ವಿದ್ಯಾರ್ಥಿ ವೇತನ ನೀಡದ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ

KannadaprabhaNewsNetwork | Published : Jun 11, 2024 1:37 AM

ಸಾರಾಂಶ

ಬಿಎಡ್ ಮಾನ್ಯೇಜ್‌ಮೆಂಟ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರ್ಕಾರದ ನಡೆ ಖಂಡನೆ. ರಾಯಚೂರಿನಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರ ಸಮಿತಿ ನೇತೃತ್ವದಲ್ಲಿ ಹೋರಾಟ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ರಾಯಚೂರು

ಬಿಎಡ್ ಮಾನ್ಯೇಜ್‌ಮೆಂಟ್ ಪ್ರವೇಶಾತಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಮತ್ತು ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರ್ಕಾರದ ನಡೆ ಖಂಡಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನಗರ ಸಮಿತಿ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಹೋರಾಟ ನಡೆಸಿದ ಸಮಿತಿ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಬೇಡಿಕೆ ಈಡೇರಿಸಬೇಕು ಎಂದು ಜಿಲ್ಲಾಡಳಿತ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನಗರ ಸಂಘಟನಾ ಕಾರ್ಯದರ್ಶಿ ಪಾಂಡು ಮೊರೆ ಪ್ರತಿಭಟನೆ ಉದ್ದೇಶಿಸಿ ಮಾತಾನಾಡಿ, ರಾಜ್ಯ ಸರ್ಕಾರವು ಬಿಎಡ್ ಪ್ರಶಿಕ್ಷಣಾರ್ಥಿಗಳಿಗೆ ಇರುವಂತಹ ಸೌಕರ್ಯಗಳು ಬಂದ್ ಮಾಡಿರುವ ಕಾರಣ, ರಾಜ್ಯದ್ಯಾಂತ ಹಲವು ವಿದ್ಯಾರ್ಥಿಗಳಿಗೆ ಸಮಸ್ಯೆಯುಂಟಾಗಿದೆ. ಎಷ್ಟೋ ಜನ ವಿದ್ಯಾರ್ಥಿಗಳು ಬಿಎಡ್ ಪ್ರಥಮ ವರ್ಷದಲ್ಲಿ ಸರ್ಕಾರದ ಸೀಟು ಸಿಗದ ಕಾರಣ 1 ವರ್ಷ ವ್ಯರ್ಥ ಮಾಡಬಾರದೆಂದು ಸರ್ಕಾರ ನೀಡುತ್ತಿರುವ ಎಸ್‌ಎಸ್‌ಪಿ ವಿದ್ಯಾರ್ಥಿ ವೇತನವನ್ನು ನಂಬಿ ಬಿಎಡ್ ಮ್ಯಾನೇಜ್‌ಮೆಂಟ್ ಪ್ರವೇಶಾತಿ ಪಡೆದಿದ್ದು, ಆದರೆ ಸರ್ಕಾರವು ಮ್ಯಾನೇಜ್‌ಮೆಂಟ್ ಸೀಟ್ ವಿದ್ಯಾರ್ಥಿಗಳಿಗೆ ದಿಢೀರ್‌ನೆ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್‌ನಲ್ಲಿ ವಸತಿ ಸೌಕರ್ಯ ಒದಗಿಸುತ್ತಿರುವುದನ್ನು ನಿರಾಕರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಕೂಡಲೇ ಸಮಸ್ಯೆ ಬಗೆಹರಿಸಲು ಸರ್ಕಾರ ಕ್ರಮ ವಹಿಸಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ರಾಜ್ಯದ್ಯಾದಂತ ಬೃಹತ್‌ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ನಗರ ಸಂಘಟನಾ ಕಾರ್ಯದರ್ಶಿ ಪಾಂಡು ಮೊರೆ, ಕಾರ್ಯದರ್ಶಿ ಭೀಮೇಶ್ ಸಾಗರ್ , ತಾಲೂಕಾ ಸಂಚಾಲಕಿ ಪ್ರಮೀತ್ ಬಿಚ್ಚಾಲಿ, ನಗರ ಸಹ ಕಾರ್ಯದರ್ಶಿಗಳಾದ ಶಾಂತಕುಮಾರ, ಭರ್ಮ ನಾಯಕ್, ಶ್ರೀನಿಧಿ ಕುಲಕರ್ಣಿ ವಿದ್ಯಾರ್ಥಿಕಾರ್ಯಕರ್ತರಾದ ಸೋಮು ನಾಯಕ್, ಬಸವರಾಜ್, ದೇವರಾಜ್, ಶಿವರಾಜ್, ರಮೇಶ, ಸರೋಜ, ಅನ್ನಪೂರ್ಣ, ಮುತ್ತಮ್ಮ, ಶ್ರೀದೇವಿ, ಮಲ್ಲಿಕಾರ್ಜುನ, ನಾಗರಾಜ, ಸಿದ್ಧಣ್ಣ, ಯಂಕಣ್ಣ ಮತ್ತು ನಗರ ಎಲ್ಲ ಬಿಎಡ್ ಕಾಲೇಜ ವಿದ್ಯಾರ್ಥಿಗಳು ಇದ್ದರು.

Share this article