ಲೋಕಸಭೆ ಚುನಾವಣೆಯ ಬಹಿಷ್ಕಾರದ ಎಚ್ಚರಿಕೆ । ತಹಸೀಲ್ದಾರಿಗೆ ಮನವಿ
ಕನ್ನಡಪ್ರಭ ವಾರ್ತೆ ಕುಕನೂರುತಾಲೂಕಿನ ಇಟಗಿಯನ್ನು ಹೋಬಳಿ ಕೇಂದ್ರವನ್ನಾಗಿ ಶೀಘ್ರ ಘೋಷಣೆ ಮಾಡದಿದ್ದರೆ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ ಇಟಗಿ ಹೋಬಳಿ ಹೋರಾಟ ಸಮಿತಿಯ ಮುಖಂಡರು, ಬುಧವಾರ ಪಟ್ಟಣದಲ್ಲಿ ಪ್ರತಿಭಟಿಸಿದರು.
ಇಟಗಿ ಹೋಬಳಿ ಕೇಂದ್ರ ಹೋರಾಟ ಸಮಿತಿಯಿಂದ ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆ ಜರುಗಿತು.ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ಎಂ. ಹಳ್ಳಿ ಮಾತನಾಡಿ, ಇಟಗಿಯನ್ನು ಹೋಬಳಿ ಕೇಂದ್ರವನ್ನಾಗಿ ಘೋಷಣೆ ಮಾಡಬೇಕು. ಏಕೆಂದರೆ, ಇಟಗಿ ಗ್ರಾಮ ಹೋಬಳಿ ಕೇಂದ್ರಕ್ಕೆ ಬೇಕಾಗುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಹೊಂದಿದೆ. ಅಲ್ಲದೆ ಸುತ್ತುಮುತ್ತ ಸಾಕಷ್ಟು ಗ್ರಾಮಗಳಿದ್ದು ಅವುಗಳಿಗೆ ಅನುಕೂಲವಾಗಿದೆ. ಇಟಗಿ ಹೋಬಳಿ ಕೇಂದ್ರ ಮಾಡಬೇಕೆಂದು ೬ ಬಾರಿ ಮನವಿ ಸಲ್ಲಿಸಲಾಗಿದೆ. ಶಾಸಕ ಬಸವರಾಜ ರಾಯರೆಡ್ಡಿ ಅವರು, ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳು ಇಟಗಿ ಗ್ರಾಮವನ್ನು ಹೋಬಳಿ ಕೇಂದ್ರ ಮಾಡಲು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಮುಂದೆ ಬರುವ ಲೋಕಸಭೆ ಚುನಾವಣೆಯನ್ನು ಅನೇಕ ಗ್ರಾಮಗಳಲ್ಲಿ ಬಹಿಷ್ಕರಿಸುತ್ತೇವೆ. ತಹಸೀಲ್ದಾರ್ ಕಚೇರಿಯ ಮುಂದೆ ಧರಣಿ, ಸತ್ಯಾಗ್ರಹ, ಉಪವಾಸ ಸತ್ಯಾಗ್ರಹ ಮತ್ತು ರಸ್ತೆ ರೋಕ್ ಚಳವಳಿಯನ್ನು ಪ್ರಾರಂಭಿಸಲಾಗುವುದು ಎಚ್ಚರಿಸಿದರು.
ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಆರಂಭವಾದ ಮೆರವಣಿಗೆ ಪ್ರಮುಖ ವೃತ್ತ, ಬಸ್ ನಿಲ್ದಾಣ ಮೂಲಕ ವೀರಭದ್ರಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಲಾಯಿತು. ಇಟಗಿ, ಮಂಡಲಗೇರಿ, ಮನ್ನಾಪೂರ, ಬನ್ನಿಕೊಪ್ಪ, ಯರೇಹಂಚಿನಾಳ, ಚಿಕೇನಕೊಪ್ಪ, ನಿಂಗಾಪೂರ ಗ್ರಾಮದ ಮುಖಂಡರು ೨೬ ಟ್ರ್ಯಾಕ್ಟರ್ ಮೂಲಕ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಗ್ರೇಡ್-೨ ತಹಸೀಲ್ದಾರ್ ಮುರುಳಿಧರ ಕುಲಕರ್ಣಿ ಮನವಿ ಸ್ವೀಕರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ, ಇಟಗಿ ಹೋಬಳಿ ಕೇಂದ್ರ ಹೋರಾಟ ಸಮಿತಿ ಅಧ್ಯಕ್ಷ ಬಸನಗೌಡ್ರ ಪೋ. ಪಾಟೀಲ್, ಪ್ರಧಾನ ಕಾರ್ಯದರ್ಶಿ ವಜೀರಸಾಬ ತಳಕಲ್ಲ, ಗೌರವಾಧ್ಯಕ್ಷ ಶಿವಪ್ಪ ಗುಳಗಣ್ಣವರ್, ಮುಖಂಡರಾದ ಮಹಾದೇವಪ್ಪ ಹಳ್ಯಾಳ, ಉಮೇಶ ವೀರಾಪೂರ, ಮರ್ತುಜಸಾಬ್ ತಳಕಲ್ಲ, ವೀರಣ್ಣ ಸಜ್ಜನ್, ಗವಿಸಿದ್ದಪ್ಪ ಗುಳಗಣ್ಣವರ್, ಗ್ರಾಪಂ ಮಾಜಿ ಅಧ್ಯಕ್ಷ ಗವಿಸಿದ್ದಪ್ಪ ಮುದ್ದಾಬಳ್ಳಿ, ರಾಮು ಕೌದಿ, ಕಳಕಪ್ಪ ಕ್ಯಾದಗುಂಪಿ, ಬಸವಗೌಡ ಪಾಟೀಲ್, ವಿಜಯಕುಮಾರ ನಾಗನೂರು, ಸಾವಿತ್ರಿಮ್ಮ ತೆಗ್ಗಿನಮನಿ, ಪ್ರವೀಣ ಗುಳಗಣ್ಣವರ್, ಬಸವರಾಜ ಕಳ್ಳಿ, ರಾಜು ಹೊಂಬಳಿ, ಸಂಜೀವಪ್ಪ ಸಂಗಟಿ, ಲಕ್ಷ್ಮಣ ಕೋರಿ, ನೀಲರೆಡ್ಡೆಪ್ಪ ಘಟಿರೆಡ್ಡಿಹಾಳ, ರಾಮಣ್ಣ ಹಿರೇಮನಿ, ಬಸಪ್ಪ ಮಂಡಲಗೇರಿ, ಮಹೇಶ ಹಿರೇಮನಿ ಸೇರಿದಂತೆ ಅನೇಕರಿದ್ದರು.