಯಕ್ಷ, ಶಾಸಕ ಆರ್.ಬಸನಗೌಡ ತುರ್ವಿಹಾಳ ಸೂಚಿಸಿದರು.

ಪಟ್ಟಣದ ಮುದುಗಲ್ ರಸ್ತೆಯಲ್ಲಿರುವ ಅಶೋಕ ಶಿಲಾ ಶಾಸನ ಸ್ಥಳದ ಅಭಿವೃದ್ಧಿಗೆ ಸರ್ಕಾರ ₹10 ಕೋಟಿ ಮೀಸಲು ಇಟ್ಟಿರುವ ಹಿನ್ನೆಲೆ ಮಂಗಳವಾರ ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಅಶೋಕ ವೃತ್ತದ ಅಭಿವೃದ್ಧಿ ಜೊತೆ ಶಾಸನ ಸ್ಥಳದವರೆಗೆ ಡಿವೈಡರ್ ಹಾಗೂ ಬೀದಿ ದೀಪ ಅಳವಡಿಕೆ ಜೊತೆಗೆ ಶಿಲಾ ಶಾಸನದ ಮುಂಭಾಗದಲ್ಲಿ ಉದ್ಯಾನ,ವನ, ವಾಕಿಂಗ್ ಪಾತ್, ಮ್ಯೂಸಿಯಂ, ವಿದ್ಯುತ್ ದೀಪಗಳ ಅಳವಡಿಕೆ, ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಕರ್ಯಗಳನ್ನು ಇಟ್ಟುಕೊಂಡು ನೀಲನಕ್ಷೆ ತಯಾರಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಸಲ್ಲಿಸಿದರೆ ಶೀಘ್ರದಲ್ಲಿ ಸರ್ಕಾರ ಹಣ ಬಿಡುಗಡೆ ಮಾಡಲಿದೆ ಎಂದರು.

ತಹಸೀಲ್ದಾರ್ ಡಾ.ಮಲ್ಲಪ್ಪ ಯರಗೋಳ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ಪುರಸಭೆ ಮುಖ್ಯಾಧಿಕಾರಿ ನರಸರೆಡ್ಡಿ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಂದ್ರ ಜಲ್ದಾರ್, ಪುರಾತತ್ವ ಇಲಾಖೆ ಎಂಜನಿಯರ್ ಕೀರಣಕುಮಾರ, ಲೋಕೋಪಯೋಗಿ ಇಲಾಖೆ ಸಂದೀಪ, ಲಕ್ಷ್ಮಿಕಾಂತ ಗುಂಟಿ ಕ್ಯಾಷುಟೆಕ್ ಎಂಜನಿಯರ್ ಗಳಾದ ತಿಮ್ಮಣ್ಣ ಮೇಲ್ ಸಕ್ರಿ, ಕೌಸರ್ ಪಾಷಾ. ಸರ್ವೇ ಇಲಾಖೆ ಸಹಾಯಕ ನಿರ್ದೇಶಕ ಗೀರೀಶ, ಸೇರಿದಂತೆ ವಿವಿಧ ಅಧಿಕಾರಿಗಳು ಇದ್ದರು.

ಪೂರ್ಣ ಅನುದಾನ ಬಳಕೆ ಮಾಡಿಕೊಳ್ಳಿ

ಪ್ರವಾಸೋದ್ಯಮ ಇಲಾಖೆಯಿಂದ ಅಶೋಕನ ಶಿಲಾ ಶಾಸನ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸರ್ಕಾರ ನೀಡಿರುವ ₹10 ಕೋಟಿ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಆಗುವಂತೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಿ, ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಶಾಸಕ ಆರ್.ಬಸನಗೌಡ ತುರ್ವಿಹಾಳ ಹೇಳಿದರು.

ಹಳೆಯ ಪ್ರವಾಸಿ ಮಂದಿರ ನೆಲಸಮಕ್ಕೆ ಸೂಚನೆ

ಮಸ್ಕಿ ಪಟ್ಟಣದ ಗಾಂಧಿನಗರದಲ್ಲಿರುವ ಹಳೆಯದಾಗಿರುವ ಪ್ರವಾಸಿ ಮಂದಿರವನ್ನು ಪಿಡಬ್ಲ್ಯೂಡಿ ಇಲಾಖೆಯವರು ನೆಲಸಮ ಗೊಳಿಸಲು ಬೇಕಾದ ಸಿದ್ಧತೆ ಮಾಡಿಕೊಂಡು ಕಟ್ಟಡವನ್ನು ನೆಲಸಮಗೊಳಿಸಿ ಮುಂದಿನ ದಿನಗಳಲ್ಲಿ ಯಾವುದಾದರೂ ಸರ್ಕಾರಿ ಕಟ್ಟಡವನ್ನು ಕಟ್ಟಲು ಅನುಕೂಲವಾಗಲಿದೆ ಎಂದು ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳಿಗೆ ಶಾಸಕ ಆರ್.ಬಸನಗೌಡ ತುರ್ವಿಹಾಳ ಸೂಚಿಸಿದರು.

ಅಶೋಕ ಶಿಲಾ ಶಾಸನ ಸ್ಥಳ ಪರಿಶೀಲನೆ

ಶಾಸಕ ಆರ್ ಬಸನಗೌಡ ತುರ್ವಿಹಾಳ್ ಅಧಿಕಾರಿಗಳ ತಂಡದೊಂದಿಗೆ ಅಶೋಕ ಶಿಲಾಶಾಸನ ಸ್ಥಳಕ್ಕೆ ಭೇಟಿ ನೀಡಿ ₹10 ಕೋಟಿ ವೆಚ್ಚದಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು, ಮುಖಂಡ ಮಲ್ಲಿಕಾರ್ಜುನ ಪಾಟೀಲ ಯದ್ದಲದಿನ್ನಿ, ಹನುಮಂತಪ್ಪ ಮುದ್ದಾಪೂರ, ನಾರಾಯಣಪ್ಪ ಕಾಸ್ಲಿ ಇತರರು ಇದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