ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆಭಾರತ ಸಂವಿಧಾನದ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ದೇಶದ ಆರ್ಥಿಕ ಅಭಿವೃದ್ಧಿಗೆ ಮಾತ್ರವಲ್ಲದೆ, ಸಮಾಜದ ಎಲ್ಲಾ ವರ್ಗದ ಜನರನ್ನು ಮುಖ್ಯವಾಹಿನಿಗೆ ತಂದು ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಸಹಬಾಳ್ವೆಯನ್ನು ಸ್ಥಾಪಿಸುವ ಮಹತ್ತರ ಉದ್ದೇಶವನ್ನು ಒಳಗೊಂಡಿದೆ ಎಂದು ಡಾ. ಅಂಬೇಡ್ಕರ್ ಅವರ ಮೊಮ್ಮಗ ಹಾಗೂ ರಾಷ್ಟ್ರೀಯ ಬೌದ್ಧ ಮಹಾಸಭಾ ಅಧ್ಯಕ್ಷ ಭೀಮರಾವ್ ಯಶವಂತರಾವ್ ಅಂಬೇಡ್ಕರ್ ಹೇಳಿದರು.ಪಟ್ಟಣದ ಜೂನಿಯರ್ ಕಾಲೇಜು ಮೈದಾನದಲ್ಲಿ ಎಚ್.ಡಿ. ಕೋಟೆ ತಾಲೂಕು ಆದಿ ಕರ್ನಾಟಕ (ಹೊಲಯ) ಮಹಾಸಭಾ ವತಿಯಿಂದ ಆಯೋಜಿಸಿದ್ದ 2570ನೇ ಗೌತಮ ಬುದ್ಧ ಜಯಂತಿ, ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.ಸಂವಿಧಾನದಲ್ಲಿ ಪ.ಜಾತಿ ಹಾಗೂ ಪ.ಪಂಗಡದವರಿಗೆ ಮಾತ್ರವಲ್ಲದೆ, ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಸಹಬಾಳ್ವೆಗೆ ಒತ್ತು ನೀಡುವ ಅನೇಕ ಪ್ರಗತಿಪರ ಅಂಶಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.ಸ್ವಾತಂತ್ರ್ಯಾನಂತರ ದೇಶದ ಮೊದಲ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ ಡಾ. ಅಂಬೇಡ್ಕರ್ ಅವರು ಕಾರ್ಮಿಕರ ಹಕ್ಕುಗಳ ರಕ್ಷಣೆ, ನೀರಾವರಿ ಅಭಿವೃದ್ಧಿ ಹಾಗೂ ರಾಷ್ಟ್ರದ ಪ್ರಗತಿಗೆ ಪೂರಕವಾದ ಹಲವು ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿದ್ದಾಗಿ ಹೇಳಿದರು.ಚಾಮರಾಜನಗರದ ನಳಂದ ವಿಶ್ವವಿದ್ಯಾಲಯದ ಬಂತೆ ಬೋಧಿದತ್ತ ಮಾತನಾಡಿ, ಈ ಭಾಗದಲ್ಲಿ ದೇಶದ ಅತಿದೊಡ್ಡ ಬೌದ್ಧ ವಿಹಾರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ತಾಲೂಕಿನ ಬನವಾಡಿ ಗ್ರಾಮದಲ್ಲಿ 75 ಎಕರೆ ಜಾಗವನ್ನು ದಾನವಾಗಿ ನೀಡಲಾಗುತ್ತಿದೆ. ಅಲ್ಲಿ ನಿರ್ಮಾಣವಾಗಲಿರುವ ಬೌದ್ಧ ವಿಹಾರವು ಧಾರ್ಮಿಕ ಕೇಂದ್ರವಾಗುವುದರ ಜೊತೆಗೆ ಶಿಕ್ಷಣ ಮತ್ತು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಲಿದೆ ಎಂದು ತಿಳಿಸಿದರು.ಅಂತರಸಂತೆ ಬಂತೆ ಗೌತಮಿ, ಕಲ್ಯಾಣ ಬಂತೆ, ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ, ಶಾಸಕ ಅನಿಲ್ ಚಿಕ್ಕಮಾದು, ಆದಿ ಕರ್ನಾಟಕ ಮಹಾಸಭಾದ ತಾಲೂಕು ಅಧ್ಯಕ್ಷ ಎಚ್.ಡಿ. ಶಿವರಾಜು, ಮಲ್ಲಿಕಾರ್ಜುನ ಮಲ್ಲಯ್ಯ, ಬೌದ್ಧ ಮಹಾಸಭಾದ ರಾಜ್ಯಾಧ್ಯಕ್ಷ ಸಿದ್ದರಾಜು, ಭೀಮನಹಳ್ಳಿ ಸೋಮೇಶ್, ಸಂದೀಪ್, ಪುಟ್ಟಮ್ಮಣಿ, ಜಯಪ್ರಕಾಶ್ ಚಿಕ್ಕಣ್ಣ, ಕೆ. ಕೃಷ್ಣನಾಯಕ, ಎಚ್.ಸಿ. ನರಸಿಂಹಮೂರ್ತಿ, ಮುದ್ದುಮಲ್ಲಯ್ಯ, ಸೋಗಳ್ಳಿ ಶಿವಣ್ಣ, ವೆಂಕಟಸ್ವಾಮಿ, ಲಕ್ಷ್ಮಣ್, ಎಚ್.ಸಿ. ಮಂಜುನಾಥ್, ಭಾಗ್ಯಲಕ್ಷ್ಮಿ ನಿಂಗರಾಜು, ಶಿವಣ್ಣ, ಮರಿದೇವಯ್ಯ, ಮಹದೇವ, ಚಾ. ನಂಜುಂಡಮೂರ್ತಿ, ಮಲಾರ ಪುಟ್ಟಯ್ಯ, ಇಟ್ನಾ ರಾಜಣ್ಣ, ನಂಜಪ್ಪ, ರಾಜು ಬಿಡುಗಲು, ಕ್ರೀಡಾಪಟು ನಾಗೇಂದ್ರ ಮೊದಲಾದವರು ಇದ್ದರು.