ಕೈಗಾರಿಕಾ ಕೇಂದ್ರದಲ್ಲಿ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣಗಳ ವಿತರಣೆ
ಬಡವರ ಬದುಕನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿವಿಧ ಸೌಲಭ್ಯಗಳನ್ನು ಪಡೆದು ಕುಶಲಕರ್ಮಿಗಳು ಸ್ವಾವಲಂಬಿ, ಸ್ವಾಭಿಮಾನಿ ವ್ಯಕ್ತಿಗಳಾಗಿ ಸಮಾಜದ ಮುನ್ನಲೆಗೆ ಬರಬೇಕೆಂದು ಶಾಸಕ ಎಚ್.ಡಿ.ತಮ್ಮಯ್ಯ ಕರೆ ನೀಡಿದರು.
ಶನಿವಾರ ಕೈಗಾರಿಕಾ ಕೇಂದ್ರದಲ್ಲಿ 2025-26 ನೇ ಸಾಲಿನ ಕೈಗಾರಿಕೆ ಮತ್ತು ವಾಣಿಜ್ಯಇಲಾಖೆಯಲ್ಲಿ ಗ್ರಾಮೀಣ ಕೈಗಾರಿಕೆ ಗಳ ಸಹಯೋಗದಲ್ಲಿ ₹14.48 ಲಕ್ಷ ವೆಚ್ಚದ ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಉಪಕರಣಗಳ ವಿತರಣೆ ಮಾಡಿ ಮಾತನಾಡಿದ ಅವರು, 181 ಫಲಾನುಭವಿಗಳಿಗೆ ₹14.48 ಲಕ್ಷ ವೆಚ್ಚದ ಆಧುನಿಕ ಉಪಕರಣಗಳನ್ನು ಪಡೆದು ಕೊಂಡ ವೃತ್ತಿಪರರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಈ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂದರು.12 ನೇ ಶತಮಾನದಲ್ಲಿ ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದರು, ಅದನ್ನು 19 ನೇ ಶತಮಾನದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಂವಿಧಾನದ ಮೂಲಕ ಬಡವರು ಮಾಡುವ ವಿವಿಧ ಕಾಯಕಗಳಿಗೆ ಸರ್ಕಾರದಿಂದ ಸಹಾಯಧನ ಕೊಡುವಂತೆ ಮಾಡಿದ್ದರು. ಆದರೆ, ಈಗ ಉಚಿತ ಸೌಲಭ್ಯಗಳನ್ನು ನೀಡುವ ಮೂಲಕ ವೃತ್ತಿಪರ ಕಸುಬುಗಳಿಗೆ ಉತ್ತೇಜನ ನೀಡಲಾಗುತ್ತಿದೆಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಶಿಕ್ಷಣ ಪಡೆದವರಿಗೆ ಸಮಾನ ಅವಕಾಶಗಳು ಲಭ್ಯವಿದೆ ಎಂಬುದನ್ನು ಮನಗಾಣಬೇಕಿದೆ. ಈ ನಿಟ್ಟಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನಆದ್ಯತೆ ನೀಡಬೇಕೆಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಪಿ ಮಂಜೇಗೌಡ, ವೃತ್ತಿಪರ ಕುಶಲ ಕರ್ಮಿಗಳು ಉದ್ಯೋಗವನ್ನು ಉತ್ತೇಜಿಸಲು ಸರ್ಕಾರ ಹಲವಾರು ಜನಪರ ಯೋಜನೆ ಕೈಗೊಂಡಿದ್ದು, ಜೀವನೋಪಾಯಕ್ಕೆ ಅನುಕೂಲವಾಗುವ ಈ ಆಧುನಿಕ ಉಪಕರಣಗಳನ್ನು ಪಡೆದು ಹೆಚ್ಚಿನ ರೀತಿಯಲ್ಲಿ ಆರ್ಥಿಕ ಸದೃಢರಾಗಬೇಕೆಂದು ಕರೆನೀಡಿದರು.
ಮರಗೆಲಸ, ಗಾರೆ, ಜನರಲ್ ಎಂಜಿನಿಯರಿಂಗ್, ಬುಟ್ಟಿ ಹೆಣೆಯುವುದು ಸೇರಿದಂತೆ ಒಟ್ಟು ಐದು ಸಾಂಪ್ರದಾಯಿಕ ವೃತ್ತಿ ಕಸುಬಿಗೆ ಅನುಕೂಲವಾಗಲೆಂದು ತಲಾ ₹8 ಸಾವಿರ ಮೌಲ್ಯದ ಉಪಕರಣಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ ಎಂದರು.
ಜಿಲ್ಲೆಗೆ 484 ವಿವಿಧ ಕಸುಬುಗಳಿಗೆ ಗುರಿ ಹೊಂದಿದ್ದು, ಈ ಪೈಕಿ 636 ಅರ್ಜಿಗಳು ನೋಂದಣಿಯಾಗಿವೆ. ಟೆಂಡರ್ ಹಾಕಿರುವವರು ಕಡಿಮೆ ದರಕ್ಕೆ ಹಾಕಿದ್ದರಿಂದ ಎಲ್ಲರಿಗೂ ಉಪಕರಣ ನೀಡಲು ಸಹಕಾರಿಯಾಗಿದೆ ಎಂದರು.ಈ ವೇಳೆ ಅಶೋಕ್, ವಿವಿಧ ಕಸುಬುಗಳ ವೃತ್ತಿಪರ ಫಲಾನುಭವಿಗಳು ಉಪಸ್ಥಿತರಿದ್ದರು.