ಪಿಡಿಓ, ಆಡಳಿತಾಧಿಕಾರಿ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork |  
Published : Jul 24, 2026, 01:15 AM IST
ಮಾರನಬೀಡ ಗ್ರಾಪಂ ಎದುರು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ತಾಪಂ ಇಓ ಜಗದೀಶ ಕಮ್ಮಾರ ಅವರಿಗೆ ಮನವಿ ಸಲ್ಲಿಸುತ್ತಿರುವುದು. | Kannada Prabha

ಸಾರಾಂಶ

. ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಇಲ್ಲದ ಅವಧಿಯಲ್ಲಿ ಮಾರನಬೀಡ ಗ್ರಾಮ ಪಂಚಾಯಿತಿಯಲ್ಲಿ ₹೧೫ ಲಕ್ಷ ಅವ್ಯವಹಾರ ಆಗಿದೆ ಎಂದು ಆಪಾದಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಎರಡು ದಿನಗಳಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೋನುಬಾಯಿ ಮರಾಠೆ ಅವರ ಮೇಲೆ ಕ್ರಮ ಜರುಗಿಸುವ ಭರವಸೆಯನ್ನು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಟಿಸಿದರು.

ಹಾನಗಲ್ಲ: ಗ್ರಾಮ ಪಂಚಾಯತ್ ಆಡಳಿತ ಮಂಡಳಿ ಇಲ್ಲದ ಅವಧಿಯಲ್ಲಿ ಮಾರನಬೀಡ ಗ್ರಾಮ ಪಂಚಾಯಿತಿಯಲ್ಲಿ ₹೧೫ ಲಕ್ಷ ಅವ್ಯವಹಾರ ಆಗಿದೆ ಎಂದು ಆಪಾದಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಎರಡು ದಿನಗಳಲ್ಲಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸೋನುಬಾಯಿ ಮರಾಠೆ ಅವರ ಮೇಲೆ ಕ್ರಮ ಜರುಗಿಸುವ ಭರವಸೆಯನ್ನು ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಟಿಸಿದರು.

ಗುರುವಾರ ಬೆಳಗ್ಗೆಯಿಂದಲೇ ಅಧಿಕಾರಿಗಳಿಗೆ ಸೂಚನೆ ನೀಡಿದಂತೆ ಗ್ರಾಪಂ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಈ ಗ್ರಾಮ ಪಂಚಾಯತಿಯ ೫ ಗ್ರಾಮಗಳಲ್ಲಿ ಒಂದೂ ಅಭಿವೃದ್ಧಿ ಕಾಮಗಾರಿ ನಡೆಯದೇ ಕೇವಲ ಕುಡಿಯುವ ನೀರಿನ ಪೈಪ್‌ಲೈನ್ ರಿಪೇರಿ ಹಾಗೂ ಚರಂಡಿ ಸ್ವಚ್ಛತೆಯ ಹೆಸರಿನಲ್ಲಿಯೇ ₹೧೨ ಲಕ್ಷ ನಷ್ಟು ಖರ್ಚು ಹಾಕಲಾಗಿದೆ. ಕಸ ವಿಲೇವಾರಿ ವಾಹನ ದುರಸ್ತಿಯಲ್ಲಿದ್ದು ನಿಂತಿದ್ದರೂ ಕೂಡ ಅದರ ಹೆಸರಿನಲ್ಲಿ ಇಂಧನಕ್ಕೆ ಖರ್ಚು ಹಾಕಲಾಗಿದೆ. ಯಾವುದೇ ಕಾಮಗಾರಿಗಾಗಿ ಕಾನೂನುಬದ್ಧವಾಗಿ ಕ್ರಿಯಾಯೋಜನೆ ಇಲ್ಲದೆ, ಮಾಡಿದ ಕೆಲಸಕ್ಕೆ ಅಧಿಕೃತ ರಸೀದಿಗಳೂ ಇಲ್ಲದೆ ಹಣ ಖರ್ಚು ಹಾಕಲಾಗಿದೆ. ಅಲ್ಲದೆ ಗಟಾರ ಸ್ವಚ್ಛತೆ ಸೇರಿ ಬೇರೆ ಬೇರೆ ಕೆಲಸದ ೫೬ ಜನರ ಹೆಸರಿನಲ್ಲಿ ಖರ್ಚು ಹಾಕಿದ್ದು ಅವರಿಗೆ ಚೆಕ್ ನೀಡಿ ಹಣ ವಾಪಸ್ ಪಡೆಯಲಾಗಿದೆ ಎಂದು ಆಪಾದಿಸಿದರು.

