ಬರದ ಬಗ್ಗೆ ಚಕಾರ ಎತ್ತದ ಪ್ರಧಾನಿ ಮೋದಿ

KannadaprabhaNewsNetwork | Published : Apr 17, 2024 1:21 AM

ಸಾರಾಂಶ

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಷ್ಟಪಟ್ಟು ಗ್ಯಾರಂಟಿ ಯೋಜನೆಗೆ ವ್ಯವಸ್ಥೆ ಮಾಡುತ್ತಿದೆ. ಗ್ಯಾರಂಟಿ ಬಂದ್ ಆಗಬೇಕು. ಸರ್ಕಾರದ ಹೆಸರು ಹಾಳಾಗಬೇಕು ಎಂದು ಬಿಜೆಪಿಗರು ಹೊಂಚು ಹಾಕಿದ್ದಾರೆ ಎಂದು ಶಾಸಕ ಆರ್.ವಿ. ದೇಶಪಾಂಡ ಆರೋಪಿಸಿದರು.

ಕಾರವಾರ: ವಿಧಾನಸಭಾ ಚುನಾವಣೆಗೂ ಮೊದಲು ಐದು ಗ್ಯಾರಂಟಿ ಜಾರಿಗೆ ತಲುವುದಿಲ್ಲ. ಇದರಿಂದ ಅರ್ಥ ವ್ಯವಸ್ಥೆ ಹಾಳಾಗಬಹುದು ಎಂದು ಬಿಜೆಪಿ ಟೀಕೆ, ಚೇಷ್ಟೆ ಮಾಡಿತ್ತು. ಗ್ಯಾರಂಟಿ ಜಾರಿಗೆಯಾಗಿ ಜನರು ಕಾಂಗ್ರೆಸ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಕ್ಕೆ ಬಿಜೆಪಿ ಮೋದಿ ಕಿ ಗ್ಯಾರಂಟಿ ಎಂದು ನಮ್ಮ ಯೋಜನೆಯನ್ನು ಪ್ರಣಾಳಿಕೆಯಲ್ಲಿ ತರುತ್ತಿದ್ದಾರೆ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ ಲೇವಡಿ ಮಾಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ ಅವರ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಮೆರವಣಿಗೆಯಲ್ಲಿ ಮಾತನಾಡಿ, ಮತದಾರರು ಬಿಜೆಪಿಗರು ಮಾಡಿದ ಚೇಷ್ಟೆ ತಿಳಿದುಕೊಳ್ಳಬೇಕು. ರಾಜ್ಯದಲ್ಲಿ ಬರಗಾಲವಿದೆ. ರಾಜ್ಯಕ್ಕೆ ಬಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಬರಗಾಲ ಬಗ್ಗೆ ಚಕಾರ ಎತ್ತಿಲ್ಲ. ಅಲ್ಲಿ ರೈತರೇ ಹೆಚ್ಚು. ಬೆಳೆಹಾನಿ ಪರಿಹಾರ ಕೊಡಬೇಕು. ರಾಜ್ಯದ ಮುಖ್ಯಮಂತ್ರಿ ಒಳಗೊಂಡು ಹಲವರು ಕೇಂದ್ರದ ಸಚಿವರನ್ನು ಭೇಟಿಯಾಗಿದ್ದಾರೆ. ಆದರೆ ಒಂದು ರುಪಾಯಿಯನ್ನು ಕೇಂದ್ರ ನೀಡಿಲ್ಲ. ಮಲತಾಯಿ ಧೋರಣೆಯಿಂದ ಕರ್ನಾಟಕವನ್ನು ನೋಡುತ್ತಿದೆ. ಇದು ಸರಿಯಲ್ಲ ಎಂದು ಗುಡುಗಿದರು.

ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಷ್ಟಪಟ್ಟು ಗ್ಯಾರಂಟಿ ಯೋಜನೆಗೆ ವ್ಯವಸ್ಥೆ ಮಾಡುತ್ತಿದೆ. ಗ್ಯಾರಂಟಿ ಬಂದ್ ಆಗಬೇಕು. ಸರ್ಕಾರದ ಹೆಸರು ಹಾಳಾಗಬೇಕು ಎಂದು ಬಿಜೆಪಿಗರು ಹೊಂಚು ಹಾಕಿದ್ದಾರೆ ಎಂದು ಆರೋಪಿಸಿದರು.

