ಸೂಸಲವಾನಿ ಗ್ರಾಮದಲ್ಲಿ ದಲಿತ ಸಂಘರ್ಷ ಸಮಿತಿಯ ( ಕೃಷ್ಣಪ್ಪ ಬಣ) ಗ್ರಾಮ ಶಾಖೆ ಉದ್ಘಾಟನೆ
ದಲಿತರು ಮುಖ್ಯ ವಾಹಿನಿಗೆ ಬರಲು ಪ್ರೊ.ಕೃಷ್ಣಪ್ಪ ಅವರೇ ಕಾರಣರಾಗಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಎಲ್.ಎಸ್. ಶ್ರೀಕಾಂತ್ ತಿಳಿಸಿದರು.
ಗುರುವಾರ ಸೂಸಲವಾನಿ ಗ್ರಾಮದ ಅಯ್ಯಪ್ಪಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ದಲಿತ ಸಂಘರ್ಷ ಸಮಿತಿ ( ಕೃಷ್ಣಪ್ಪ ಬಣ) ಆಶ್ರಯದಲ್ಲಿ ನಡೆದ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ದಲಿತ ಮಕ್ಕಳಿಗೆ ಶಿಕ್ಷಣ ಕೊಡಿಸುವ ದೃಷ್ಟಿಯಿಂದ ಪ್ರತಿ ಹೋಬಳಿ ಕೇಂದ್ರದಲ್ಲೂ ವಸತಿ ಶಾಲೆ ತೆರೆಯಲು ಪ್ರೊ. ಕೃಷ್ಣಪ್ಪ ಅವರ ಪಾತ್ರ ಅಧಿಕವಾಗಿದೆ. ರಾಜ್ಯದ್ಯಂತ ಪ್ರೊ.ಕೃಷ್ಣಪ್ಪ ಬಣದ ಡಿಎಸ್ಎಸ್ ಕಾರ್ಯಕರ್ತರು ಉತ್ತಮ ಕೆಲಸ ಮಾಡುತ್ತಿದ್ದರೂ ಒಗ್ಗಟ್ಟಿನ ಕೊರತೆಯಿಂದ ನಮ್ಮ ಶಕ್ತಿ ಕಡಿಮೆಯಾಗಿದೆ ಎಂದರು.ಸಂವಿಧಾನ ಬದ್ಧವಾಗಿ ಹೋರಾಟ ಮಾಡಲು ನಮ್ಮ ಸಂಘಟನೆ ಸದಾ ಸಿದ್ಧವಿದೆ. ಗ್ರಾಮೀಣ ಭಾಗದಲ್ಲಿ ಶಾಖೆಗಳನ್ನು ತೆರೆಯುವ ಮೂಲಕ ಕೃಷ್ಣಪ್ಪ ಬಣದ ಕಾರ್ಯಕರ್ತರನ್ನು ತಳಮಟ್ಟದಲ್ಲಿ ಗಟ್ಟಿ ಮಾಡುತ್ತಿದ್ದೇವೆ ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ಗುರುದತ್ ಕಾಮತ್ ಉದ್ಘಾಟಿಸಿ ಮಾತನಾಡಿ, ಡಿಎಸ್ಎಸ್ ಸಂಘಟನೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ನಿಮ್ಮ ಕಾನೂನು ಬದ್ಧ ಹೋರಾಟಕ್ಕೆ ಸಹಕಾರ ನೀಡುತ್ತೇವೆ. ದೀನ,ದಲಿತರ ಸಮಸ್ಯೆ ಬಗ್ಗೆ ಸಂಘಟನೆ ಸ್ಪಂದಿಸಬೇಕು ಎಂದರು.
ಸಭೆಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ದಲಿತ ಮಹಿಳಾ ಒಕ್ಕೂಟದ ಸಮಿತಿ ಸದಸ್ಯೆ ಪವಿತ್ರ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷ ಸುನೀಲ್, ಸದಸ್ಯೆ ಲಿಲ್ಲಿ ಮಾತುಕುಟ್ಟಿ, ಮುಖಂಡರಾದ ಎಸ್.ಡಿ.ರಾಜೇಂದ್ರ, ಎನ್.ಎಂ.ಕಾಂತರಾಜ್, ಮಂಜುನಾಥ್ ಕೆಸವಿ, ಡಿಎಸ್ಎಸ್ ಮುಖಂಡರಾದ ಮಹೇಂದ್ರ ಸ್ವಾಮಿ, ವಾಲ್ಮೀಕಿ ಶ್ರೀನಿವಾಸ್, ವಿಮಲ, ಶೆಟ್ಟಿಕೊಪ್ಪ ಮಹೇಶ್, ಪಿಕಪ್ ಚಂದ್ರು, ಮಹೇಂದ್ರಸ್ವಾಮಿ, ವಿಜಯಕುಮಾರಿ, ಕಡೂರು ಲಕ್ಷ್ಮಣ ಮುಂತಾದವರಿದ್ದರು.