ಕೂಡಲೇ ಗ್ರಾಪಂ ಅಭಿವೃದ್ಧಿ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಸುಳ್ಳು ಲೆಕ್ಕ ತೋರಿಸಿ ಖರ್ಚು ಹಾಕಿದ ಹಣ ಪಂಚಾಯಿತಿಗೆ ಪರತ್ ಭರಣಾ ಮಾಡಬೇಕು. ಈ ಅವ್ಯವಹಾರದಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸದ ಆಡಳಿತಾಧಿಕಾರಿಯನ್ನೂ ಅಮಾನತು ಮಾಡಬೇಕು. ಪಿಡಿಓ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಹಾಗೂ ಈ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಸಿ.ಟಿ. ಸುರೇಶ ಅವರು ಯಾವುದೇ ಬಿಲ್‌ಗಳಿಗೆ ಸಹಿ ಹಾಕುವಾಗ ಕಾಮಗಾರಿ ಪರಿಶೀಲಿಸದೆ ಚೆಕ್‌ಗಳಿಗೆ ಸಹಿ ಹಾಕಿರುವುದು ಕೂಡ ಇಂಥ ಅಪರಾಧಕ್ಕೆ ಕಾರಣವಾಗಿದೆ. ಪಿಡಿಓ ಹಾಗೂ ಆಡಳಿತಾಧಿಕಾರಿಗಳನ್ನು ಅಮಾನತುಗೊಳಿಸಬೇಕು. ಅಲ್ಲದೆ ಈಗ ತನಿಖೆ ಕೈಗೊಂಡಿರುವ ತನಿಖಾ ತಂಡದ ಮೇಲೆ ನಮಗೆ ವಿಶ್ವಾಸವಿಲ್ಲ. ಮತ್ತೊಮ್ಮೆ ಸರಿಯಾದ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.

ಗ್ರಾಮದ ಬಸವಣ್ಣೆಪ್ಪ ಸಂಸಿ, ಪ್ರಕಾಶ ಕೋಳೂರ, ಹನುಮಂತಪ್ಪ ಡುಮ್ಮಣ್ಣನವರ, ಅಶೋಕ ಸಂಸಿ, ಪುಟ್ಟಪ್ಪ ನರೇಗಲ್ಲ, ಮಹಾಂತೇಶ ನಿಸೀಮಣ್ಣನವರ, ಬಸವಂತಪ್ಪ ಕಾಶಂಬಿ, ಮಹಾಂತೇಶ ಪೂಜಾರ ಸೇರಿದಂತೆ ೫ ಗ್ರಾಮಗಳ ಗ್ರಾಮಸ್ಥರು ಪ್ರತಿಭಟನೆಯಲ್ಲಿದ್ದರು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ್ ಇಓ ಜಗದೀಶ ಕಮ್ಮಾರ, ಈಗಾಗಲೇ ವಿವಿಧ ಅಧಿಕಾರಿಗಳಾದ ಪರಶುರಾಮ ಪೂಜಾರ, ಚನ್ನವೀರಪ್ಪ ರೂಢಗಿ, ಚಂದ್ರಶೇಖರ ಸೂಡಂಬಿ ಅವರಿಂದ ತನಿಖೆ ನಡೆಸಿ ವರದಿ ಪಡೆಯಲಾಗಿದೆ. ಒಂದೆರಡು ದಿನಗಳಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಅವರಿಗೆ ವರದಿ ಸಲ್ಲಿಸಿದ ನಂತರ ಈ ಬಗ್ಗೆ ಕ್ರಮವನ್ನು ಪ್ರಕಟಿಸಲಿದ್ದಾರೆ. ಗ್ರಾಪಂನಲ್ಲಿ ಅವ್ಯವಹಾರ, ಕಾನೂನು ಬಾಹಿರ ಖರ್ಚು ಹಾಕಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಉಳಿದ ಕ್ರಮವನ್ನು ಹಿರಿಯ ಅಧಿಕಾರಿಗಳು ಪ್ರಕಟಿಸಲಿದ್ದಾರೆ ಎಂದು ತಿಳಿಸಿದರು.

ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಪ್ರತಿಭಟನೆ ನಡೆಯಿತು. ಆಡೂರು ಪೊಲೀಸ್ ಠಾಣೆಯಿಂದ ಭದ್ರತೆ ಒದಗಿಸಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ, ಹೊಸಪೇಟೆಯಲ್ಲಿ ತಮಟೆ ಚಳವಳಿ
ಬರ ನಿರ್ವಹಣೆ ಸಮರ್ಪಕವಾಗಿ ಮಾಡಿ: ಕೆ. ನೇಮರಾಜನಾಯ್ಕ