ಕನ್ನಡಪ್ರಭ ವಾರ್ತೆ ಕುಶಾಲನಗರ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳ ಕುಶಾಲನಗರ ತಾಲೂಕು ಮಟ್ಟದ ಅನುಷ್ಠಾನ ಸಮಿತಿಯ ಪ್ರಗತಿ ಪರಿಶೀಲನಾ ಸಭೆ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಅಧ್ಯಕ್ಷತೆಯಲ್ಲಿ ಪುರಸಭೆ ಸಭಾಂಗಣದಲ್ಲಿ ನಡೆಯಿತು.
ಸಭೆಗೆ ಪಾಲ್ಗೊಳ್ಳದೆ ಸಿಬ್ಬಂದಿ ಕಳುಹಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕು ಮಟ್ಟದ ಅಧಿಕಾರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಯಿತು. ಸಮರ್ಪಕ ಮಾಹಿತಿ ಇಲ್ಲದ ಸಿಬ್ಬಂದಿಗಳನ್ನು ಸಭೆಗೆ ಕಳುಹಿಸುವ ಪರಿಪಾಠದ ಬಗ್ಗೆ ಸಭಾಧ್ಯಕ್ಷರು ಹರಿಹಾಯ್ದರು.
ಸಭೆಗೆ ಸತತವಾಗಿ ಗೈರಾಗುತ್ತಿರುವ ಇಲಾಖೆಯ ಅಧಿಕಾರಿ ಶ್ರೀದೇವಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು.ಶಕ್ತಿ ಯೋಜನೆ ಸಂಬಂಧಿಸಿದಂತೆ ಬಸವನಹಳ್ಳಿಯಲ್ಲಿ ನೂತನ ಡಿಪೋ ನಿರ್ಮಾಣ ಕಾಮಗಾರಿ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಯಿತು. ಕೂಡ್ಲೂರು ಕೈಗಾರಿಕಾ ಘಟಕದ ಕಾರ್ಮಿಕರಿಗೆ ಶಕ್ತಿ ಯೋಜನೆ ಸೌಲಭ್ಯ ದೊರೆಯದಿರುವ ಬಗ್ಗೆ ವಿ.ಪಿ.ಶಶಿಧರ್ ವಿಷಯ ಪ್ರಸ್ತಾಪಿಸಿದರು. ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಮಡಿಕೇರಿ ಡಿಪೋ ಮೂಲಕ ಬಸ್ ವ್ಯವಸ್ಥೆ ಕಲ್ಪಿಸಬೇಕಿದೆ ಎಂದು ಸಂಚಾರಿ ನಿಯಂತ್ರಣಾಧಿಕಾರಿಗೆ ಸೂಚಿಸಿದರು.ಹೆಬ್ಬಾಲೆ, ಶಿರಂಗಾಲ ಭಾಗದಿಂದ ಬರುವ ಕೂಲಿ ಕಾರ್ಮಿಕರಿಗೆ ಸಾರಿಗೆ ಬಸ್ ಸೌಲಭ್ಯ ದೊರಕದೆ ಖಾಸಗಿ ವಾಹನಗಳಿಗೆ ಹೆಚ್ಚುವರಿ ಹಣ ನೀಡಿ ಕೆಲಸಕ್ಕೆ ಬರುವ ಪರಿಸ್ಥಿತಿ ಇರುವ ಬಗ್ಗೆ ಸದಸ್ಯ ಕೆ.ಎಸ್.ಕೃಷ್ಣೇಗೌಡ ವಿವರಿಸಿದರು.
ಈಗಾಗಲೆ ಬಿಪಿಎಲ್ ನಿಂದ ಎಪಿಎಲ್ ಗೆ ವರ್ಗವಾವಣೆಗೊಂಡ ಪಡಿತರ ಚೀಟಿ ಪರಿಶೀಲನೆಗೆ ಅವಕಾಶ ಕಲ್ಪಿಸಿದ್ದು ಅರ್ಹ ಫಲಾನುಭವಿಗಳು ತಹಸೀಲ್ದಾರ್ ಗೆ ಅರ್ಜಿ ಸಲ್ಲಿಸುವಂತೆ ಸಭೆಯ ಮೂಲಕ ವಿ.ಪಿ.ಶಶಿಧರ್ ಕೋರಿದರು.
ಉದ್ದಿಮೆ ಆರಂಭಿಸಲು ಸಾಲಸೌಲಭ್ಯ ಯೋಜನೆಗೆ ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ ಯಲ್ಲಿ ಕೂಡ ಸ್ವಜನಪಕ್ಷಪಾತ ನಡೆದಿರುವ ಬಗ್ಗೆ ಶಶಿಧರ್ ಅಧಿಕಾರಿಗಳ ಗಮನ ಸೆಳೆದರು.ಸಭೆಯಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್, ಜಿಲ್ಲಾ ಸಮಿತಿ ಉಪಾಧ್ಯಕ್ಷ ಕೆ.ಸಿ.ಶಶಿಭೀಮಯ್ಯ, ಸದಸ್ಯರಾದ ಕೆ.ಎಸ್.ಕೃಷ್ಣೇಗೌಡ, ವಿವೇಕಾನಂದ ಎಸ್.ಎಸ್, ಶ್ರೀನಿವಾಸ್ ಕುಮಾರ್ ಎನ್, ಆದಂ ಎಂ.ಎ, ಶ್ರೀನಿವಾಸ್ ಎಸ್, ಮಲ್ಲಿಕಾರ್ಜುನ ಬಿ.ಸಿ, ಕಿಶೋರ್ ಯು.ಎಂ, ರಫೀಕ್ ಖಾನ್, ರಾಜಶೇಖರ, ಫಿಲೋಮಿನ ಇದ್ದರು.