- ಕರೆ-ಡೇಟಾ ಬಳಸುವವರಿಗೆ ಹೆಚ್ಚಿನ ಆರ್ಥಿಕ ಹೊರೆ: ಎಐಡಿವೈಒ- - - ಕನ್ನಡಪ್ರಭ ವಾರ್ತೆ, ದಾವಣಗೆರೆ ಜನರು ದಿನನಿತ್ಯ ಬಳಸುವ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು, ಪೆಟ್ರೋಲ್-ಡೀಸಲ್ ಬೆಲೆಗಳು ಗಗನಕ್ಕೆ ಏರಿವೆ. ಹೀಗಿರುವಾಗ ಮೊಬೈಲ್ ಟ್ಯಾರಿಫ್ ದರವನ್ನೂ ಏರಿಕೆ ಮಾಡಿದ್ದು, ಇದರಿಂದ ಜನರಿಗೆ ಗಾಯದ ಮೇಲೆ ಬರೆಎಳೆದಂತಾಗಿದೆ ಎಂದು ಆರೋಪಿಸಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಪದಾಧಿಕಾರಿಗಳು ನಗರದ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಸರ್ಕಾರದ ಖಾಸಗೀಕರಣ ನೀತಿಯಿಂದಾಗಿ ಹಲವು ಖಾಸಗಿ ಕಂಪನಿಗಳು ದೇಶದ ದೂರಸಂಪರ್ಕ ಕ್ಷೇತ್ರದಲ್ಲಿ ಹಿಡಿತ ಸಾಧಿಸಿವೆ. ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ರೆಕ್ಕೆಯಿಲ್ಲದ ಹಕ್ಕಿಯಂತಾಗಿದೆ. ಖಾಸಗಿ ಕಂಪನಿಗಳ ಜೊತೆ ಸ್ಪರ್ಧಿಸಲಾಗದೇ ಸಾವಿನಂಚಿನಲ್ಲಿದೆ. ಇದು ಸರ್ಕಾರದ ಉದ್ದೇಶಪೂರಿತ ನಿಲುವು. ಖಾಸಗಿ ಕಂಪನಿಗಳ ಅತ್ಯಧಿಕ ಲಾಭ ಗಳಿಸುವ ಉದ್ದೇಶ ದೇಶದ ಜನರ ಮೇಲೆ ಪರಿಣಾಮ ಬೀರಲಿದೆ ಎಂದು ತಿಳಿಸಿದರು.
ಟ್ರಾಯ್ ಸಂಸ್ಥೆಯು ಹಲ್ಲು ಕಿತ್ತಿದ ಹಾವಂತಾಗಿದೆ. ಖಾಸಗಿ ಕಂಪನಿಗಳು ಏರಿಸುವ ಮೊಬೈಲ್ ಕರೆ-ಡೇಟಾ ಬಳಕೆ ದರದ ಮೇಲೆ ಯಾವುದೇ ನಿಯಂತ್ರಣವಿಲ್ಲ. ಈ ಟ್ರಾಯ್ ಖಾಸಗಿ ಕಂಪನಿಗಳ ಸಂಸ್ಥೆಗಳಂತೆ ಕೆಲಸ ಮಾಡುತ್ತಿದೆ. ಇಂತಹ ಜನವಿರೋಧಿ ನೀತಿಯನ್ನು ಎಐಡಿವೈಒ ಅತ್ಯುಗ್ರವಾಗಿ ಖಂಡಿಸುತ್ತದೆ ಎಂದರು.ಪ್ರತಿಭಟನೆಯಲ್ಲಿ ಸಂಘಟನೆ ಪದಾಧಿಕಾರಿಗಳಾದ ಅಭಿಷೇಕ್, ಅನಿಲ ಬಳ್ಳಾರಿ, ಗುರು, ಶಶಿ ಹಾಗೂ ವಿದ್ಯಾರ್ಥಿಗಳು, ಯುವಕರು ಪಾಲ್ಗೊಂಡಿದ್ದರು.
ದಾವಣಗೆರೆಯಲ್ಲಿ ಮೊಬೈಲ್ ಟ್ಯಾರಿಫ್ ದರ ಏರಿಕೆ ಖಂಡಿಸಿ ಎಐಡಿವೈಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು.