ಕನ್ನಡಪ್ರಭ ವಾರ್ತೆ ಬೆಳಗಾವಿ
ಹಳೆ ಹುಬ್ಬಳ್ಳಿ ಗಲಭೆ, ಪೊಲೀಸರ ಮೇಲಿನ ದಾಳಿ ಪ್ರಕರಣ ರಾಜ್ಯ ಸರ್ಕಾರ ಹಿಂಪಡೆದು ಆರೋಪಿಗಳನ್ನು ಮುಕ್ತಗೊಳಿಸುತ್ತಿರುವ ಕ್ರಮ ಖಂಡಿಸಿ ಬೆಳಗಾವಿಯ ವಿವಿಧ ಸಮಾಜದ ಪ್ರಮುಖರು, ಗಣ್ಯರು, ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು, ನಾಗರಿಕ ಹಿತರಕ್ಷಣಾ ಸಮಿತಿಯ ನೇತೃತ್ವದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಜಿಲ್ಲಾಧಿಕಾರಿ ಮುಖಾಂತರ ರಾಜ್ಯಪಾಲ ಅವರಿಗೆ ಮನವಿ ಸಲ್ಲಿಸಿದರು.ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ಮುಸ್ಲಿಂ ಮತಗಳ ಓಲೈಕೆಗಾಗಿ ರಾಜ್ಯದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದೆ. ಕಾನೂನು ಬಾಹಿರ ಮತ್ತು ಸಮಾಜ ಘಾತುಕ ಶಕ್ತಿಗಳ ಸದೆಬಡೆದು ಉತ್ತಮ ಕಾನೂನು ಸುವ್ಯವಸ್ಥೆ ಸಮಾಜದಲ್ಲಿ ಸ್ಥಾಪಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅತ್ಯಂತ ಬೇಜವಾಬ್ದಾರಿ ಮತ್ತು ಅಸಂವಿಧಾನಿಕ ನಡೆಯಲ್ಲಿ ನಿರತವಾಗಿದೆ ಎಂದು ಹರಿಹಾಯ್ದರು.
ರೋಹನ ಜವಳಿ ಮಾತನಾಡಿ, ದೇಶ ಸಮಾಜ ರಕ್ಷಿಸಲು ಇರುವ ಪೊಲೀಸರ, ಸೇನೆ ಮೇಲೆಯೆ ದಾಳಿ ಮಾಡುತ್ತಾ ಹೋದರೆ ಸಮಾಜದಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ ? ಎಂದು ಪ್ರಶ್ನಿಸಿದ ಅವರು, ಹಿಂದೂ ಸಮಾಜ ಇದನ್ನು ಖಂಡಿಸುತ್ತದೆ ಎಂದು ಹೇಳಿದರು. ಸತೀಶ ಬಾಚೀಕರ ಮಾತನಾಡಿ, ಮಹಿಳಾ ಸಂಘ, ಯುವಕ ಸಂಘ, ಗಣೇಶೋತ್ಸವ ಮಂಡಳ ಶಾರದೋತ್ಸವ ಮಂಡಳ ಎಲ್ಲರೂ ಎಚ್ಚರ ವಹಿಸುವ ಅವಶ್ಯಕತೆ ಇದೆ. ಹಿಂದೂ ಹಬ್ಬಗಳಿಗೆ ನೂರೆಂಟು ಷರತ್ತು ವಿಧಿಸುವ ಕಾಂಗ್ರೆಸ್ ಸರ್ಕಾರ ಪೊಲೀಸರ ಮೇಲೆ ಹಲ್ಲೆ ಮಾಡುವ ಜಿಹಾದಿಗಳನ್ನು ಮಟ್ಟಹಾಕುವ ಬದಲು ರಕ್ಷಣೆ ಮಾಡಲು ಮೊಕದ್ದಮೆ ಹಿಂತೆಗೆದುಕೊಳ್ಳುವ ದುಷ್ಟ ನಿರ್ಧಾರ ಖಂಡಿಸುತ್ತೇವೆ ಎಂದು ಹೇಳಿದರು.ಅಗ್ರಾನಿ ದಮ್ಮಣಿಗಿ ಮಾತನಾಡಿ, ಈ ರೀತಿ ತುಷ್ಟೀಕರಣ ನೀತಿ, ವಕ್ಫ್ ಮಂಡಳಿಯಿಂದ ರೈತರ ಜಮೀನನ್ನು ತಮ್ಮದು ಎಂದು ನೋಟಿಸ್ ಕಳಿಸುವ ನೀಚ ಕೃತ್ಯ ಖಂಡಿಸಿ ರೈತರೊಂದಿಗೆ ಎಲ್ಲ ಸಮಾಜದವರು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಹೇಶ ಪೋರವಾಲ, ರಮೇಶ ಲದ್ದಡ, ಮುನಿಸ್ವಾಮಿ ಭಂಡಾರಿ, ಗಂಗಾರಾಮ ನಾಯ್ಕ, ಶ್ರೀಕಾಂತ ಕಾಂಬಳೆ, ಶ್ರೀಕಾಂತ ಕದಮ್, ದಯಾನಂದ ನೇತಲಕರ, ವಿಜಯೇಂದ್ರ ಜೋಶಿ, ಗಿರೀಶ ಪೈ, ಮಹೇಶ ಇನಾಮದಾರ, ಆರ್.ಎಸ್.ಮುತಾಲಿಕ, ಸದಾಶಿವ ಹಿರೇಮಠ, ಅಗ್ರಾನಿ ದಮ್ಮಣಗಿ ,ಜಯಾ ನಾಯ್ಕ, ಗೀತಾ ಹೆಗಡೆ, ಅಶೋಕ ಶಿಂತ್ರೆ, ವಿಜಯ ಜಾದವ, ಜೇಠಾಬಾಯಿ ಪಟೇಲ, ಕ್ರಷ್ಣ ಭಟ್ಟ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.