ಗದಗ: ಕೇಂದ್ರ ಗೃಹಮಂತ್ರಿ ಅಮಿತ್ ಶಾ ಅವರು ಡಾ. ಬಿ.ಆರ್.ಅಂಬೇಡ್ಕರ ವಿರೋಧಿ ಹೇಳಿಕೆ ಖಂಡಿಸಿ ದಸಂಸ ಒಕ್ಕೂಟ, ದಲಿತ ಪ್ರಗತಿಪರ ಸಂಘಟನೆಗಳಿಂದ ಗುರುವಾರ ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ದಲಿತ ಮುಖಂಡ ಬಸವರಾಜ ಎಂ. ಕಡೇಮನಿ ಮಾತನಾಡಿ, ಗೃಹ ಮಂತ್ರಿ ಅಮಿತ್ ಶಾ ಸಂವಿಧಾನ ಕುರಿತ ಚರ್ಚೆ ವೇಳೆ ಡಾ. ಅಂಬೇಡ್ಕರ್ ಬಗ್ಗೆ ಜಪ ಮಾಡದೇ ದೇವರ ನಾಮಸ್ಮರಣೆ ಮಾಡಿದ್ದರೆ ಸ್ವರ್ಗದಲ್ಲಿ ಸ್ಥಾನ ಸಿಗುತ್ತಿತ್ತು ಎಂದು ಅಂಬೇಡ್ಕರ್ ಬಗ್ಗೆ ಅವಹೇಳನವಾಗಿ ಮಾತನಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇನೆ. ಸೂರ್ಯ ಚಂದ್ರ ಇರುವರೆಗೂ ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ರಕ್ತಪಾತವಾದರೂ ಸರಿ ಕಾಪಾಡುವ ಜವಾಬ್ದಾರಿ ನಮ್ಮೆಲ್ಲರದು ಎಂದು ಆಕ್ರೋಶ ವ್ಯಕ್ತಪಡಿಸಿದರು.ಶರೀಫ ಬಿಳಿಯಲಿ ಮಾತನಾಡಿ, ಅಮಿತ್ ಶಾ ಅವರು ಕೂಡಲೇ ರಾಜೀನಾಮೆ ಕೊಡಬೇಕು. ಇಲ್ಲದಿದ್ದರೆ ಗದಗ ಬಂದ್ ಗೆ ಕರೆ ನೀಡಲಾಗುವುದು ಎಂದರು.
ರಮೇಶ ಚಲವಾದಿ ಮಾತನಾಡಿ, ಕೇಂದ್ರ ಗೃಹ ಮಂತ್ರಿಯವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಬಗ್ಗೆ ಹಗುರವಾಗಿ ಮಾತನಾಡಿ ಅವರು ದಲಿತ ವಿರೋಧಿ, ಅಂಬೇಡ್ಕರ ವಿರೋಧಿ ಎಂದು ತಮ್ಮನ್ನು ತಾವು ತೋರಿಸಿಕೊಟ್ಟಿದ್ದಾರೆ. ಕೂಡಲೇ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.ಅಶೋಕ ಬರಗುಂಡಿ ಮಾತನಾಡಿ, ಅಂಬೇಡ್ಕರ ಎಂದರೆ ಜ್ಞಾನ, ಅಂಬೇಡ್ಕರ ಅಂದರೆ ಸಮಾನತೆ, ಸಮಾಜದ ಎಲ್ಲರಿಗೂ ಸಮಾನತೆಯ ಸಂವಿಧಾನ ನೀಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅಂತಹ ಮಹಾನ್ ವ್ಯಕ್ತಿಯ ಬಗ್ಗೆ ಮಾತನಾಡುವ ಯೋಗ್ಯತೆ ಅಮಿತ್ ಶಾಗೆ ಇಲ್ಲ ಎಂದರು.
ಈ ವೇಳೆ ದಲಿತ ಮುಖಂಡರಾದ ಬಾಲರಾಜ ಅರಬರ, ನಾಗರಾಜ ಗೋಕಾವಿ, ಚಂದ್ರಕಾಂತ ಚವ್ಹಾಣ, ರಮೇಶ ಕಡೇಮನಿ, ವಿರುಪಾಕ್ಷ ರಾಮಗಿರಿ, ಆನಂದ ಸಿಂಗಾಡಿ, ಮಲಕಪ್ಪ ಕಾಳೆ, ಮಂಜುನಾಥ ಮುಳಗುಂದ, ಯೂಸೂಫ್ ನಮಾಜಿ, ವಿನಾಯಕ ಬಳ್ಳಾರಿ, ಮುತ್ತು ಬಿಳೆಯಲಿ, ಪರಮೇಶ ಕಾಳೆ, ಕೆಂಚಪ್ಪ ಮ್ಯಾಗೇರಿ, ಮುತ್ತಪ್ಪ ಭಜಂತ್ರಿ, ಮಾರುತಿ ಅಂಗಡಿ, ಸಂತೋಷ ಬಣಕಾರ, ಶ್ರೀಕಾಂತ ಮಳಲಿ, ಮಂಜು ಚಲವಾದಿ, ಪೂಜಾ ಬೇವೂರ, ಗಣೇಶ ಹುಬ್ಬಳ್ಳಿ, ಶಿವು ತಮ್ಮಣ್ಣವರ, ಡಿ.ಎಲ್.ಬಣಕಾರ, ಗುರಪ್ಪ ಬಿಳೆಯಲಿ, ಅನಿಲ ಕಾಳೆ, ಪರಶುರಾಮ ಬಿಳೆಯಲಿ, ಹೊನ್ನಪ್ಪ ಸಾಕಿ, ಲಕ್ಷ್ಮಣ ವಡ್ಡರಕಲ್ಲ, ಶಾಕೀರ ಕಾತರಗಿ, ಶಾರುಖ ಹುಯಿಲಗೋಳ, ಶೌಕತಅಲಿ ಕಾತರಕಿ, ಮುನ್ನಾ ಮುಲ್ಲಾನವರ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು ಇದ್ದರು.