ಕನ್ನಡಪ್ರಭ ವಾರ್ತೆ ಆಲಮಟ್ಟಿ
ಸ್ಥಳೀಯ ಎಸ್.ವಿ.ವಿ.ಸಂಸ್ಥೆಯ ಮಂಜಪ್ಪ ಹರ್ಡೇಕರ್ ಸ್ಮಾರಕ ಸಂಯುಕ್ತ ಪಪೂ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲೆಗೆ ಗುರುವಾರ ಭೇಟಿ ನೀಡಿ ಎಸ್ಸೆಸ್ಸೆಲ್ಸಿ ಮಕ್ಕಳೊಂದಿಗೆ ನಡೆಸಿದರು. ಇದು ನನ್ನ ಏಳಿಗೆ, ನನ್ನ ಪ್ರಗತಿ, ನನ್ನ ಜ್ಞಾನ ಎಂದು ನಿಮ್ಮ ಸಾಮರ್ಥ್ಯ ಓರೆಗಲ್ಲಿಗೆ ಹಚ್ಚಿ. ಶಿಕ್ಷಣದಲ್ಲಿ ವಿಶೇಷ ಪ್ರಗತಿ ಕಾಣಬೇಕು. ಇದರಿಂದ ಯಶಸ್ಸು ತಮ್ಮದಾಗುತ್ತದೆ. ಸ್ಪಷ್ಟ ಓದು, ಬರಹದ ಪ್ರಭುತ್ವತೆಯೇ ಶೈಕ್ಷಣಿಕ ಪ್ರಗತಿಗೆ ಕಾರಣವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಪಡಿಸಿದರು.
ಪಠ್ಯ ಪುಸ್ತಕದ ಸಾಂಗತ್ಯದಲ್ಲಿ ಮಕ್ಕಳು ಪ್ರೀತಿ ಆದರದಿಂದ ಬೆರೆತರೆ ಭವಿಷ್ಯತ್ತಿನಲ್ಲಿ ಜೀವನೋಲ್ಲಾಸ ಕಾಣಬಹುದು. ಪರೀಕ್ಷೆಗಳು ಸಮೀಪಿಸುತ್ತಿವೆ. ಮಕ್ಕಳು ಓದು, ಬರಹದೆಡೆಗೆ ಹೆಚ್ಚು ಗಮನ ಹರಿಸಬೇಕು. ಕಲಿಕೆಯಲ್ಲಿ ಪರಿಪೂರ್ಣತೆ ಇಲ್ಲದಿದ್ದರೆ ಅಥವಾ ಪ್ರಶ್ನೋತ್ತರ ಕೊರತೆ ಕಾಡುತ್ತಿದ್ದರೆ ಅದನ್ನು ಶ್ರಮಪಟ್ಟು ಸರಿದೂಗಿಸಿಕೊಳ್ಳಬೇಕು. ಅಧ್ಯಯನಾಸಕ್ತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.ಕಲಿಕೆಯಲ್ಲಿ ಏರುಪೇರು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಹಾಗೂ ಪ್ರಶ್ನೋತ್ತರ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. ಯಾವ ಪಠ್ಯ ವಿಷಯದಲ್ಲಿ ಸಮರ್ಪಕವಾಗಿ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲವೋ ಅದರತ್ತ ಚಿತ್ತ ಹರಿಸಬೇಕು. ಎಷ್ಟು ಶ್ರಮಿಸುತ್ತಿರೋ ಅಷ್ಟು ತಮಗೆ ಪ್ರಯೋಜನವಾಗಲಿದ್ದು, ಫಲಿತಾಂಶ ಹೆಚ್ಚಳಕ್ಕೂ ಅನುಕೂಲವಾಗಲಿದೆ ಎಂದರು.
ಗುಣಾತ್ಮಕ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕಾಗಿ ಇಲಾಖೆ ಎದುರು ನೋಡುತ್ತಿದೆ. ಆ ದಿಸೆಯಲ್ಲಿ ವಿಭಿನ್ನ ಪ್ರಯೋಗಗಳು ನಡೆದಿವೆ. ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳು ಸಾಗಿವೆ. ಮಕ್ಕಳು ಓದು ಬರಹದ ನೈಪುಣ್ಯತೆ ಹೆಚ್ಚಿಸಿಕೊಂಡರೆ ವಿಶೇಷ ಸಾಧನೆ ಮಾಡಲು ಸಾಧ್ಯ ಎಂದು ನುಡಿದರು.
ಈ ವೇಳೆ ಪ್ರಾಚಾರ್ಯ ಪಿ.ಎ.ಹೇಮಗಿರಿಮಠ, ಮುಖ್ಯ ಶಿಕ್ಷಕ ಎಸ್.ಐ.ಗಿಡ್ಡಪ್ಪಗೋಳ, ಯು.ಎ.ಹಿರೇಮಠ, ಎಂ.ಎ.ಬಳಬಟ್ಟಿ, ಮಹೇಶ್ ಗಾಳಪ್ಪಗೋಳ, ಜಿ.ಎಂ.ಹಿರೇಮಠ.ಕೆ.ಜಗದೇವಿ ಇತರರಿದ್ದರು.