ಸವಣೂರು: 15 ದಿನಗಳ ಒಳಗೆ ತಮಗೆ ಹಕ್ಕುಪತ್ರ ನೀಡದಿದ್ದರೆ ಪ್ರತಿಭಟನೆ ನಡೆಸುವುದಾಗಿ ಪಟ್ಟಣದ ದಂಡಿನಪೇಟೆ ವ್ಯಾಪ್ತಿಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
ಆ ಜಾಗದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಲವು ಕುಟುಂಬಗಳು 60 ವರ್ಷಗಳಿಂದ ವಾಸವಿರುವ ಬಗ್ಗೆ ದಾಖಲೆಗಳಿವೆ. ಎಲ್ಲ ನಿವಾಸಿಗಳೂ ಅಕ್ರಮ ಸಕ್ರಮ ಬಗ್ಗೆ ಸವಣೂರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮೊದಲೇ ಅರ್ಜಿ ಸಲ್ಲಿಸಿದ್ದಾರೆ.
ಅಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಸರ್ವೇ ನಡೆಸಲು ಬರುವುದಾಗಿ 2003ರಲ್ಲಿ ಕಂದಾಯ ಇಲಾಖೆ ಹಾಗೂ ಉಪ ವಿಭಾಗದ ಅಧಿಕಾರಿಗಳು ನೋಟಿಸ್ ನೀಡಿರುವ ದಾಖಲೆ ಇದೆ. ಆದರೆ ಈಗ ಪ್ರಭಾವಿ ವ್ಯಕ್ತಿಗಳ ಜತೆ ಅಧಿಕಾರಿಗಳು ಸೇರಿಕೊಂಡು ಸರ್ಕಾರಿ ಆಸ್ತಿಗಳನ್ನು ಬೇರೆಯವರ ಪಾಲು ಮಾಡಲು ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.ಈಗಾಗಲೇ ಅಲ್ಲಿನ ಕೆಲವು ವ್ಯಕ್ತಿಗಳು ಕಾಂಪೌಂಡ್ ಗೋಡೆ ನಿರ್ಮಿಸಿದ್ದಾರೆ. ಅದರಿಂದ ಅಲ್ಲಿಯ ನಿವಾಸಿಗಳಿಗೆ ತೊಂದರೆಯಾಗಿದೆ. ತಾಲೂಕು ದಂಡಾಧಿಕಾರಿ ಸ್ಥಳ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗೆ ಸರಿಯಾದ ಮಾಹಿತಿ ನೀಡಬೇಕು. ಅಲ್ಲಿನ ನಿವಾಸಿಗಳಿಗೆ ತೊಂದರೆ ಆಗದಂತೆ ಕಾನೂನು ಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.15 ದಿನಗಳಲ್ಲಿ ನಮಗೆ ಹಕ್ಕುಪತ್ರ ನೀಡದಿದ್ದರೆ ಸವಣೂರು ಕಂದಾಯ ಇಲಾಖೆ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಕೈಗೊಳ್ಳುತ್ತೇವೆ ಎಂದು ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.ತಾಲೂಕು ದಂಡಾಧಿಕಾರಿ ಭರತರಾಜ ಕೆ.ಎನ್. ಮನವಿ ಸ್ವೀಕರಿಸಿದರು.ಮಾಹಿತಿ ಹಕ್ಕು ಹೋರಾಟಗಾರ ಸಂದೀಪ್ ಫಕೀರಪ್ಪ ಬಾಬಣಿ, ಜಿಲಾನಿ ಬಂಕಾಪುರ, ಹೆಗ್ಗಪ್ಪ ಕಲಾಲ್, ಜಹೀರ್ ಅಹ್ಮದ್ ಬಂಕಾಪುರ, ಈರಪ್ಪ ತಗ್ಗಿಹಳ್ಳಿ, ನಿರ್ಮಲಾ ಬಂಕಾಪುರ, ಮೋದಿನಸಾಬ್ ಮರ್ದಾನಿ, ಶರಣಪ್ಪ ತೆಗ್ಗಿಹಳ್ಳಿ, ಚೆನ್ನಪ್ಪ ಲಟ್ಟನ್ನವರ್, ರೇಣುಕಾ ಲಠಣ್ಣವರ್, ಮಹಮ್ಮದ ಜವಳಿ, ರತ್ನವ್ವ ಚಲವಾದಿ, ಶಶಿಕಲಾ ಹಿರೇಮಠ, ಶಿವಪ್ಪ ತಗ್ಗಿಹಳ್ಳಿ, ಆನಂದ್ ಕರ್ನೂಲಿ, ಪುಟ್ಟಪ್ಪ ಬಂಕಾಪುರ, ಜಿಲಾನಿ ಬಳ್ಳಾರಿ ಉಪಸ್ಥಿತರಿದ್ದರು.