ಕನ್ನಡಪ್ರಭ ವಾರ್ತೆ ಬೆಳ್ತಂಗಡಿ ವಿಶ್ವ ಸಂಸ್ಥೆಯ ಸಮೂಹದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುನಿಸೆಫ್ ಇಂಡಿಯಾ ಹಾಗೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಬೆಂಗಳೂರು (ಐಐಎಂಬಿ)ವಿನ ಜಲ ಜೀವನ್ ಮಿಷನ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಭಾಗಿತ್ವದಲ್ಲಿ ವಿಶ್ವ ಜಲ ದಿನಾಚರಣೆಯ ಪ್ರಯುಕ್ತ ಶುಕ್ರವಾರ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನಲ್ಲಿ ಜಲ ಸಂರಕ್ಷಣೆ ವಿಷಯದ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಯಿತು. ಜಲ ಜೀವನ್ ಮಿಷನ್ನ ಅಧ್ಯಕ್ಷ ಹಾಗೂ ಐಐಎಂಬಿ ಪ್ರೊಫೆಸರ್ ಡಾ. ಗೋಪಲ್ ನಾಯ್ಕ ಉದ್ಘಾಟಿಸಿದರು.
ಡಾ.ಡಿ ವೀರೇಂದ್ರ ಹೆಗ್ಗಡೆಯವರು ಜಲ ಸಂರಕ್ಷಣೆಯ ಉದ್ದೇಶಕ್ಕಾಗಿ ಕೈಗೊಂಡ ಅನೇಕ ಯಶಸ್ವಿ ಕಾರ್ಯಕ್ರಮಗಳ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್. ವಿಚಾರ ಸಂಕಿರಣದಲ್ಲಿ ತಿಳಿಸಿದರು. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಮೂಲಕ ರಾಜ್ಯಾದ್ಯಂತ 730 ಕೆರೆಗಳನ್ನು ಪುನಃಶ್ಚೇತನಗೊಳಿಸಿ ರಾಜ್ಯದ ಜಲಕ್ಷಾಮವನ್ನು ನಿವಾರಿಸಿದಲ್ಲದೆ, ಅಂತರ್ಜಲ ಮಟ್ಟವನ್ನು ಹೆಚ್ಚಿಸಿದ ಬಗ್ಗೆ ಹಾಗೂ ಜನರ ಸಹಭಾಗಿತ್ವದಲ್ಲಿ ಕಂಡುಕೊಂಡ ಯಶಸ್ಸನ್ನು ವಿಸ್ಕೃತವಾಗಿ ವಿವರಿಸಿದರು. ರಾಜ್ಯಾದ್ಯಂತ 455 ಶುದ್ಧಗಂಗಾ ಘಟಕಗಳ ಮೂಲಕ ಪ್ರತಿದಿನವು 1,24,000 ಕುಟುಂಬಗಳಿಗೆ ಸುಮಾರು 24.80 ಲಕ್ಷ ಲೀಟರ್ ಕುಡಿಯುವ ಶುದ್ಧ ನೀರನ್ನು ರಾಜ್ಯಾದ್ಯಂತ ನೀಡುತ್ತಿರುವುದನ್ನು ತಿಳಿಸಿದರು. ವಿಶ್ವ ಸಂಸ್ಥೆಯ ಸಮೂಹದಲ್ಲಿರುವ ಯುನಿಸೆಫ್ ಇಂಡಿಯಾದ ಜೊತೆಗೂಡಿ ನೀರು ಉಳಿಸುವ ಆಂದೋಲನವನ್ನು ರಾಜ್ಯಾದ್ಯಂತ ಹಮ್ಮಿಕೊಂಡಿದ್ದು, ಈಗಾಗಲೇ 2.90 ಲಕ್ಷ ಸ್ವಯಂ ಸೇವಕರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ಯೋಜನೆಯಿಂದ ಮಾಡಲಾಗಿದೆ ಎಂದು ತಿಳಿಸಿದರು. ಜಲ ಮತ್ತು ಪ್ರಕೃತಿಯ ಬಗ್ಗೆ ಅತ್ಯಂತ ಕಾಳಜಿ ಇಟ್ಟುಕೊಂಡ ಹೆಗ್ಗಡೆಯವರ ಅನೇಕ ಕಾರ್ಯಕ್ರಮಗಳ ಬಗ್ಗೆ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿದ ದೇಶದ ಅನೇಕ ಸಂಪನ್ಮೂಲ ವ್ಯಕ್ತಿಗಳು ಪ್ರಶಂಸಿದರು. ಕಾರ್ಯಕ್ರಮದಲ್ಲಿ ಐಐಎಂಬಿ, ಐಐಟಿ, ಐಐಟಿ ಆರ್ಗ್, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಆರ್ಟ್ ಆಫ್ ಲಿವಿಂಗ್, ಯುಎಎಸ್ ಬೆಂಗಳೂರು ಮುಂತಾದ ಸಂಸ್ಥೆಗಳ ಸಂಪನ್ಮೂಲ ವ್ಯಕ್ತಿಗಳು, ಐಐಎಂಬಿಯ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.