ಕಾಡಾನೆ ಹಾವಳಿ ನಿಯಂತ್ರಣಕ್ಕೆ ಆಗ್ರಹಿಸಿ ರೈತಸಂಘ, ಹಸಿರುಸೇನೆಯಿಂದ ಪ್ರತಿಭಟನೆ

KannadaprabhaNewsNetwork |  
Published : Oct 01, 2024, 01:18 AM IST
ಪೊಟೋ: 30ಎಸ್‌ಎಂಜಿಕೆಪಿ06ಶಿವಮೊಗ್ಗ ತಾಲೂಕು ಭಾಗದಲ್ಲಿ ಹೆಚ್ಚಾಗಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ಆಗ್ರಹಿಸಿ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದ ಆಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. | Kannada Prabha

ಸಾರಾಂಶ

ಶಿವಮೊಗ್ಗ ತಾಲೂಕು ಭಾಗದಲ್ಲಿ ಹೆಚ್ಚಾಗಿರುವ ಕಾಡಾನೆ ಹಾವಳಿಯನ್ನು ನಿಯಂತ್ರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದ ಆಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಾಲೂಕಿನ ಪುರದಾಳು, ಬೇಳೂರು ಹಾಗೂ ತಮ್ಮಡಿಹಳ್ಳಿ ಸುತ್ತಮುತ್ತ ಗ್ರಾಮಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು,ಅರಣ್ಯ ಇಲಾಖೆ ನಿಯಂತ್ರಣ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೋಮವಾರ ನಗರದ ಆಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.

ಪುರದಾಳು ಗ್ರಾಮದ ಹನುಮಂತಪ್ಪ ದಾಸಣ್ಣನವರು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಆತನ ಮೇಲೆ ಕಾಡಾನೆ ದಾಳಿ ನಡೆಸಿ ಕೊಂದು ಹಾಕಿದೆ. ಸರ್ಕಾರ ನಿಗದಿಪಡಿಸಿದ 25 ಲಕ್ಷ ರು. ಪರಿಹಾರವನ್ನು ಅರಣ್ಯ ಇಲಾಖೆ ವತಿಯಿಂದ ನೀಡಬೇಕು ಎಂದು ಆಗ್ರಹಿಸಿದರು.

ಕಾಡಾನೆಗಳು ಗುಂಪಾಗಿ ರೈತರ ಜಮೀನಿನ ಮೇಲೆ ದಾಳಿ ನಡೆಸುತ್ತಿವೆ.ರೈತರು ಬೆಳೆದ ಮೆಕ್ಕೆಜೋಳ,ಬಾಳೆ,ಅಡಿಕೆ ತೋಟವನ್ನು ನಾಶ ಮಾಡಿ ರೈತರಿಗೆ ನಷ್ಟ ಉಂಟು ಮಾಡುತ್ತಿವೆ. ಅಲ್ಲದೇ ಆನೆಗಳು ಗ್ರಾಮಗಳಿಗೆ ನುಗ್ಗುತ್ತಿವೆ.ಜನರು ಜೀವನ್ಮರಣದ ನಡುವೆ ಭಯದಿಂದ ಬದುಕುತ್ತಿದ್ದಾರೆ.ಆದ್ದರಿಂದ ತಕ್ಷಣವೇ ಕಾಡಾನೆ ದಾಳಿಯಿಂದ ರೈತರಿಗಾದ ಬೆಳೆ ನಷ್ಟ ಪರಿಹಾರವನ್ನು ನೀಡಬೇಕು.ಜಮೀನು ಮತ್ತು ಗ್ರಾಮದೊಳಗೆ ಕಾಡಾನೆಗಳು ಬಾರದಂತೆ ತಡೆಯಬೇಕು. ತಕ್ಷಣವೇ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

ರಾಜ್ಯಾದ್ಯಂತ ವನ್ಯಜೀವಿ ಮತ್ತು ಮಾನವ ಸಂಘರ್ಷಗಳು ನಡೆಯುತ್ತಿದೆ.ಈ ಬಗ್ಗೆ ರೈತ ಸಂಘ ಸರ್ಕಾರದ ಜೊತೆ ಮಾತುಕತೆ ನಡೆಸಿ ಒತ್ತಾಯ ಮಾಡಿದರೂ ಸರ್ಕಾರ ಉದಾಸೀನತೆ ತೋರುತ್ತಿದೆ.ರೈತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿವೆ.ರಾಜ್ಯ ಸರ್ಕಾರ ತಕ್ಷಣವೇ ವನ್ಯಜೀವಿ ಸಂಘರ್ಷವನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಪ್ರಮುಖರಾದ ನಾಗರಾಜ್ ಎಂ.ಡಿ,ಪ್ರದೀಪ್ ಹೆಬ್ಬೂರು, ಸಂಪೋಡಿ ಪ್ರಭಾಕರ್, ಅವಿನಾಶ್, ಎಚ್.ಜಿ.ಶಿವಪ್ಪ, ರಾಜೇಶ್, ಜಗದೀಶ್, ಶೇಖರಪ್ಪ, ನಾಗರಾಜ್, ಮಂಜುನಾಥ್ ಸೇರಿದಂತೆ ನೂರಾರು ರೈತರು ಭಾಗಿಯಾಗಿದ್ದರು.

ಬೇಳೂರು ಗ್ರಾಮಸ್ಥರಾದ ಎಂ.ಡಿ.ನಾಗರಾಜ್ ಮಾತನಾಡಿ, ಪುರದಾಳು-ಬೇಳೂರು ಗ್ರಾಮಗಳಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದೆ. ರಾತ್ರಿವೇಳೆ ತೋಟಗಳಿಗೆ ನುಗ್ಗಿ ಕಾಡಾನೆಗಳು ಬೆಳೆಗಳನ್ನು ನಾಶ ಪಡಿಸುತ್ತಿವೆ.ಇತ್ತೀಚಿಗೆ ಹನುಮಂತಪ್ಪ ಎಂಬ ರೈತನನ್ನು ಕೊಂದು ಹಾಕಿದೆ.ಹಾಗಾಗಿ ಗ್ರಾಮಗಳಲ್ಲಿ ಕಾಡಾನೆ ಭೀತಿ ಹೆಚ್ಚಾಗಿದ್ದು,ಜನರು ಜೀವ ಭಯದಲ್ಲಿ ಜೀವನ ನಡೆಸುವಂತಾಗಿದೆ. ಅರಣ್ಯ ಇಲಾಖೆ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ,ಕೂಡಲೇ ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದರು.

ರಾಜ್ಯ ರೈತಸಂಘ ಅಧ್ಯಕ್ಷರಾದ ಎಚ್.ಆರ್ ಬಸವರಾಜಪ್ಪ ಮಾತನಾಡಿ, ಪುರದಾಳು - ಬೇಳೂರು ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಡಾನೆಗಳು ರೈತರ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ಹಾಳುಗೆಡವುತ್ತಿವೆ. ಕೆಲವು ದಿನಗಳ ಹಿಂದೆ ಪುರದಾಳು ಗ್ರಾಮದ ಬೀರಪ್ಪ, ರಾಜೇಶ್ ಎಂಬುವವರ ತೋಟಗಳಿಗೆ ನುಗ್ಗಿ ಅಡಕೆ ಗಿಡಗಳನ್ನು ನಾಶ ಮಾಡಿವೆ. ಅಲ್ಲದೇ ಮೊನ್ನೆ ಬೇಳೂರು ಗ್ರಾಮದ ರೈತ ನಾಗರಾಜ್ ಹಾಗೂ ಕಣ್ಣಪ್ಪ ಎಂಬುವವರ ತೋಟಗಳಿಗೆ ನುಗ್ಗಿ ಅಡಕೆ ಮತ್ತು ಬಾಳೆ ಬೆಳೆಗಳನ್ನು ನಾಶ ಮಾಡಿವೆ. ಕೂಡಲೇ ಅರಣ್ಯ ಇಲಾಖೆಯವರು ಕಾಡಾನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!