ಆಸ್ತಿ ತೆರಿಗೆ ಹೆಚ್ಚಳ: ಪೌರಾಯುಕ್ತ-ಸದಸ್ಯ ವಾಗ್ವಾದ

KannadaprabhaNewsNetwork | Published : Mar 22, 2025 2:05 AM

ಸಾರಾಂಶ

ಸರ್ಕಾರದ ಆದೇಶದ ಮೇರೆಗೆ ಶೇ. 5ರಷ್ಟು ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು. ಆಗ, ಉಸ್ಮಾನ್‌, ಈ ರೀತಿ ತೆರಿಗೆ ಹೆಚ್ಚಿಸಿದರೆ ಸಾರ್ವಜನಿಕರಿಗೆ ಹೊರೆಯಾಗಲಿದೆ. ಶೇ. 3ರಷ್ಟು ಮಾತ್ರ ತೆರಿಗೆ ಹೆಚ್ಚಿಸಿ ಎಂದು ಮನವಿ ಮಾಡಿದರು.

ಗಂಗಾವತಿ:

ನಗರಸಭೆ ವ್ಯಾಪ್ತಿಯಲ್ಲಿ ಬರುವ ವಿವಿಧ ಆಸ್ತಿಗಳಿಗೆ ಶೇ. 5ರಷ್ಟು ತೆರಿಗೆ ಹೆಚ್ಚಿಸಿರುವುದಕ್ಕೆ ನಗರಸಭೆಯ ಪೌರಾಯುಕ್ತರು ಮತ್ತು ಆಡಳಿತ ಸದಸ್ಯನ ನಡುವೆ ವಾಗ್ವಾದ ನಡೆಯಿತು.

ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ 2025 ಮತ್ತು 2026ನೇ ಸಾಲಿನಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ಬರುವ ಆಸ್ತಿ ತೆರಿಗೆ ಪರಿಸ್ಕೃತ ಕುರಿತು ಚರ್ಚೆ ನಡೆದಾಗ ಪೌರಾಯುಕ್ತ ವಿರೂಪಾಕ್ಷಮೂರ್ತಿ ಮತ್ತು ಸದಸ್ಯ ಉಸ್ಮಾನ್ ನಡುವೆ ಮಾತಿನ ಚಕಮಕಿ ನಡೆಯಿತು.

ಸರ್ಕಾರದ ಆದೇಶದ ಮೇರೆಗೆ ಶೇ. 5ರಷ್ಟು ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದರು. ಆಗ, ಉಸ್ಮಾನ್‌, ಈ ರೀತಿ ತೆರಿಗೆ ಹೆಚ್ಚಿಸಿದರೆ ಸಾರ್ವಜನಿಕರಿಗೆ ಹೊರೆಯಾಗಲಿದೆ. ಶೇ. 3ರಷ್ಟು ಮಾತ್ರ ತೆರಿಗೆ ಹೆಚ್ಚಿಸಿ ಎಂದು ಮನವಿ ಮಾಡಿದರು. ಪೌರಾಯುಕ್ತರು, ಸರ್ಕಾರದ ನಿರ್ದೇಶನದಂತೆ ಹೆಚ್ಚಿಸಲಾಗಿದೆ. ಕಡಿಮೆ ಮಾಡಲು ಸಾಧ್ಯವಿಲ್ಲ ಎಂದರು. ಇದರಿಂದ ಆಕ್ರೋಶಗೊಂಡ ಸದಸ್ಯ, ನೀವೇ ನಿರ್ಣಯ ಕೈಗೊಂಡರೆ ಹೇಗೆ, ಸದಸ್ಯರ ಒಮ್ಮತ ಪಡೆದು ಶೇ.3ರಿಂದ ಶೇ.5ರ ವರೆಗೆ ತೆರಿಗೆ ಹೆಚ್ಚಿಸಬೇಕೆಂದು ಸೂತ್ತೋಲೆ ಇದೆ. ಆದರೆ, ನೀವು ದಿಢೀರ್‌ನೆ ಶೇ.5ರಷ್ಟು ಹೆಚ್ಚಿಸಿರುವುದು ಸರಿಯಲ್ಲ ಎಂದು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಗೆ ಶೇ.3ರಷ್ಟು ತೆರಿಗೆ ಹೆಚ್ಚಿಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಇನ್ನುಳಿದಂತೆ 2025-26ನೇ ಸಾಲಿನ ಎಸ್‌ಎಫ್‌ಸಿ ಅನುದಾನ ₹ 26 ಲಕ್ಷ, ಕಾಮಗಾರಿಯ ಕ್ರಿಯಾಯೋಜನೆ ಸೇರಿದಂತೆ ವಿವಿಧ ಯೋಜನೆಗಳಿಂದ ಬಂದ ಅನುದಾನದ ಕ್ರಿಯಾಯೋಜನೆಗೆ ಅಮೋದನೆ ಪಡೆಯಲಾಯಿತು.

ಬಜೆಟ್ ಮಂಡನೆ:

ನಗರಸಭೆಯ 2025-26ನೇ ಸಾಲಿನ ಆಯವ್ಯಯ ಮುಂಗಡ ಪತ್ರವನ್ನು ನಗರಸಭೆ ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ಚೌಡ್ಕಿ ಮಂಡಿಸಿದರು. ಒಟ್ಟು ನೀರಿಕ್ಷಿತ ಆದಾಯ ₹ 41,05,84,000 ಇದ್ದು, ಒಟ್ಟು ನೀರಿಕ್ಷಿತ ಖರ್ಚು ₹41,02,12,000 ಅಂದಾಜಿಸಲಾಗಿದೆ. ನೀರಿಕ್ಷಿತ ಉಳಿತಾಯ ₹3,72,000 ಇದೆ ಎಂದು ಪ್ರಸ್ತಾಪಿಸಿದರು.

ಅಧ್ಯಕ್ಷ ಮೌಲಾಸಾಬ್‌ ಅಧ್ಯಕ್ಷತೆ ವಹಿಸಿದ್ದರು. ಉಪಾದ್ಯಕ್ಷೆ ಅನ್ನುಪೂರ್ಣಮ್ಮ, ಸದಸ್ಯರಾದ ಮನೋಹರಸ್ವಾಮಿ, ಶ್ಯಾಮೀದ್ ಮನಿಯಾರ್, ವಾಸುದೇವ ನವಲಿ, ಎಫ್‌. ರಾಘವೇಂದ್ರ, ಸುನಿತಾ ಶ್ಯಾವಿ ಸೇರಿದಂತೆ ಸದಸ್ಯರು ಭಾಗವಹಿಸಿದ್ದರು.

Share this article