ಕನ್ನಡಪ್ರಭ ವಾರ್ತೆ ಹಾಸನ ಮನೆ ನಿರ್ಮಿಸಿಕೊಂಡಿರುವ ಅನುಭವದಾರರಿಗೆ ಪರಿಹಾರದ ಹಣ ನೀಡಿ, ಆದೇಶ ಗಾಳಿಗೆ ತೂರಿ ಕರ್ತವ್ಯ ಲೋಪ ಎಸಗಿರುವ ಬೇಲೂರು ಎ.ಇ.ಇ. ಎಂಜಿನಿಯರ್ ಅವರನ್ನ ಸೇವೆಯಿಂದ ವಜಾಗೊಳಿಸಲು ಆಗ್ರಹಿಸಿ ತಿರುಮಲನಹಳ್ಳಿ ಗ್ರಾಮಸ್ಥರು ಶನಿವಾರ ಡೀಸಿ ಕಚೇರಿ ಮುಂದೆ ಪ್ರತಿಭಟಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರದ ಅಧೀನ ಕಾರ್ಯದರ್ಶಿಗಳಾದ (ಕಂದಾಯ ಇಲಾಖೆ) ಶ್ರೀನಿವಾಸ್ರವರು ಮನೆ ನಿರ್ಮಿಸಿಕೊಂಡಿರುವ ಅನುಭವದಾರರಿಗೆ ಪರಿಹರದ ಹಣವನ್ನು ಆರ್.ಟಿ.ಜಿ.ಎಸ್ ಮಾಡಿ ತಕ್ಷಣ ಅವರ ಮನೆ ಮಾಲೀಕರ ಖಾತೆಗೆ ಹಣ ಹಾಕಬೇಕೆಂದು ಲಿಖಿತ ರೂಪದಲ್ಲಿ ಆದೇಶ ಮಾಡಿದ್ದರೂ ಸಹ ಆದೇಶವನ್ನು ಗಾಳಿಗೆ ತೂರಿ ಕರ್ತವ್ಯಲೋಪ ಎಸಗಿರುವ ಜಾತಿವಾದಿ ಬೇಲೂರು ಎ.ಇ.ಇ (ಎತ್ತಿನಹೊಳೆ ಎಂಜಿನಿಯರ್ ) ಪ್ರಕಾಶ್ ಮತ್ತು ಎಂಜಿನಿಯರ್ ಈರಯ್ಯರವರನ್ನು ಕೂಡಲೆ ಸೇವೆಯಿಂದ ವಜಾಗೊಳಿಸಬೇಕೆಂದರು.
ಇತ್ತೀಚೆಗೆ ಒಂದು ಸಾಕು ನಾಯಿಯನ್ನು ಸಹ ಇವರ ಕೆಲಸಗಾರರು ವಾಹನದಿಂದ ಡಿಕ್ಕಿ ಹೊಡೆಸಿ ಸಾಯಿಸಿರುತ್ತಾರೆ. ಹೀಗಿರುವಾಗ ವಾಸದ ಮನೆಯ ಪಕ್ಕದಲ್ಲಿ ಡೈನಾಮೆಟ್ ಸ್ಫೋಟಕವನ್ನು ಸಿಡಿಸುತ್ತಾರೆ. ಇದರಿಂದ ಚಿಕ್ಕ ಮಕ್ಕಳು ವೃದ್ಧರು ಓಡಾಡಲು ತುಂಬಾ ಭಯಪಡುತ್ತಿರುತ್ತಾರೆ ಮತ್ತು ವಾರದಲ್ಲಿ ೪ ರಿಂದ ೩ ಬಾರಿ ಸಿಡಿಮದ್ದಿನಿಂದ ಸ್ಫೋಟಿಸುತ್ತಾರೆ. ಇದರಿಂದ ಯಾವ ಸಂದರ್ಭದಲ್ಲಾದರೂ ಅನಾಹುತ ಆಗುವ ಸಂಭವಿರುತ್ತದೆ. ಆದ್ದರಿಂದ ವಾಸದ ಮನೆಗಳಿಗೆ ಹಣವನ್ನು ಹಾಕಿ (ಪುರ್ನವಸತಿ ಕಲ್ಪಿಸಿ )ನಂತರ ಕೆಲಸ ಮಾಡಬೇಕು ಮತ್ತು ಉದ್ದೇಶ ಪೂರ್ವಕವಾಗಿ ಪರಿಶಿಷ್ಟ ಜಾತಿಯ ಭೂಮಿಯನ್ನು ಯೋಜನೆಗೆ ಬಳಸಿಕೊಂಡಿರುತ್ತಾರೆ. ಕಾಮಗಾರಿ ಮಾಡಲು ನಾವು ಅಡ್ಡಿಪಡಿಸುವುದಿಲ್ಲ. ಕೂಡಲೇ ಅನುಭವದಲ್ಲಿರುವ ಮನೆ ಮಾಲೀಕರಿಗೆ ತಕ್ಷಣ ಪರಿಹಾರ ಹಣವನ್ನು ಖಾತೆಗೆ ಹಾಕಿ ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳನ್ನ ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ತಿರುಮನಹಳ್ಳಿ ಗ್ರಾಮದ ಶಿವಕುಮಾರ್, ರವೀಂದ್ರ, ನಂದಿನಿ, ಚೈತ್ರ, ಹರೀಶ್, ಅಂಬರೀಶ್, ಹೇಮಲತಾ, ನಿತಿನ್, ಕುಮಾರ್ ತ್ಯಾಗಿ, ಕಮಲಮ್ಮ, ಇತರರು ಉಪಸ್ಥಿತರಿದ್ದರು.