ಯಲಬುರ್ಗಾ:
ಪಠ್ಯಕ್ಕೆ ಮಹತ್ವ ನೀಡಿದಷ್ಟು ದೈಹಿಕ ಶಿಕ್ಷಣಕ್ಕೂ ಆದ್ಯತೆ ನೀಡಬೇಕು ಎಂದು ತಾಲೂಕು ಪಂಚಾಯಿತಿ ಕೆಡಿಪಿ ಮಾಜಿ ಸದಸ್ಯ ಅಂದಾನಗೌಡ ಪೊಲೀಸ್ಪಾಟೀಲ್ ಹೇಳಿದರು.ತಾಲೂಕಿನ ಬಳೂಟಗಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಬಂಡಿ-ಚಿಕ್ಕಮ್ಯಾಗೇರಿ ಅಂತರ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸದೃಢತೆ ಕಾಣಬಹುದು. ಕ್ರೀಡಾ ಪ್ರತಿಭೆಗಳಿಗೆ ಪ್ರತಿಯೊಬ್ಬರೂ ಪ್ರೋತ್ಸಾಹ ನೀಡಬೇಕು. ಕ್ರೀಡಾಪಟುಗಳು ಸೋಲು-ಗೆಲುವೆನ್ನದೆ ಆಟದಲ್ಲಿ ಭಾಗವಹಿಸುವ ಮೂಲಕ ಕ್ರೀಡಾಸ್ಫೂರ್ತಿ ಮೆರೆಯಬೇಕು. ಗ್ರಾಮೀಣ ಪ್ರದೇಶದಲ್ಲಿ ಕ್ರೀಡೆ, ದೈಹಿಕ ಶಿಕ್ಷಣದ ಹೆಚ್ಚಿನ ಅವಶ್ಯಕತೆ ಇದೆ. ಆದ್ದರಿಂದ ದೈಹಿಕ ಶಿಕ್ಷಣ ಶಿಕ್ಷಕರ ನೇಮಕವಾಗಬೇಕಿದೆ ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವಿ. ಧರಣಾ ಮಾತನಾಡಿ, ಕ್ರೀಡೆ ಎನ್ನುವುದು ವಿದ್ಯಾರ್ಥಿ ಜೀವನದಲ್ಲಿ ಮಹತ್ವರ ಹೆಜ್ಜೆಯಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ಆರೋಗ್ಯ ನೆಮ್ಮದಿ ಕಾಣಬಹುದು. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡಬೇಕು ಎಂದರು.
ಪ್ರಭಾರ ಬಿಇಒ ಅಶೋಕ ಗೌಡರ, ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ ಮಾತನಾಡಿದರು. ಯುವ ಮುಖಂಡ ಅಲ್ಲಾಸಾಬ್ ಕಟ್ಟಿಮನಿ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು.ಈ ವೇಳೆ ದೈಹಿಕ ಶಿಕ್ಷಣ ಪರಿವೀಕ್ಷಕ ವೀರಭದ್ರಪ್ಪ ಅಂಗಡಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಟಿ.ಜೆ. ದಾನಿ, ನಿವೃತ್ತ ಶಿಕ್ಷಕರಾದ ವೈ.ಬಿ. ಮೇಟಿ, ಅಶೋಕ ಮಾಲಿಪಾಟೀಲ್, ಶರಣಯ್ಯ ಸರಗಣಾಚಾರ, ಪಿಡಿಒ ಫಯಾಜ್, ಶರಣು ಕುರ್ನಾಳ, ಬಸವರಾಜ ಮುಳಗುಂದ, ಕಳಕಪ್ಪ ಕೊಡತಗೇರಿ, ಕಳಕಮಲ್ಲಪ್ಪ ಅಂತೂರ, ಬಾಲದಂಡಪ್ಪ ತಳವಾರ, ಶರಣಪ್ಪ ಹಿರೇಮನಿ, ಶಿವಪ್ಪ ತೊಗರಿ ಸೇರಿದಂತೆ ಮತ್ತಿತರರು ಇದ್ದರು.