ಅಂಗನವಾಡಿ ನೌಕರರ ಸೇವೆ ಖಾಯಂಗೊಳಿಸಲು ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Jul 13, 2026, 01:30 AM IST
ಫೋಟೋವಿವರ- (10ಎಚ್‌ಪಿಟಿ4) ಹೊಸಪೇಟೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಅಂಗನವಾಡಿ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು | Kannada Prabha

ಸಾರಾಂಶ

ಒಟಿಪಿ ಕಡ್ಡಾಯ ಮಾಡುವುದರಿಂದ ಲಕ್ಷಾಂತರ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಹೊಸಪೇಟೆ: ಅಂಗನವಾಡಿ ನೌಕರರ ಸೇವೆಯನ್ನು ಖಾಯಂಗೊಳಿಸಬೇಕು. ಅಂಗನವಾಡಿ ಕಾರ್ಯಕರ್ತರಿಗೆ ₹41 ಸಾವಿರ, ಸಹಾಯಕಿಯರಿಗೆ ₹35 ಸಾವಿರ ಕನಿಷ್ಠ ವೇತನ ನೀಡಬೇಕು. ₹18,000 ಮಾಸಿಕ ಪಿಂಚಣಿ ನೀಡುವುದು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಸಿಐಟಿಯು ಸಂಯೋಜಿತ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಗುಣಮಟ್ಟದ ಮೊಬೈಲ್ ಅಥವಾ 5ಜಿ ಡೇಟಾ ನೀಡದೇ ಪೋಷಣ್ ಟ್ರ‍್ಯಾಕರ್‌ನಂತಹ ಆನ್‌ಲೈನ್ ಕೆಲಸಗಳನ್ನು ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಒಟಿಪಿ ಕಡ್ಡಾಯ ಮಾಡುವುದರಿಂದ ಲಕ್ಷಾಂತರ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದರೊಂದಿಗೆ ಜನಗಣತಿ, ಬಿಎಲ್‌ಒನಂತಹ ಇಲಾಖೇತರ ಹೆಚ್ಚುವರಿ ಕೆಲಸಗಳ ಒತ್ತಡವನ್ನು ಅಂಗನವಾಡಿ ನೌಕರರ ಮೇಲೆ ಹೇರಲಾಗುತ್ತಿದೆ ಎಂದು ದೂರಿದರು.

2024ರಿಂದ ಇಂದಿನವರೆಗೆ ಗೌರವಧನದಲ್ಲಿ ಒಂದು ಪೈಸೆ ಹೆಚ್ಚಿಸದೇ ಕಾರ್ಮಿಕ ಕಾನೂನುಗಳ ವ್ಯಾಪ್ತಿಯಿಂದಲೂ ಇವರನ್ನು ಹೊರಗಿಡಲಾಗಿದೆ. ಈ ಹಿನ್ನೆಲೆಯಲ್ಲಿ ನೌಕರರನ್ನು ಬಿಎಲ್‌ಓ, ಎಸ್‌ಐಆರ್ ಹಾಗೂ ಇತರೆ ಸಮೀಕ್ಷಾ ಕೆಲಸಗಳಿಂದ ಸಂಪೂರ್ಣವಾಗಿ ಮುಕ್ತಗೊಳಿಸಬೇಕು. 50 ವರ್ಷ ಮೇಲ್ಪಟ್ಟವರನ್ನು ಮತ್ತು ತೀವ್ರ ಕಾಯಿಲೆ ಇರುವವರನ್ನು ಈ ಕೆಲಸಗಳಿಂದ ತಕ್ಷಣ ಬಿಡುಗಡೆ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಶುದ್ಧ ಕುಡಿಯುವ ನೀರು, ಗ್ಯಾಸ್ ಸಂಪರ್ಕ ಹಾಗೂ ಆಧುನಿಕ ಅಡುಗೆ ಉಪಕರಣಗಳನ್ನು ಒದಗಿಸಬೇಕು. ಬಾಡಿಗೆ ಕಟ್ಟಡಗಳ ಬಾಡಿಗೆಯನ್ನು ಮಹಾನಗರಗಳಲ್ಲಿ 15 ಸಾವಿರ ರೂ., ನಗರಗಳಲ್ಲಿ 10 ಸಾವಿರ ರೂ. ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 5 ಸಾವಿರ ರೂ. ಹೆಚ್ಚಿಸಬೇಕು. ವೈದ್ಯಕೀಯ ಪರೀಕ್ಷೆಗೊಳಪಡದ ಫೋರ್ಟಿಫೈಡ್’ ಆಹಾರದ ಬದಲಿಗೆ ತಾಜಾ ಸ್ಥಳೀಯ ಪೌಷ್ಟಿಕ ಆಹಾರವನ್ನೇ ನಿಯಮಿತವಾಗಿ ಒದಗಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಕೆ.ನಾಗರತ್ನ, ಸಂಘದ ಮುಖಂಡರಾದ ಸ್ವಪ್ನ ಕೆ ಎಂ, ಗೌರಮ್ಮ, ಜ್ಯೋತಿಶ್ವರಿ, ಶಕುಂತಲಾ, ಮಹಾಂತಮ್ಮ, ಸಿಐಟಿಯು ಮುಖಂಡರಾದ ಆರ್. ಎಸ್. ಬಸವರಾಜ, ಆರ್‌. ಭಾಸ್ಕರ ರೆಡ್ಡಿ, ಸ್ವಾಮಿ ಸೇರಿದಂತೆ ಇತರರು ​​​​ಅಂಗನವಾಡಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಸ್ಪೂರ್ತಿಯಾಗಬೇಕು: ಹರೀಶ್ ಪೂಂಜ
ಉಡುಪಿ ಜಿಲ್ಲಾಸ್ಪತ್ರೆಗೆ ಸಚಿವ ಖಾದರ್ ದಿಢೀರ್ ಭೇಟಿ