ಕುಂದಾಪುರದಲ್ಲಿ ಕಾರ್ಯನಿರತ ಪತ್ರಕರ್ತರಿಂದ ಪತ್ರಿಕಾ ದಿನಾಚರಣೆ, ಸನ್ಮಾನ
ಕನ್ನಡಪ್ರಭ ವಾರ್ತೆ ಕುಂದಾಪುರಸಮಾಜದ ಎಲ್ಲಾ ಸ್ಥರಗಳ ನಂಬಿಕೆಗೆ ಅರ್ಹರಾದವರೇ ಪತ್ರಕರ್ತರು. ಸಾಂವಿಧಾನಿಕ ಚೌಕಟ್ಟಿನಲ್ಲಿ ಸಮಾಜ ಮುನ್ನಡೆಯಬೇಕಾದರೆ ಪ್ರತೀ ಪತ್ರಕರ್ತನೂ ನೈಜತೆಯಿಂದ, ನಿಷ್ಠುರನಾಗಿರಬೇಕು. ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಸಮಾಜದ ಪತ್ರಕರ್ತರೇ ಮಾದರಿಯಾಗುತ್ತಾರೆ. ಆ ನಿಟ್ಟಿನಲ್ಲಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಪತ್ರಕರ್ತರೇ ಮುನ್ನುಡಿ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಅಭಿಪ್ರಾಯಪಟ್ಟಿದ್ದಾರೆ.ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಭಂಡಾರ್ಕಾರ್ಸ್ ಕಾಲೇಜಿನ ರಾಧಾಬಾಯಿ ಹಾಲ್ನಲ್ಲಿ ನಡೆದ ಪತ್ರಿಕಾ ದಿನಾಚರಣೆ ಹಾಗೂ ಸಂಘದ ಅಧೀಕೃತ ಸದಸ್ಯರ ಡೈರಕ್ಟರಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಪತ್ರಿಕಾ ಕ್ಷೇತ್ರದಲ್ಲಿ ಅತೀ ದೊಡ್ಡ ಹೆಸರು ಮಾಡಿದ ವಡ್ಡರ್ಸೆ ರಘುರಾಮ ಶೆಟ್ಟರ ಊರಿದು. ಅವರ ಪುತ್ರ ಮಧುಕರ ಶೆಟ್ಟಿ ಎಲ್ಲಾ ಐಪಿಎಸ್ ಅಧಿಕಾರಿಗಳಿಗೂ ಮಧುಕರ ಶೆಟ್ಟಿ ಮಾದರಿ. ಸಮಾಜದ ಮೇಲೆ ಪತ್ರಕರ್ತರ ದೃಷ್ಟಿಕೋನ ವ್ಯತಿರಿಕ್ತ ಪರಿಣಾಮ ಬೀರದಂತೆ ನೋಡಿಕೊಳ್ಳುವ ಜವಾಬ್ಧಾರಿ ಪತ್ರಕರ್ತರದ್ದಾಗಿದೆ ಎಂದು ಅವರು ಹೇಳಿದರು.
ಸಂಘದ ಅಧ್ಯಕ್ಷ ನಾಗರಾಜ ರಾಯಪ್ಪನಮಠ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧೀಕೃತ ಸದಸ್ಯರ ಡೈರಕ್ಟರಿಯನ್ನು ಕೋಟದ ಗೀತಾನಂದ ಫೌಂಡೆಷನ್ ಪ್ರವರ್ತಕ ಆನಂದ ಸಿ ಕುಂದರ್ ಬಿಡುಗಡೆಗೊಳಿಸಿದರು. ಸಾಧಕ ಪತ್ರಕರ್ತರಾದ ಯು.ಎಸ್.ಶೆಣೈ ಮತ್ತು ಡಾ.ಉದಯ ಕುಮಾರ್ ತಲ್ಲೂರು ಅವರಿಗೆ ಪತ್ರಿಕೋದ್ಯಮದ ಗೌರವಾರ್ಪಣೆ ಸಲ್ಲಿಸಲಾಯಿತು.ಪತ್ರಿಕಾ ದಿನಾಚರಣೆ ಕುರಿತಾಗಿ ಲಕ್ಷ್ಮಿ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ನಾಯಕ ಉಪನ್ಯಾಸ ನೀಡಿ, ಪ್ರಸ್ತುತ ಕಾಲಘಟ್ಟದಲ್ಲಿ ಮೌಲ್ಯಗಳು ಮರೆಯಾಗುತ್ತಿವೆ. ಶಿಕ್ಷಣದಲ್ಲಿ ಅಂಕಗಳೇ ಪ್ರಧಾನವಾಗುತ್ತಿವೆ.ಅಂಕಗಳನ್ನು ಹೊತ್ತು ತರುವ ಪ್ರಶ್ನೆಗಳು ಹೃದಯ ಸಂಸ್ಕಾರಕ್ಕೆ ಒಳಗಾಗುತ್ತಿಲ್ಲ. ಒಳಗಡೆ ಹೃದಯವಂತಿಕೆ, ಸಂಸ್ಕಾರ, ಎಲ್ಲರನ್ನು ಸಮಾನವಾಗಿ ಕಾಣುವ ಸಂವೇದನೆ ತೆರೆದುಕೊಂಡಾಗ ಸಾಧ್ಯವಾಗುತ್ತದೆ ಎಂದರು.
ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರುಡೇಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಕಾಲೇಜಿನ ಪ್ರಾಂಶುಪಾಲ ಡಾ.ಶುಭಕರ ಅಚಾರ್ಯ, ಡಾ.ಜಿ.ಎಮ್.ಗೊಂಡ, ರಾಜೇಶ ಕೆ.ಸಿ, ಶುಭ ಹಾರೈಸಿದರು. ಜಿಲ್ಲಾ ಸಂಘದ ಉಪಾಧ್ಯಕ್ಷ ವಿನಯ ಪಾಯಸ್, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ಲೋಕೇಶ ಆಚಾರ್ಯ ತೆಕ್ಕಟ್ಟೆ ಇದ್ದರು.ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಎಸ್ ಬೀಜಾಡಿ ಸ್ವಾಗತಿಸಿದರು. ಉಪಾಧ್ಯಕ್ಷ ರಾಘವೇಂದ್ರ ಪೈ ವಂದಿಸಿದರು. ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿದರು.