ಪಾಂಡವಪುರ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳು ಕೈಗೆ ಕಪ್ಪುಪಟ್ಟಿ ಧರಿಸಿ ಪಟ್ಟಣದಲ್ಲಿ ಗುರುವಾರ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಗ್ರಾಮ ಆಡಳಿತಾಧಿಕಾರಿಗಳಿಗೆ ತಳಮಟ್ಟದಲ್ಲಿ ಕೆಲಸ ಮಾಡಲು ಸಾಕಷ್ಟು ಒತ್ತಡ ಆಗುತ್ತಿದೆ. ಸರಕಾರ ಮೊಬೈಲ್ ನಲ್ಲಿ ಹಲವು ತಂತ್ರಾಂಶಗಳ ಮೂಲಕ ಹಲವು ಆ್ಯಪ್ಗಳನ್ನು ಅಪ್ಲೋಡ್ ಮಾಡಬೇಕಾಗಿರುವುದು ಸಾಕಷ್ಟು ಒತ್ತಡವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮಲೆಕ್ಕಾಧಿಕಾರಿಗಳಿಗೆ ಸುಸಜ್ಜಿತ ಕಟ್ಟಡವಿಲ್ಲ. ಗುಣಮಟ್ಟ ಮೊಬೈಲ್, ಗೂಗಲ್ ಕ್ರೋಮ್, ಪ್ರಿಂಟರ್, ಸ್ಕ್ಯಾನ್ ವ್ಯವಸ್ಥೆಗಳಿಲ್ಲ, ರಜೆ ದಿನಗಳಲ್ಲೂ ಸಹ ಕೆಲಸ ಮಾಡುವಂತೆ ಒತ್ತಡಗಳಿವೆ. ರಾತ್ರಿಯ ಸಮಯದಲ್ಲಿ ಅಧಿಕಾರಿಗಳು ವಿಸಿ ನಡೆಸುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ದೂರಿದರು.ಸರಕಾರ ಅಂತರ ಜಿಲ್ಲಾ ಪತಿ, ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡಬೇಕು, ಕೋರ್ಟ್ ಆದೇಶದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರ.ದ.ಸ./ರಾ.ನಿ ಹುದ್ದೆಗಳನ್ನು ಭರ್ತಿಮಾಡಬೇಕು ಎಂದು ಒತ್ತಾಯಿಸಿದರು.
ಧರಣಿಯಲ್ಲಿ ತಾಲೂಕು ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಎಂ.ರಮೇಶ್, ಪ್ರಧಾನ ಕಾರ್ಯದರ್ಶಿ ಸಂಜೀವ್ ರಾಥೋಡ್, ಉಪಾಧ್ಯಕ್ಷೆ ಗೀತಾ, ಗೌರವಾಧ್ಯಕ್ಷ ನಂಜುಂಡಸ್ವಾಮಿ, ಜಿಲ್ಲಾ ಖಜಾಂಚಿ ಪಿ.ವಿ.ದಿನೇಶ್ ಸೇರಿದಂತೆ ಹಲವು ನೌಕರರು ಭಾಗವಹಿಸಿದ್ದರು.