ಸಮರ್ಪಕ ನೀರಿನ ಪೂರೈಕೆಗೆ ಆದ್ಯತೆ ನೀಡಿ

KannadaprabhaNewsNetwork |  
Published : Jul 30, 2025, 12:46 AM IST
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಪ್ರತಿ ದಿನ ರಾತ್ರಿ ನದಿಯಿಂದ ಜಾಕ್ವೆಲ್ ಮೂಲಕ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಬೆಳಗ್ಗೆ ವಾರ್ಡ್ ವಾರು ನೀರು ಪೂರೈಕೆಗೆ ವಾಲ್ ಮನ್ ಗಳು ಮುಂದಾಗಬೇಕು

ಗದಗ: ಗದಗ-ಬೆಟಗೇರಿ ಅವಳಿ ನಗರದ ಸಾರ್ವಜನಿಕರಿಗೆ ಸಮರ್ಪಕ ನೀರು ಪೂರೈಕೆಗೆ ಆದ್ಯತೆ ವಹಿಸಬೇಕು. ಅಲ್ಲದೇ ಪ್ರತಿ 3 ದಿನಕ್ಕೊಮ್ಮೆ ನೀರು ಪೂರೈಕೆ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಸರಬರಾಜು ಕುರಿತಂತೆ ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಗತ್ಯ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ನೀರು ಸರಬರಾಜು ಮಾಡಲು ಪ್ರಥಮಾದ್ಯತೆ ನೀಡಬೇಕು. ವಿನಾಕಾರಣ ನೀರಿನ ಅಪವ್ಯಯ ತಡೆದು ಅಗತ್ಯವಿರುವಲ್ಲಿ ನೀರು ಪೂರೈಕೆ ಮಾಡಲು ಅಧಿಕಾರಿ ವರ್ಗ ಕ್ರಮ ಕೈಗೊಳ್ಳಬೇಕು ಎಂದರು.

ಪ್ರತಿ ದಿನ ರಾತ್ರಿ ನದಿಯಿಂದ ಜಾಕ್ವೆಲ್ ಮೂಲಕ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿ ಬೆಳಗ್ಗೆ ವಾರ್ಡ್ ವಾರು ನೀರು ಪೂರೈಕೆಗೆ ವಾಲ್ ಮನ್ ಗಳು ಮುಂದಾಗಬೇಕು. ನಗರಸಭೆಯಿಂದ ಸದ್ಯ ಕಾರ್ಯ ನಿರ್ವಹಿಸುತ್ತಿರುವ ವಾಲ್ಮಾನ್ ಗಳು ಸೂಪರ್ವೈಸ್‌ರಗಳನ್ನು ಬದಲಾವಣೆ ಮಾಡಬೇಕು. ಅವರಿಗೆ ಪ್ರತ್ಯೇಕ ಬೀದಿ, ವಾರ್ಡ್ ಗಳ ಮರುಹಂಚಿಕೆ ಮಾಡಿ ಸಮರ್ಪಕ ನೀರು ಪೂರೈಕೆಗೆ ಇರುವ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ನಗರಸಭೆ ಪೌರಾಯುಕ್ತರು ಮುಂದಾಗಬೇಕು ಎಂದು ಸೂಚನೆ ನೀಡಿದರು.

ನಾವೆಲ್ಲರೂ ನೀರು ಪೂರೈಕೆ ಮಾಡುವ ವಾಲ್ಮೆನ್ ಮೇಲೆ ವಿಶ್ವಾಸವಿಟ್ಟು ಗಮನಿಸೋಣ, ಮುಂದಿನ 100 ದಿವಸದೊಳಗೆ ಸಮರ್ಪಕ ನೀರಿನ ವ್ಯವಸ್ಥೆ ಆಗುವಂತೆ ಕಾರ್ಯ ನಿರ್ವಹಿಸುವ ವಿಶ್ವಾಸವಿದೆ. ನೀರು ಪೂರೈಕೆ ಕುರಿತಂತೆ ನ.1 ರಂದು ಮತ್ತೆ ನಾವೆಲ್ಲರೂ ಸೇರೋಣ, ಆಗ ನೀರಿನ ಸಮಸ್ಯೆ ಪೂರೈಕೆ ಸಂಪೂರ್ಣ ನಿವಾರಣೆಯಾಗಿರಬೇಕು ಎಂದರು.

ಅವಳಿ ನಗರಕ್ಕೆ ನೀರು ಪೂರೈಕೆಗಾಗಿಯೇ ಪ್ರತ್ಯೇಕ ಒಬ್ಬ ಎಂಜಿನಿಯರ್ ನೇಮಕ ಮಾಡಿ ನೀರು ಪೂರೈಕೆ ಸರಳೀಕರಣಗೊಳಿಸುವಂತೆ, ಅಲ್ಲದೆ ಪೈಪ್, ವಾಲ್ ನಿಂದ ಪೋಲಾಗುವ ನೀರನ್ನು ತಡೆಯಲು ಶೀಘ್ರ ದುರಸ್ತಿ ಕೈಗೊಳ್ಳಲು ಸೂಚಿಸಿದರು.

ಅವಳಿ ನಗರಕ್ಕೆ ನೀರು ಪೂರೈಕೆ ಕುರಿತಂತೆ ನಗರಸಭೆ ಪೌರಾಯುಕ್ತರು ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸಬೇಕು. ಸಮರ್ಪಕ ನೀರು ಪೂರೈಕೆ ಆಗುತ್ತಿರುವ ಬಗ್ಗೆ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ಮೇಲುಸ್ತುವಾರಿ ಕಾರ್ಯ ನಿರ್ವಹಿಸಬೇಕೆಂದು ತಿಳಿಸಿದರು.

ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಮಾತನಾಡಿ, ಮೊದಲು ದಿಬ್ಬದಲ್ಲಿರುವ ಮನೆಗಳಿಗೆ ನೀರಿನ ಪೂರೈಕೆ ಮಾಡಬೇಕು ನಂತರದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ಪೂರೈಕೆ ಆಗುವಂತೆ ನಿಗ ವಹಿಸಬೇಕು ಎಂದರು.

ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ್ ಬಬರ್ಜಿ, ಪ್ರಭು ಬುರುಬುರೆ, ಸಿದ್ದು ಪಾಟೀಲ, ಅಶೋಕ ಮಂದಾಲಿ, ಜಿಪಂ ಸಿಇಒ ಭರತ್.ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಬಸವನಗೌಡ, ನಗರಸಭೆ ಪೌರಾಯುಕ್ತ ರಾಜಾರಾಮ್ ಪವಾರ ಸೇರಿದಂತೆ ನಗರಸಭೆಯ ಅಧಿಕಾರಿಗಳು, ವಾಲ್ಮಾನ್‌ಗಳು ಸೂಪರ್ ವೈಸರ್‌ಗಳು ಇದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