೧೦ ವರ್ಷದ ಹಿಂದೆ ಅಧಿಕಾರಕ್ಕೆ ಬರುವಾಗ ಮೋದಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು. ೧೦ ವರ್ಷದಲ್ಲಿ ಎಷ್ಟು ಉದ್ಯಿಗ ಸೃಷ್ಟಿ ಆಗಬೇಕಿತ್ತು. ಆಗಿದೆಯೇ? ಮೋದಿ ನೀಡಿದ ಕೊಡುಗೆಯಿಂದ ಪದವೀಧರರು ಮನೆಯಲ್ಲಿದ್ದಾರೆ. ಕಷ್ಟಪಟ್ಟು ಓದಿಸಿದ ತಂದೆ- ತಾಯಿ ಏನು ಮಾಡಬೇಕು ಎಂದು ಕಿಡಿಕಾರಿದರು.

ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ ಮಾತನಾಡಿ, ಬಿಜೆಪಿಯವರು ೨೦೧೯ರಲ್ಲಿ ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು. ದ್ವಿಗುಣ ಮಾಡುವುದಿರಲಿ, ರೈತರನ್ನು ಸಾವಿನ ಮನೆಗೆ ಕಳಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತು ಪ್ರಣಾಳಿಕೆ ಮಾಡಿಲ್ಲ. ದೇಶದ ಉದ್ದಗಲಕ್ಕೂ ಪಾದಯಾತ್ರೆ ಮಾಡಿ ಪ್ರಣಾಳಿಕೆ ತಯಾರಿಸಿದ್ದಾರೆ. ಮಹಿಳೆಯರು, ಯುವಕರು, ಕಾರ್ಮಿಕರು, ರೈತರನ್ನು ಒಳಗೊಂಡು ಎಲ್ಲ ವರ್ಗದವರಿಗೂ ನ್ಯಾಯ ಒದಗಿಸಿದ್ದಾರೆ ಎಂದರು.

ಶಾಸಕ ಸತೀಶ ಸೈಲ್ ಅವರು, ಉತ್ತರ ಕನ್ನಡ ಕ್ಷೇತ್ರದಲ್ಲಿ ಈ ಬಾರಿ ೨- ೩ ಲಕ್ಷ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಾರೆ. ಇಲ್ಲಿನ ಕಷ್ಟ- ಸುಖಗಳ ಬಗ್ಗೆ ತಿಳಿದುಕೊಂಡಿದ್ದು, ನ್ಯಾಯ ಕೊಡಿಸುತ್ತಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಶೇ. ೯೭ರಷ್ಟು ಜನರ ತಲುಪಿದೆ. ಬಿಜೆಪಿಗರು ಮಾತನ್ನು ಬಂಡವಾಳ ಮಾಡಿಕೊಂಡಿದ್ದಾರೆ. ಜನರಿಗೆ ಏನೂ ಕೊಡುಗೆ ಕೊಡುವುದಿಲ್ಲ. ಅಂಜಲಿ ನಿಂಬಾಳ್ಕರ ಕುಣಬಿ, ಹಾಲಕ್ಕಿ ಸಮುದಾಯವನ್ನು ಎಸ್ಟಿಗೆ ಸೇರ್ಪಡೆ ಮಾಡುತ್ತಾರೆ. ನಾವು ಕಾಂಗ್ರೆಸ್‌ನವರು ಜನರ ಕೆಲಸ ಮಾಡಲು ಇದ್ದೇವೆ. ಪೊಳ್ಳು ಭಾಷಣ ಮಾಡುವುದಿಲ್ಲ ಎಂದರು.

ನಗರದ ಮಾಲಾದೇವಿ ಕ್ರೀಡಾಂಗಣದಿಂದ ಸವಿತಾ, ಸುಭಾಸ್ ಸರ್ಕಲ್ ಮೂಲಕ ಎಂಜಿ ರಸ್ತೆಯವರೆಗೆ ಮೆರವಣಿಗೆ ನಡೆಸಲಾಯಿತು. ನಾಲ್ಕು ಸಾವಿರಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಹಿರಿಯ ನಾಯಕ ಪಿ.ಜಿ.ಆರ್. ಸಿಂಧ್ಯ, ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ್, ಶಿರಸಿ ಶಾಸಕ ಭೀಮಣ್ಣ ನಾಯ್ಕ, ನಿವೇದಿತ್ ಆಳ್ವಾ ಮೊದಲಾದವರು ಇದ್ದರು.

Share this article