ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ ಅನುಮತಿ ದೊಡ್ಡ ಷಡ್ಯಂತ್ರ: ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌

KannadaprabhaNewsNetwork |  
Published : Aug 18, 2024, 01:57 AM ISTUpdated : Aug 18, 2024, 10:10 AM IST
ದಿನೇಶ್‌ ಗುಂಡೂರಾವ್‌ | Kannada Prabha

ಸಾರಾಂಶ

 ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಇದೊಂದು ದೊಡ್ಡ ಷಡ್ಯಂತ್ರ ಎಂದು ಆರೋಪಿಸಿದ್ದಾರೆ.

 ಮಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ವಿಚಾರದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌, ಇದೊಂದು ದೊಡ್ಡ ಷಡ್ಯಂತ್ರ. ತಪ್ಪೇ ಮಾಡದ ಸಿಎಂ ವಿರುದ್ಧ ರಾಜ್ಯಪಾಲರು ತನಿಖೆಗೆ ಅನುಮತಿ ಕೊಟ್ಟಿದ್ದಾರೆ. ಬಿಜೆಪಿಯ ಕೈಗೊಂಬೆಯಾಗಿ ರಾಜ್ಯಪಾಲರು ಆಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಸರ್ಕಾರ ಎಲ್ಲ ಸಂವಿಧಾನಿಕ ಹುದ್ದೆಗಳನ್ನು ಸರ್ವನಾಶ ಮಾಡುತ್ತಿದೆ. ಇಡಿ, ಐಟಿ, ಸಿಬಿಐ ಎಲ್ಲವನ್ನೂ ದುರುಪಯೋಗ ಮಾಡಿದೆ. ಇದೀಗ ರಾಜ್ಯಪಾಲರ ಕಚೇರಿಯನ್ನೂ ಬಿಜೆಪಿ ಕಚೇರಿಯನ್ನಾಗಿ ಮಾಡಿದೆ. ಈ ವಿಚಾರದ ಕುರಿತು ನಾವು ಕಾನೂನಿನ ಹೋರಾಟ ಮಾಡುತ್ತಿದ್ದೇವೆ. ಇದಕ್ಕೆಲ್ಲ ಸಿಎಂ ಜಗ್ಗೋದೂ ಇಲ್ಲ, ಬಗ್ಗೋದೂ ಇಲ್ಲ ಎಂದರು.

ಬಿಜೆಪಿ ದುರ್ನಡತೆ ಮುಂದುವರೆದಿದೆ. ಇದಕ್ಕೆ ಜನರು ಕೂಡ ತಕ್ಕ ಉತ್ತರ ಕೊಡ್ತಾರೆ. ರಾಜ್ಯಪಾಲರ ಮೂಲಕ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿ ಚುನಾಯಿತ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಯಡಿಯೂರಪ್ಪ ಮೇಲೆ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರೇ ವರದಿ ಕೊಟ್ಟಿದ್ದರು. ಯಡಿಯೂರಪ್ಪ ತಪ್ಪಿನ ಬಗ್ಗೆ ಆ ವರದಿಯಲ್ಲಿ ಸ್ಪಷ್ಟವಾಗಿತ್ತು. ಆದರೂ ಗವರ್ನರ್ ಆಗ ಬಹಳಷ್ಟು ಅಳೆದು ತೂಗಿ ಪ್ಯಾಷಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದರು. ಆದರೆ ಯಡಿಯೂರಪ್ಪರಿಗೂ ಸಿದ್ದರಾಮಯ್ಯರಿಗೂ ಹೋಲಿಕೆ ಮಾಡಲು ಆಗದು.ಈ ಥರ ಷಡ್ಯಂತ್ರ ಮಾಡಿದರೆ ಅದು ಬಿಜೆಪಿಯವರ ಹೇಡಿತನ ತೋರಿಸುತ್ತದೆ ಎಂದು ಟೀಕಿಸಿದರು.

ಉಪಚುನಾವಣೆಗೂ ಈ ಘಟನೆಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ ದಿನೇಶ್‌ ಗುಂಡೂರಾವ್‌, ಇದು ಸಿದ್ದರಾಮಯ್ಯರನ್ನು ಮುಗಿಸಲು ಬಿಜೆಪಿ ಮಾಡಿರುವ ಅತಿ ದೊಡ್ಡ ಷಡ್ಯಂತ್ರ. ಇದರ ವಿರುದ್ಧ ನಾವು ಹೋರಾಟ ಮಾಡಿಯೇ ಮಾಡುತ್ತೇವೆ. ನಾವು ಇದನ್ನು ಎದುರಿಸಿ ಗೆಲ್ತೀವಿ, ಕಾಂಗ್ರೆಸ್ ಗೆ ಶಕ್ತಿ ನೀಡುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.

ಮಂಗಳವಾರ ವೈದ್ಯರು, ಆಸ್ಪತ್ರೆ ಮಾಲೀಕರ ಸಭೆ

ರಾಜ್ಯದ ವೈದ್ಯರು, ಆಸ್ಪತ್ರೆ ಮಾಲೀಕರ ಸಭೆಯನ್ನು ಮಂಗಳವಾರ ಕರೆದಿದ್ದೇನೆ. ವೈದ್ಯರು, ದಾದಿಯರ ಸುರಕ್ಷತೆ ಬಗ್ಗೆ ಏನೇನು ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಆ ಸಭೆಯಲ್ಲಿ ಚರ್ಚೆ ನಡೆಸಲಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ದೇಶಾದ್ಯಂತ ವೈದ್ಯರ ಪ್ರತಿಭಟನೆ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಕೊಲ್ಕತ್ತ ಘಟನೆ ಎಲ್ಲರಲ್ಲೂ ಆತಂಕ, ಗಾಬರಿ ಸೃಷ್ಟಿ ಮಾಡಿದೆ. ವೈದ್ಯರ ಪ್ರತಿಭಟನೆ ಸರಿಯಲ್ಲ ಅಂತ ಹೇಳಲ್ಲ, ಒಳ್ಳೆಯ ಉದ್ದೇಶದಿಂದ ಮಾಡುತ್ತಿದ್ದಾರೆ. ವೈದ್ಯರು, ದಾದಿಯರಿಗೆ ಕೆಲಸ ಮಾಡಲು ಭಯದ ವಾತಾವರಣ ಇರಬಾರದು, ಅವರು ಸುರಕ್ಷಿತವಾಗಿರಬೇಕು. ಸುರಕ್ಷತೆ ಆಸ್ಪತ್ರೆ ನಡೆಸುವವರ ಜವಾಬ್ದಾರಿ ಕೂಡ ಆಗಿದೆ. ರಕ್ಷಣೆ ಕೊಡಿಸುವುದು ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯ. ಏನಾದರೂ ದೋಷಗಳು, ವ್ಯತ್ಯಾಸಗಳಿದ್ದರೆ ಈ ಸಭೆಯಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರದ ಸಿಹಿ ಸುದ್ದಿ : ಏನೆಲ್ಲಾ ಸಿಗುತ್ತೆ ?
ಶಾಲೆ ಬಾಗಿಲಿಗೆ ಸಿಲುಕಿ ಬಾಲಕಿ ಬೆರಳು ಕಟ್‌ : ಕಸಕ್ಕೆಸೆದ ಶಿಕ್ಷಕರು-ಅಮಾನವೀಯ ವರ್ತನೆ!