ಕುಕನೂರು: ನನ್ನ ತಂದೆ ಬಸವರಾಜ ರಾಯರಡ್ಡಿ ಯಲಬುರ್ಗಾ ಕ್ಷೇತ್ರದಲ್ಲಿ ಎಲ್ಕೆಜಿಯಿಂದ ಪಿಜಿವರೆಗೆ ಶಿಕ್ಷಣ ಕೇಂದ್ರಗಳನ್ನು ಸರ್ಕಾರದಿಂದ ಮಾಡಿದ್ದು, ಕೌಶಲ್ಯ ಕೇಂದ್ರದಿಂದ ಉದ್ಯೋಗ ತರಬೇತಿ ಕಾರ್ಯ ಸಹ ಆಗುತ್ತಿದ್ದು, ಜನರಿಗೆ ಉದ್ಯೋಗ ಸೃಷ್ಠಿ ಹಾಗೂ ವಲಸೆ ಹೋಗುವ ಕಾರ್ಯ ತಪ್ಪಿಸಲು ಆದ್ಯತೆ ನೀಡಲಾಗುವುದು ಎಂದು ಸಾಮಾಜಿಕ ಕಾರ್ಯಕರ್ತೆ ಮಮತಾ ಬಸವರಾಜ ರಾಯರಡ್ಡಿ ಹೇಳಿದರು.
ಯಲಬುರ್ಗಾ ಕ್ಷೇತ್ರದ ಯುವಕರು ಬೆಂಗಳೂರು ಸೇರಿದಂತೆ ಇತರೆ ಕಡೆ ವಲಸೆ ಹೋಗಬೇಕಾಗಿದೆ. ಈಗಾಗಲೇ ನಮ್ಮ ತಂದೆ ಬಸವರಾಜ ರಾಯರಡ್ಡಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪಡಿಸಿದ್ದು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿ,ಎಂಜನಿಯರ್ ಕಾಲೇಜು, ಕೌಶಲ್ಯ ಅಭಿವೃದ್ಧಿ ಸ್ಥಾಪಿಸಿದ್ದಾರೆ. ನನಗೆ ಈ ದಿನ ವಿಶೇಷವಾಗಿದೆ. ಇಲ್ಲಿ ಉದ್ಯೋಗ ಸೃಷ್ಠಿ ಮಾಡಬೇಕು ಎನ್ನುವ ಕನಸು ನನ್ನದಾಗಿದೆ. ಇದರಿಂದ ಉದ್ಯೋಗ ಮೇಳ ನಡೆಸುವ ಮೂಲಕ ಇಲ್ಲಿನ ಯುವಕರಿಗೆ ಉದ್ಯೋಗ ಕೊಡಿಸುವ ಉದ್ದೇಶದಿಂದ ಮೇಳ ಮಾಡಲಾಗಿದೆ ಎಂದರು.
ತಳಕಲ್ಲ ಕೌಶಲ್ಯ ಅಭಿವೃದ್ಧಿ ಕೇಂದ್ರ ಶಾಸಕ ರಾಯರಡ್ಡಿ ಅವರ ದೂರದೃಷ್ಠಿಯ ಸಂಕೇತ. ರಾಯರಡ್ಡಿ ಅವರಿಂದ ಯಲಬುರ್ಗಾ ಕ್ಷೇತ್ರ ಶೈಕ್ಷಣೀಕವಾಗಿ ಪ್ರಗತಿಯಾಗಿದೆ. 64 ಪ್ರೌಢ ಶಾಲೆ, 13 ಕೆಪಿಎಸ್ ಶಾಲೆ, 18 ಮೊರಾರ್ಜಿ ಸವತಿ ಶಾಲೆ, 2 ಪಿಜಿ ಸೆಂಟರ್, ಅನೇಕ ವಸತಿ ನಿಲಯ, ವಿದ್ಯಾಲಯಗಳಿವೆ. ಶಿಕ್ಷಣ ಪಡೆದ ಇಲ್ಲಿಯ ಜನರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೌಶಲ್ಯ ಕೇಂದ್ರ ಸಹಕಾರಿ ಆಗಿದೆ. ಕೌಶಲ್ಯ ಹಾಗೂ ಶಿಕ್ಷಣದ ಹೊಂದಾಣಿಕೆಯಿಂದ ಮನುಷ್ಯನ ಉದ್ಯೋಗ ಸೃಷ್ಠಿ ಆಗುತ್ತದೆ. ಉದ್ಯೋಗ ಜನರಿಗೆ ಸಿಕ್ಕರೆ ಆತ್ಮಸ್ಥೈರ್ಯ ಹೆಚ್ಚುತ್ತದೆ. ಉದ್ಯೋಗ ಮೇಳದಲ್ಲಿ ಆಯ್ಕೆಯಾಗದವರೂ ನಿರಾಸೆ ಪಡೆದೆ ಮತ್ತೆ ಪ್ರಯತ್ನ ಮಾಡಬೇಕು. ಇನ್ನೂ ಅನೇಕ ಅವಕಾಶ ತರುತ್ತೇನೆ ಎಂದರು.ಕ್ಷೇತ್ರದ ಜನರಿಗೆ ಅಳಿಲು ಸೇವೆ ಸಮಾಜ ಸೇವಾ ಮನೋಭಾವದಿಂದ ಮಾಡಲು ಸಿದ್ದನಿದ್ದೇನೆ. ಯಾವ ರೀತಿಯ ಉದ್ದೇಶವಿಲ್ಲ. ಸ್ಥಳೀಯವಾಗಿ ಉದ್ಯೋಗ ನೀಡುವ ಕಾರ್ಖಾನೆ ಹಾಗೂ ಕೇಂದ್ರಗಳಾಗಬೇಕು ಎಂದರು.