ತಂತ್ರಜ್ಞಾನವು ಆಧುನಿಕ ಭಾರತದ ಅಭಿವೃದ್ಧಿಗೆ ಪೂರಕ: ಪ್ರೊ. ನರಸಿಂಹ ಕೌಲಗೂಡ್‌

KannadaprabhaNewsNetwork | Published : May 6, 2024 12:31 AM

ಇಂದಿನ ವಿಜ್ಞಾನ ಯುಗವು ಮೂಲಭೂತ ಕ್ಷೇತ್ರಗಳಾದ ಕೃಷಿ, ತೋಟಗಾರಿಕೆಯೂ ಸೇರಿದಂತೆ ಕೈಗಾರಿಕೆ, ನೀರಾವರಿ, ಖಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ದೂರ ಸಂಪರ್ಕ, ವೈದ್ಯಕೀಯ, ಕಂಪ್ಯೂಟರ್‌ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಕೃತಕ ಬುದ್ಧಿಮತ್ತೆಯು ಇಂದು ವೇಗವಾಗಿ ಬೆಳೆಯುತ್ತಿದೆ

ಕನ್ನಡಪ್ರಭ ವಾರ್ತೆ ಮೈಸೂರು

ತಂತ್ರಜ್ಞಾನವು ಆಧುನಿಕ ಭಾರತದ ಅಭಿವೃದ್ಧಿಗೆ ಪೂರಕವಾಗಿ ಅಭಿವೃದ್ಧಿಗೊಳ್ಳುತ್ತಿದೆ. ನಾಗರೀಕತೆ ಬೆಳೆದಂತೆ ಮಾನವನ ಆಲೋಚನಾ ಶಕ್ತಿಯು ಹೊಸ ನಾವಿನ್ಯತೆಯನ್ನು ಪಡೆದು ಮಾನವನ ಶಕ್ತಿ ಸಾಮರ್ಥ್ಯವನ್ನು ಉದ್ದೀಪನಾಗೊಳಿಸುತ್ತಿದೆ ಎಂದು ಎನ್ಐಇ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ವಿಭಾಗದ ಪ್ರಾಧ್ಯಾಪಕ ಡಾ. ನರಸಿಂಹ ಕೌಲಗೂಡ್‌ ತಿಳಿಸಿದರು.

ನಗರದ ಎಂಎಂಕೆ ಮತ್ತು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜು ವಿಜ್ಞಾನ ವಿಭಾಗಗಳು ಮತ್ತು ಐಕ್ಯೂಎಸಿ ಸಹಯೋಗದಲ್ಲಿ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಐಟೆಕ್ನರಿ ರಾಜ್ಯ ಮಟ್ಟದ ಒಂದು ದಿನದ ಉಪನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಇಂದಿನ ವಿಜ್ಞಾನ ಯುಗವು ಮೂಲಭೂತ ಕ್ಷೇತ್ರಗಳಾದ ಕೃಷಿ, ತೋಟಗಾರಿಕೆಯೂ ಸೇರಿದಂತೆ ಕೈಗಾರಿಕೆ, ನೀರಾವರಿ, ಖಗೋಳಶಾಸ್ತ್ರ, ಭೂಗರ್ಭಶಾಸ್ತ್ರ, ದೂರ ಸಂಪರ್ಕ, ವೈದ್ಯಕೀಯ, ಕಂಪ್ಯೂಟರ್‌ ಕ್ಷೇತ್ರಗಳಲ್ಲಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದ್ದು, ಕೃತಕ ಬುದ್ಧಿಮತ್ತೆಯು ಇಂದು ವೇಗವಾಗಿ ಬೆಳೆಯುತ್ತಿದೆ. ಇದರ ಬಗೆಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸಾಯಿನಾಥ್‌ ಮಲ್ಲಿಗೆಮಾಡು ಮಾತನಾಡಿ, ನಾಗರೀಕತೆ ಬೆಳೆದಂತೆ ಆಧುನಿಕ ಆವಿಷ್ಕಾರಗಳು ತಂತ್ರಜ್ಞಾನದ ಮೂಲಕ ಅಭಿವೃದ್ಧಿಗೊಳ್ಳುತ್ತಿದೆ. ಬೀಸೋಕಲ್ಲು ಒನಕೆ ಕೃಷಿ ಪರಿಕರಗಳ ಬಳಕೆಯಿಂದ ಪ್ರಾರಂಭಗೊಂಡ ತಂತ್ರಜ್ಞಾನವು ಇಂದು ದೇಶದ ಎಲ್ಲಾ ಕ್ಷೇತ್ರಗಳಲ್ಲಿಯೂ ನಿತ್ಯವೂ ಅಭಿವೃದ್ಧಿಗೊಳ್ಳುತ್ತಿದೆ. ಇದರಿಂದ ದೇಶದ ಸಮಗ್ರ ಅಭಿವೃದ್ಧಿಗೆ ಅವಕಾಶ ಸಿಕ್ಕಿದೆ ಎಂದರು.

ಕೋವಿಡ್‌ವಿಷಮ ಕಾಲದಲ್ಲಿ ಇಡೀ ಜಗತ್ತೇ ಸ್ಥಬ್ಧಗೊಂಡಾಗ ಎಲ್ಲರಿಗೂ ತಂತ್ರಜ್ಞಾನ ಆಧಾರಿತವಾಗಿ ಎಲ್ಲಾ ರೀತಿಯ ಅನುಕೂಲಗಳು ದೊರೆಯಲು ಸಹಕಾರವಾಯಿತು ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಂಗವಾಗಿ ವಿಜ್ಞಾನ ಕ್ಷೇತ್ರದ ಬಗೆಗೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ನಗರದ ವಿವಿಧ ಕಾಲೇಜುಗಳಿಂದ 150 ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ಉಪ ಪ್ರಾಂಶುಪಾಲೆ ಪ್ರೊ.ಎನ್‌. ಭಾರತಿ, ಐಕ್ಯೂಎಸಿ ಸಂಚಾಲಕಿ ಕೆ.ಎಸ್‌. ಸುಕೃತಾ, ಮುಖ್ಯಸ್ಥರಾದ ಚೈತ್ರಾ, ಪವಿತ್ರಾ, ಪಲ್ಲವಿ ಅಂಗಡಿ, ನಿಹಾರಿಕಾ ಜೈನ್‌, ಹೇಮಾ ಮೊದಲಾದವರು ಇದ್ದರು.